ಶಿವಮೊಗ್ಗ: ಅಡಿಕೆ ತೋಟಕ್ಕೆ ಅಕ್ರಮ ವಿದ್ಯುತ್ ಪ್ರವಾಹ; ಶಾಕ್ ತಗುಲಿ 3 ವರ್ಷದ ಕರಡಿ ದಾರುಣ ಸಾ*ವು, ತೋಟದ ಮಾಲೀಕ ಬಂಧನ!

ಶಿವಮೊಗ್ಗ: ಭದ್ರಾವತಿ ತಾಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ಅಡಿಕೆ ತೋಟಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ ಪರಿಣಾಮ, ಶಾಕ್ ತಗುಲಿ 3 ವರ್ಷದ ಕರಡಿ ಸಾವನ್ನಪ್ಪಿದ ಘಟನೆ ನಡೆದಿದೆ. ಘಟನೆ ಸಂಬಂಧ ತೋಟದ ಮಾಲೀಕನನ್ನು ಬಂಧಿಸಲಾಗಿದೆ.

ತೋಟಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿ ಕರಡಿ ಸಾವಿಗೆ ಕಾರಣವಾದ ತೋಟದ ಮಾಲೀಕ ದೊಡ್ಡಸೀಗೆ ಗ್ರಾಮದ ನಿವಾಸಿ ಗೋವಿಂದಪ್ಪ ಎಂಬಾತ ಬಂಧಿತ ಆರೋಪಿ. ಆರೋಪಿಯನ್ನು ಶಾಂತಿಸಾಗರ ವಲಯ ಅರಣ್ಯಾಧಿಕಾರಿಗಳು ಬಂಧಿಸಿ, ಭದ್ರಾವತಿ 3ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಯಡೇಹಳ್ಳಿ ಗ್ರಾಮ ಸರ್ವೆ ನಂಬರ್ 54ರಲ್ಲಿ ಗೋವಿಂದಪ್ಪನ ಅಡಿಕೆ ತೋಟವಿದ್ದು, ಅಲ್ಲಿ ಕಾಡು ಪ್ರಾಣಿಗಳ ಕಾಟ ತಡೆಯಲು ವಿದ್ಯುತ್ ಅನ್ನು ನೇರವಾಗಿ ತೋಟದ ಬೇಲಿಗೆ ಸಂಪರ್ಕ ನೀಡಿದ್ದರು. ರಾತ್ರಿ ವೇಳೆ ತೋಟಕ್ಕೆ ನುಗ್ಗಲು ಯತ್ನಿಸಿದ 3 ವರ್ಷದ ಕರಡಿ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಗೋವಿಂದಪ್ಪನ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಸೆಕ್ಷನ್ 9,39,(r/w2(16),(36),50,51 ರಡಿಯಲ್ಲಿ ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ. ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ತಗ್ಗಿನಮನಿ ಮಾರ್ಗದರ್ಶನದಲ್ಲಿ ಶಾಂತಿಸಾಗರ ವಲಯ ಅರಣ್ಯಾಧಿಕಾರಿ ಲಷ್ಕರ್ ನಾಯ್ಕ್, ತಂಡ ಕಾರ್ಯಾಚರಣೆ ನಡೆಸಿದೆ. ಉಪ ವಲಯ ಅರಣ್ಯಾಧಿಕಾರಿಗಳಾದ ಮನೋಹರ್ ವಿ.ಎಸ್., ಮನು ಎಂ., ಶಿವಕುಮಾರ್, ಗಸ್ತು ಅರಣ್ಯ ಪಾಲಕರಾದ ಶಿವನಗೌಡ ಬಿರದಾರ್, ರಂಗನಾಥ್, ಹನುಮಂತಪ್ಪ, ಮಹಮದ್ ಖಾಲಿದ್, ನಯಾಜ್, ಭೀಮಾಶಂಕರ ನಾವಿ, ಅನಿಲ್, ಬಸವರಾಜ, ಶಿವು, ಲಕ್ಷ್ಮಣ, ರಂಗಪ್ಪ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.