ಮಂಗಳೂರು: ಗೋವಾದಿಂದ ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಜಾಲ ಭೇದ; 438 ಲೀಟರ್ ಮದ್ಯ ವಶ, ಇಬ್ಬರ ಬಂಧನ!

ಮಂಗಳೂರು: ಗೋವಾದಿಂದ ಅಕ್ರಮವಾಗಿ ಮದ್ಯವನ್ನು ಸಾಗಿಸಿ ಮಂಗಳೂರಿನ ಮೂಲಕ ಕೇರಳಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಜಾಲವನ್ನು ಅಬಕಾರಿ ಪೊಲೀಸರು ಭೇದಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕಾರಿನ ಮಾಲೀಕ ಹಾಗೂ ಚಾಲಕ ಬಸವರಾಜು ಬೋವಿ ಮತ್ತು ನಾಗವೇಣಿ ನಾಯಕ್ ಎಂದು ಗುರುತಿಸಲಾಗಿದೆ.ಮಾನ್ಯ ಪರವಾನಗಿ ಇಲ್ಲದೆ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ವಿಶೇಷ ಅಬಕಾರಿ ತಂಡ ಕಾರ್ಯಾಚರಣೆ ನಡೆಸಿ ಕಾರನ್ನು ತಡೆದು ಪರಿಶೀಲಿಸಿತು. ಈ ವೇಳೆ ಕಾರಿನಿಂದ 438 ಲೀಟರ್ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಮದ್ಯ ಸಾಗಣೆಗೆ ಬಳಸಿದ್ದ ಕಾರನ್ನೂ ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಾಲಕೃಷ್ಣ ಸಿ.ಎಚ್. ಅವರ ಮಾರ್ಗದರ್ಶನದಲ್ಲಿ ಹಾಗೂ ದಕ್ಷಿಣ ಕನ್ನಡ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಅವರ ನಿರ್ದೇಶನದ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ.ವಿಶೇಷ ತಂಡದಲ್ಲಿ ಮಂಗಳೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಗಾಯತ್ರಿ ಸಿ.ಎಚ್., ಬಂಟ್ವಾಳ ಉಪವಿಭಾಗದ ಉಪ ಅಧೀಕ್ಷಕ ಸಂತೋಷ್ ಮೋಡಗಿ, ಬಂಟ್ವಾಳ ತಾಲೂಕು ವಲಯದ ಅಬಕಾರಿ ನಿರೀಕ್ಷಕ ಲಕ್ಷ್ಮಣ ಶಿವಣಗಿ, ತಲಪಾಡಿ ಚೆಕ್ಪೋಸ್ಟ್ ನಿರೀಕ್ಷಕ ದತ್ತಗುರು ಅಥೆಣಿ, ಉಪನಿರೀಕ್ಷಕರಾದ ಜಯಪ್ಪ ಶಿವಶಂಕರ ಮತ್ತು ಅಭಿಷೇಕ್, ಹಾಗೂ ಸಿಬ್ಬಂದಿ ಪ್ರಕಾಶ್ ಇದ್ದರು.ಜಂಟಿ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕಿ ಸುನಿತಾ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.