ಸಿಕ್ಕಿಂ ಸುರಂಗ ದುರಂತ: ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ; ಮೃತರ ಸಂಖ್ಯೆ 20ಕ್ಕೆ ಏರಿಕೆ!

ಗ್ಯಾಂಗ್ಟಕ್: ಸಿಕ್ಕಿಂನ ನಾಮ್ಮಿ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಕುಸಿದುಬಿದ್ದ ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮೃತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದ ಕಾರ್ಮಿಕರ ಪತ್ತೆಯಲ್ಲಿ ರಕ್ಷಣಾ ತಂಡಗಳಿಗೆ ಯಾವುದೇ ಪ್ರಮುಖ ಪ್ರಗತಿ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ಎನ್ಎಚ್ಪಿಸಿ ತೀಸ್ತಾ ಹಂತ ಜಲವಿದ್ಯುತ್ ಯೋಜನೆಯ ನಿರ್ಮಾಣ ಹಂತದಲ್ಲಿರುವ ಸುರಂಗದಲ್ಲಿ ಈ ಘಟನೆ ಸಂಭವಿಸಿದೆ. ಎನ್ಎಚ್ಪಿಸಿ ಪ್ರಕಾರ, ಜುಲೈ 20ರಂದು ಮಧ್ಯಾಹ್ನ 1.04ಕ್ಕೆ ಬಂಡೆಗಳ ನಡುವೆ ಸಿಲುಕಿದ್ದ ಮೀಥೇನ್ ಅನಿಲವು ಹಠಾತ್ತಾಗಿ ಸ್ಫೋಟಗೊಂಡಾಗ ಈ ಅಪಘಾತ ಸಂಭವಿಸಿದೆ. ಈ ಸ್ಫೋಟವು ತೀವ್ರ ಶಾಖ, ಜ್ವಾಲೆ ಮತ್ತು ದಟ್ಟವಾದ ವಿಷಕಾರಿ ಹೊಗೆಯನ್ನು ಉಂಟುಮಾಡಿದ ಪರಿಣಾಮ ಈ ಘಟನೆ ಸಂಭವಿಸಿದೆ.

ಇತ್ತೀಚಿನ ವರದಿ ಪ್ರಕಾರ, ಮೃತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. 13 ಮೃತದೇಹಗಳನ್ನು ಹೊರತೆಗೆದು ಗುರುತಿಸಲಾಗಿದ್ದು, ಇನ್ನು ಏಳು ಮೃತದೇಹಗಳು ಒಳಗಡೆ ಪತ್ತೆಯಾಗಿವೆ. ಐದು ಮಂದಿ ಕಾರ್ಮಿಕರು ಇನ್ನೂ ನಾಪತ್ತೆಯಾಗಿದ್ದಾರೆ. ಪತ್ತೆಯಾದ ಹಲವು ಮೃತದೇಹಗಳು ತೀವ್ರವಾಗಿ ಸುಟ್ಟುಹೋಗಿವೆ.
ತುರ್ತು ರಕ್ಷಣಾ ಸಂಸ್ಥೆಗಳು ಇನ್ನು ಏಳು ಮೃತದೇಹಗಳನ್ನು ಪತ್ತೆ ಹಚ್ಚಿದ್ದು, ಅವುಗಳನ್ನು ಹೊರತೆಗೆಯಲು ಸಾಧ್ಯವಾಗಿಲ್ಲ. ಸುರಂಗ ಮಾರ್ಗವು ಕೆಸರು ಮತ್ತು ನೀರಿನಿಂದ ಜಲಾವೃತಗೊಂಡಿದ್ದು, ವಿಷಕಾರಿ ಹೊಗೆಯಿಂದಾಗಿ ರಕ್ಷಣಾ ಸಿಬ್ಬಂದಿ ಒಳಗಡೆ ಆಮ್ಲಜನಕ ಉಪಕರಣಗಳನ್ನು ಬಳಸಬೇಕಾಗಿ ಬಂದಿದೆ.
ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯಿಸಿದ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ನ ಗಣಿ ರಕ್ಷಣಾ ತಂಡದ ಸೂಪರಿಂಟೆಂಡೆಂಟ್ ಅಭಿಜಿತ್ ಕುಂಡು, “ನಾವು ಕಣ್ಣಿಗೆ ಕಾಣಿಸುತ್ತಿರುವ ಮೃತದೇಹಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದೇವೆ. ಈ ಹಂತದಲ್ಲಿ ಇನ್ನೂ ಎಷ್ಟು ಜನರು ಸುರಂಗದ ಆಳದಲ್ಲಿ ಸಿಲುಕಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ನಮಗೆ ಕಾಣಿಸುತ್ತಿರುವ ಮೃತದೇಹಗಳನ್ನು ಹೊರತೆಗೆಯುವುದೇ ನಮ್ಮ ತಕ್ಷಣದ ಆದ್ಯತೆಯಾಗಿದೆ, ಆದರೆ ನಿಂತಿರುವ ನೀರಿನಿಂದಾಗಿ ಸಂಚರಿಸುವುದು ಅತ್ಯಂತ ಕಷ್ಟಕರವಾಗಿದೆ” ಎಂದು ತಿಳಿಸಿದ್ದಾರೆ.
NDRF, SDRF, ಭಾರತೀಯ ಸೇನೆ, ಸಿಕ್ಕಿಂ ಪೊಲೀಸ್, ಡಿಜಿಎಂಎಸ್, ಜಿಲ್ಲಾಡಳಿತ, ಎನ್ಎಚ್ಪಿಸಿ, ಪಿಇಎಲ್, ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್, ವೆಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ ಮತ್ತು ಸ್ಥಳೀಯ ಸ್ವಯಂಸೇವಕರು ಸೇರಿದಂತೆ ಹಲವು ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.