ಸೀತಾಂಗೋಳಿ ಸೌತ್ ಇಂಡಿಯನ್ ಬ್ಯಾಂಕ್ಗೆ ಹಿನ್ನಡೆ: ಗ್ರಾಹಕರ ಪರ ಮಹತ್ವದ ತೀರ್ಪು ನೀಡಿದ ಜಿಲ್ಲಾ ಗ್ರಾಹಕ ಆಯೋಗ!

ಕಾಸರಗೋಡು: ಗ್ರಾಹಕರ ಖಾತೆಯಿಂದ ಕಡಿತಗೊಳಿಸಿದ ಮೊತ್ತದ ವಿವಾದಕ್ಕೆ ಸಂಬಂಧಿಸಿದಂತೆ ಸೌತ್ ಇಂಡಿಯನ್ ಬ್ಯಾಂಕ್ನ ಸೀತಾಂಗೋಳಿ ಶಾಖೆ ವಿರುದ್ಧ ದಾಖಲಾದ ದೂರಿನಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಗ್ರಾಹಕ ರಾಜು ಸ್ಟೀಫನ್ ಡಿ’ಸೋಜಾ ಅವರ ಪರವಾಗಿ ಮಹತ್ವದ ತೀರ್ಪು ನೀಡಿದೆ. ಖಾತೆಯಿಂದ ಕಡಿತಗೊಳಿಸಿದ ಮೊತ್ತವನ್ನು ಮರುಪಾವತಿಸುವುದರ ಜೊತೆಗೆ, ಮಾನಸಿಕ ಯಾತನೆಗೆ ಪರಿಹಾರ ಮತ್ತು ವ್ಯಾಜ್ಯದ ವೆಚ್ಚವನ್ನು ಪಾವತಿಸುವಂತೆ ಬ್ಯಾಂಕ್ಗೆ ಆಯೋಗ ಆದೇಶಿಸಿದೆ.

ದೂರಿನ ಪ್ರಕಾರ, ರಾಜು ಸ್ಟೀಫನ್ ಡಿ’ಸೋಜಾ ಅವರು 2022ರಲ್ಲಿ ಸೀತಾಂಗೋಳಿ ಸೌತ್ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಚಾಲ್ತಿ ಖಾತೆ ತೆರೆದಿದ್ದು, ಬ್ಯಾಂಕ್ ನಿಗದಿಪಡಿಸಿದ್ದ ಕನಿಷ್ಠ ಬಾಕಿಯನ್ನು ನಿರಂತರವಾಗಿ ಕಾಯ್ದುಕೊಂಡಿದ್ದರು. ಆದರೆ, ಬ್ಯಾಂಕ್ ಅವರ ಖಾತೆಯಿಂದ SMS ಸೇವಾ ಶುಲ್ಕ ಹೆಸರಿನಲ್ಲಿ ಹಣವನ್ನು ಕಡಿತಗೊಳಿಸಿತ್ತು. ಈ ಕಡಿತದಿಂದ ಖಾತೆಯಲ್ಲಿದ್ದ ಬಾಕಿ ನಿಗದಿತ ಕನಿಷ್ಠ ಮಿತಿಗಿಂತ ಕಡಿಮೆಯಾಗಿದ್ದು, ಬಳಿಕ ಕನಿಷ್ಠ ಬಾಕಿ ಕಾಯ್ದುಕೊಳ್ಳದ ಕಾರಣ ದಂಡವನ್ನು ವಿಧಿಸಲಾಗಿತ್ತು. ಇದರಿಂದ ತಮಗೆ ಆರ್ಥಿಕ ನಷ್ಟವಾಗಿದ್ದು, ಅನಗತ್ಯ ಮಾನಸಿಕ ತೊಂದರೆ ಅನುಭವಿಸಬೇಕಾಯಿತು ಎಂದು ಡಿ’ಸೋಜಾ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಆಯೋಗ, ಗ್ರಾಹಕರ ಖಾತೆಯಿಂದ ಯಾವುದೇ ಮೊತ್ತವನ್ನು ಕಡಿತಗೊಳಿಸುವ ಮೊದಲು ಅಥವಾ ನಂತರ ಅದರ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದು ಬ್ಯಾಂಕಿನ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದೆ. ಎರಡೂ ಪಕ್ಷಗಳ ವಾದ ಆಲಿಸಿದ ಬಳಿಕ, ಆಯೋಗವು ಗ್ರಾಹಕರ ಪರವಾಗಿ ತೀರ್ಪು ನೀಡಿದ್ದು, ಕಡಿತಗೊಳಿಸಿದ ಮೊತ್ತವನ್ನು ಮರುಪಾವತಿಸುವಂತೆ, ಮಾನಸಿಕ ಯಾತನೆಗೆ ಪರಿಹಾರ ನೀಡುವಂತೆ ಹಾಗೂ ಪ್ರಕರಣದ ವೆಚ್ಚವನ್ನು ಭರಿಸುವಂತೆ ಸೌತ್ ಇಂಡಿಯನ್ ಬ್ಯಾಂಕ್ಗೆ ನಿರ್ದೇಶಿಸಿದೆ. ಪ್ರಕರಣದಲ್ಲಿ ದೂರುದಾರ ರಾಜು ಸ್ಟೀಫನ್ ಡಿ’ಸೋಜಾ ಅವರ ಪರವಾಗಿ ಕಾಸರಗೋಡಿನ ಹಿರಿಯ ವಕೀಲ ಥಾಮಸ್ ಡಿ’ಸೋಜಾ ವಾದ ಮಂಡಿಸಿದರು.