ರಾಂಚಿ ಜೆಎಸ್ಸಿಎ ಕ್ರೀಡಾಂಗಣದಲ್ಲಿ ಕಾಲ್ತುಳಿತ: ಟಿ-20 ಪಂದ್ಯ ವೀಕ್ಷಣೆಗೆ ಮುಗಿಬಿದ್ದ ಅಭಿಮಾನಿಗಳು

ರಾಂಚಿ: ಜೆಎಸ್ಸಿಎ ಕ್ರೀಡಾಂಗಣದ ಹೊರಗೆ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ರಾಜ್ಯ ಮಟ್ಟದ ಟಿ-20 ಕ್ರಿಕೆಟ್ ಲೀಗ್ನ ಫೈನಲ್ ಪಂದ್ಯದ ವೇಳೆ ಈ ಘಟನೆ ಸಂಭವಿಸಿದ್ದು, ಕ್ರೀಡಾಂಗಣದ ಪ್ರವೇಶಕ್ಕೆ ಯಾವುದೇ ಪ್ರವೇಶ ಶುಲ್ಕ ನಿಗದಿಯಾಗಿರಲಿಲ್ಲ ಎಂದು ತಿಳಿದು ಬಂದಿದೆ.
ಪಂದ್ಯ ಆರಂಭವಾದ ಬಳಿಕ ಪಶ್ಚಿಮ ದ್ವಾರದ ಬಳಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಅನೇಕ ಯುವಕರು ಒಳಗೆ ಹೋಗಲು ಕ್ರೀಡಾಂಗಣದ ದೊಡ್ಡ ಗೋಡೆಯನ್ನು ಜಿಗಿಯಲು ಯತ್ನಿಸುವಾಗ ಕಾಲ್ತುಳಿತ ಸಂಭವಿಸಿದೆ.

“ಕ್ರೀಡಾಂಗಣದ ಪಶ್ಚಿಮ ದ್ವಾರದ ಬಳಿ ಏಕಕಾಲದಲ್ಲಿ ಭಾರಿ ಸಂಖ್ಯೆಯ ಜನರು ಒಳಗೆ ಪ್ರವೇಶಿಸಲು ಯತ್ನಿಸಿದಾಗ ಈ ಘಟನೆ ಸಂಭವಿಸಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ” ಎಂದು ರಾಂಚಿ ಎಸ್ಎಸ್ಪಿ ರಾಕೇಶ್ ರಂಜನ್ ತಿಳಿಸಿದ್ದಾರೆ.
ಗಾಯಗೊಂಡ ಮೂವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೀಡಾಂಗಣದ ಹೊರಗೆ ನಡೆದ ಈ ಘಟನೆಯಿಂದಾಗಿ ಪಂದ್ಯಕ್ಕೆ ಯಾವುದೇ ಅಡಚಣೆಯುಂಟಾಗಿಲ್ಲ. ಆದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿಲ್ಲ ಎಂದು ತಿಳಿದು ಬಂದಿದೆ.