Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೇರಳ: ಬೇರೊಬ್ಬನ ಜೊತೆ ಮದುವೆಗೆ ಒಪ್ಪಿದ್ದಕ್ಕೆ ಮಾಜಿ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದ ಕಾಮುಕ!

Spread the love

ಕೊಚ್ಚಿ: ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥವಾಗಿ ಮದುವೆಯಾಗಲು ಒಪ್ಪಿಕೊಂಡಿದ್ದಕ್ಕೆ ಆಕ್ರೋಶಗೊಂಡ ಮಾಜಿ ಪ್ರಿಯಕರನೊಬ್ಬ, ಮಾತುಕತೆ ನೆಪದಲ್ಲಿ ಪ್ರೇಯಸಿಯನ್ನು ತನ್ನ ಮನೆಗೆ ಕರೆಸಿಕೊಂಡು ಅಡುಗೆಮನೆಯ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈದಿರುವ ದಾರುಣ ಘಟನೆ ಕೇರಳದ ಉತ್ತರ ಪರವೂರಿನಲ್ಲಿ ಗುರುವಾರ ನಡೆದಿದೆ. ಚೂಂಡಿ ಮೂಲದ ಸುರಮ್ಯಾ (24) ಹತ್ಯೆಗೊಳಗಾದ ಯುವತಿ. ಘಟನೆಗೆ ಸಂಬಂಧಿಸಿದಂತೆ ತುರುತಿಪ್ಪುರಂ ಮೂಲದ ಶಿಬಿನ್ (34) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುರಮ್ಯಾ ಹಾಗೂ ಶಿಬಿನ್ 2018ರಿಂದ ಅಂದರೆ ಕಾಲೇಜು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚಿನ ಭಿನ್ನಾಭಿಪ್ರಾಯಗಳಿಂದ ಕಳೆದ ನಾಲ್ಕು ತಿಂಗಳುಗಳಿಂದ ಕೇವಲ ಇನ್‌ಸ್ಟಾಗ್ರಾಮ್ ಮೂಲಕ ಮಾತ್ರ ಸಂಪರ್ಕದಲ್ಲಿದ್ದರು. ಈ ನಡುವೆ ಸುರಮ್ಯಾ ಬೇರೊಬ್ಬ ಯುವಕನಿಗೆ ಹತ್ತಿರವಾಗಿದ್ದು, ಆತನನ್ನೇ ಮದುವೆಯಾಗುವುದಾಗಿ ಹಾಗೂ ಶಿಬಿನ್ ಜೊತೆಗಿನ ಸಂಬಂಧ ಮುಂದುವರಿಸಲು ಆಸಕ್ತಿ ಇಲ್ಲವೆಂದು ಸ್ಪಷ್ಟಪಡಿಸಿದ್ದಳು. ಇದರಿಂದ ಶಿಬಿನ್ ತೀವ್ರ ಆಕ್ರೋಶಗೊಂಡಿದ್ದನು.

ಗುರುವಾರ ಬೆಳಿಗ್ಗೆ ಮನೆಯಿಂದ ಹೊರಟಿದ್ದ ಸುರಮ್ಯಾಳನ್ನು ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ನಂಬಿಸಿದ ಶಿಬಿನ್, ಪರವೂರು ಬಸ್ ನಿಲ್ದಾಣದಲ್ಲಿ ಭೇಟಿಯಾಗಿ ತನ್ನ ಬೈಕ್‌ನಲ್ಲಿ ವಡಕ್ಕೇಕರದ ಮುರವೆಂತುರುತ್‌ನಲ್ಲಿರುವ ತನ್ನ ಮನೆಗೆ ಕರೆದೊಯ್ದಿದ್ದನು. ಬೆಳಿಗ್ಗೆ 10 ಗಂಟೆ ಸುಮಾರಿಗೆ ಇಬ್ಬರೂ ಶಿಬಿನ್ ಮನೆಯ ಕೊಠಡಿಯಲ್ಲಿ ಮಾತುಕತೆ ನಡೆಸುತ್ತಿದ್ದಾಗ ಜಗಳ ತಾರಕಕ್ಕೇರಿದೆ. ಕೋಪಗೊಂಡ ಶಿಬಿನ್ ಅಡುಗೆಮನೆಯಿಂದ ಚಾಕು ತಂದು ಸುರಮ್ಯಾ ಮೇಲೆ ಭೀಕರವಾಗಿ ದಾಳಿ ನಡೆಸಿದ್ದಾನೆ. ಕೋಣೆಯಿಂದ ಕಿರುಚಾಟ ಕೇಳಿಬಂದಾಗ ಶಿಬಿನ್ ತಾಯಿ ಹಾಗೂ ತಂದೆ ಬಾಗಿಲು ತಟ್ಟಿದರೂ ತೆರೆಯದೆ, 10 ನಿಮಿಷಗಳ ನಂತರ ಬಾಗಿಲು ತೆರೆದಿದ್ದಾನೆ.

ತೀವ್ರವಾಗಿ ಗಾಯಗೊಂಡಿದ್ದ ಸುರಮ್ಯಾಳನ್ನು ತಕ್ಷಣ ಪರವೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಕೃತ್ಯ ಎಸಗಿದ ಬಳಿಕ ಆರೋಪಿ ಶಿಬಿನ್ ವಡಕ್ಕೇಕರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಪೊಲೀಸರು ಆತನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *