ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್ಗೆ ಕಾರು ಡಿಕ್ಕಿ ಪ್ರಕರಣ: ಗುಂಪಿನ ದಾಳಿಯ ಭಯವಿತ್ತು ಎಂದ ಆರೋಪಿ.

ಗುರುಗ್ರಾಮ: ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್ಗೆ ಕಾರು ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ, ಕಾರು ಚಾಲಕ ಕಲ್ಯಾಣ್ ಬೈನ್ಸ್ಲಾ ಅಪಘಾತದಲ್ಲಿ ತನ್ನ ತಪ್ಪುಇರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ, ಆಕೆಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಯು-ಟರ್ನ್ ಬಳಿ ಕಾರಿನ ಮೇಲೆ ನಿಯಂತ್ರಣ ತಪ್ಪಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿಸಿದ್ದಾನೆ.

ಘಟನೆಯ ನಂತರ ಬೈಕರ್ಗಳ ಗುಂಪು ತನ್ನ ಮತ್ತು ತನ್ನ ಕುಟುಂಬದ ಮೇಲೆ ದಾಳಿ ನಡೆಸಬಹುದು ಎಂಬ ಭೀತಿಯಿಂದ ಸ್ಥಳದಿಂದ ತೆರಳಬೇಕಾಯಿತು ಎಂದು ಆರೋಪಿ ಸಮರ್ಥನೆ ನೀಡಿದ್ದಾನೆ. ವಿವಾದದ ಬೆನ್ನಲ್ಲೇ ಆತ ತನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದು, ಬೈಕ್ ಸವಾರರು ನಿಂದಿಸಲು ಆರಂಭಿಸಿದ್ದರಿಂದ ಕಾರು ನಿಲ್ಲಿಸಲು ಹೆದರಿದ್ದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾನೆ.
ಮತ್ತೊಂದೆಡೆ, ಬೈಕ್ ಸವಾರ ಸಿಯಾ ಅವರು ತಮ್ಮ ಎಪ್ರಿಲಿಯಾ ಸ್ಪೋರ್ಟ್ಸ್ ಬೈಕ್ನಲ್ಲಿ ಹೋಗುತ್ತಿದ್ದಾಗ ಕಾರು ಹಿಂಬಾಲಿಸಿ ಬಂದು ಅನುಚಿತವಾಗಿ ವರ್ತಿಸಿತು ಹಾಗೂ ಅತಿವೇಗದಿಂದ ಬಂದು ಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಿದ್ದಾರೆ. ಘಟನೆಯ ದೃಶ್ಯಗಳು ಬೈಕ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಿಯಾ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಗುರುಗ್ರಾಮ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 281 ಮತ್ತು 125 ರ ಅಡಿಯಲ್ಲಿ ಸೆಕ್ಟರ್ 56 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿಯ ಬಂಧನಕ್ಕಾಗಿ ಸದ್ಯ ಮೂರು ವಿಶೇಷ ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಲಾಗಿದೆ.