ವೆನೆಜುವೆಲಾದಿಂದ ಬಂದ ನಾವಿಕನ ಮೃತದೇಹದಲ್ಲಿ ಅಂಗಾಂಗಗಳೇ ನಾಪತ್ತೆ

ನವದೆಹಲಿ: ವೆನೆಜುವೆಲಾ ಕರಾವಳಿಯಲ್ಲಿ ನಿಗೂಢವಾಗಿ ಮೃತಪಟ್ಟ ಭಾರತೀಯ ನಾವಿಕನೊಬ್ಬನ ಮೃತದೇಹ ಭಾರತಕ್ಕೆ ಬಂದಿಳಿದಾಗ, ಅದರಲ್ಲಿದ್ದ ಪ್ರಮುಖ ಅಂಗಾಂಗಗಳೇ ನಾಪತ್ತೆಯಾಗಿರುವ ಅತ್ಯಂತ ಆಘಾತಕಾರಿ ಮತ್ತು ಭೀಕರ ಘಟನೆ ಬೆಳಕಿಗೆ ಬಂದಿದೆ.

33 ವರ್ಷದ ರಾಕೇಶ್ ಚೌಹಾಣ್ ಹೃದಯಾಘಾತದಿಂದ ಮೇ ತಿಂಗಳಲ್ಲಿ ಸಾವನ್ನಪ್ಪಿದ್ದರು. ಭಾರತೀಯ ನಾವಿಕನ ಮೃತದೇಹವನ್ನು ದಕ್ಷಿಣ ಅಮೆರಿಕದಿಂದ ಭಾರತಕ್ಕೆ ತರಲಾಯಿತು. ಆದರೀಗ, ರಾಕೇಶ್ ಸಾವಿನ ಸುತ್ತ ನಿಗೂಢತೆ ತೀವ್ರಗೊಂಡಿದೆ. ರಾಕೇಶ್ ಚೌಹಾಣ್ ಅವರ ಮೆದುಳು, ಹೃದಯ ಮತ್ತು ಶ್ವಾಸಕೋಶಗಳು ಸೇರಿದಂತೆ ದೇಶದ ಹಲವಾರು ಅಂಗಗಳು ಕಾಣೆಯಾಗಿವೆ ಎಂದು ಅವರ ಕುಟುಂಬ ಆರೋಪಿಸಿದೆ. ಹೀಗಾಗಿ, ನಾವಿಕನ ಸಾವಿನ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಭಾರತೀಯ ನಾವಿಕರ ಸಂಘಗಳ ಒಕ್ಕೂಟ (FSUI) ಒತ್ತಾಯಿಸಿದೆ.
ಎಫ್ಎಸ್ಯುಐ ತನ್ನ ಎಕ್ಸ್ ಖಾತೆ, ಚೌಹಾಣ್ ಅವರ ಶವವನ್ನು ಯಾವುದೇ ಶವಪರೀಕ್ಷೆ ವರದಿ ಅಥವಾ ವೆನೆಜುವೆಲಾದ ಅಧಿಕಾರಿಗಳಿಂದ ವಿವರಗಳಿಲ್ಲದೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿರುವ ಅವರ ಹುಟ್ಟೂರಿಗೆ ಕಳುಹಿಸಲಾಗಿದೆ ಎಂದು ತಿಳಿಸಿದೆ.
ʼಕುಟುಂಬದವರು ಮರು ಶವಪರೀಕ್ಷೆಗೆ ಒತ್ತಾಯಿಸಿದರು. ಭಾರತದಲ್ಲಿ ನಡೆಸಿದ ಅಧಿಕೃತ ಮರಣೋತ್ತರ ವರದಿಯು ಭಯಾನಕ ಸತ್ಯವನ್ನು ಬಹಿರಂಗಪಡಿಸುತ್ತದೆ. ದೇಹದಲ್ಲಿ ಒಂದೇ ಒಂದು ಅಂಗವೂ ಕಂಡುಬಂದಿಲ್ಲ. ಮೆದುಳು, ಹೃದಯ, ಎರಡೂ ಶ್ವಾಸಕೋಶಗಳು, ಯಕೃತ್ತು, ಮೂತ್ರಪಿಂಡಗಳು, ಗುಲ್ಮ, ಮೇದೋಜೀರಕ ಗ್ರಂಥಿ, ಕರುಳುಗಳು, ಥೈರಾಯ್ಡ್, ಹಯಾಯ್ಡ್, ಲಾರಿಂಕ್ಸ್ ಮತ್ತು ಶ್ವಾಸನಾಳ ಎಲ್ಲವೂ ಕಾಣೆಯಾಗಿದೆʼ ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿದೆ.
ದೇಹದ ಮೇಲೆ ವ್ಯಾಪಕವಾದ ಹೊಲಿಗೆ ಹಾಕಲಾಗಿತ್ತು (ಕುತ್ತಿಗೆಯಿಂದ ಪ್ಯುಬಿಕ್ ಸಿಂಫಿಸಿಸ್ಗೆ 22 ಹೊಲಿಗೆಗಳು ಹಾಗೂ ಒಂದು ಕಿವಿಯಿಂದ ಮತ್ತೊಂದು ಕಿವಿಗೆ 21 ಹೊಲಿಗೆಗಳು). ಮರಣೋತ್ತರ ಗಾಯಗಳು ಕಂಡುಬಂದಿಲ್ಲ. ದೇಹವನ್ನು ಸುಮಾರು ಒಂದು ತಿಂಗಳ ಕಾಲ ಫ್ರೀಜ್ನಲ್ಲಿ ಇಡಲಾಗಿತ್ತು. ಸಾವಿಗೆ ಕಾರಣ ನಿರ್ಧರಿಸಲಾಗಲಿಲ್ಲ ( ದೇಹದಲ್ಲಿ ಯಾವ ಅಂಗಗಳೂ ಇಲ್ಲ) ಎಂದು ಪೋಸ್ಟ್ನಲ್ಲಿ ತಿಳಿಸಿದೆ.
ನಾವಿಕನ ಶವದ ಸ್ಥಿತಿಯು ಪಾರದರ್ಶಕತೆ, ವಿದೇಶದಲ್ಲಿರುವ ಭಾರತೀಯ ಕಾರ್ಮಿಕರನ್ನು ನಡೆಸಿಕೊಳ್ಳುವ ರೀತಿ ಮತ್ತು ವಿದೇಶಿ ಅಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಒಕ್ಕೂಟವು ಅಸಮಾಧಾನ ಹೊರಹಾಕಿದೆ.