ಅಸ್ಸಾಂನಲ್ಲಿ ಭೀಕರ ಪ್ರವಾಹ: ಕಳೆದ 24 ಗಂಟೆಗಳಲ್ಲಿ 21 ಸಾ*ವು; 16 ಜಿಲ್ಲೆಗಳ 5.64 ಲಕ್ಷಕ್ಕೂ ಹೆಚ್ಚು ಜನರಿಗೆ ಸಂಕಷ್ಟ!

ಗುವಾಹಟಿ: ಅಸ್ಸಾಂನಲ್ಲಿ ಭೀಕರ ಪ್ರವಾಹದಿಂದಾಗಿ 16 ಜಿಲ್ಲೆಗಳ 5.64 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೀಡಾಗಿದ್ದು, ಕಳೆದ 24 ಗಂಟೆಗಳಲ್ಲಿ 21 ಜನರು ಮೃತಪಟ್ಟಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಂಗಳವಾರ ತಡರಾತ್ರಿ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಮಾಹಿತಿಯ ಪ್ರಕಾರ, ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾಗಿರುವ ಶಿವಸಾಗರ ಜಿಲ್ಲೆಯೊಂದರಲ್ಲೇ ಕಳೆದ 24 ಗಂಟೆಗಳಲ್ಲಿ 13 ಜನರು ಮೃತಪಟ್ಟಿದ್ದಾರೆ. ಉಳಿದಂತೆ ಚರಾಯಿದೇವೊದಲ್ಲಿ 5, ಗೋಲಾಘಾಟ್ನಲ್ಲಿ 2 ಮತ್ತು ಜೋರ್ಹತ್ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ದುರಂತದ ಒಟ್ಟು ಮೃತರ ಸಂಖ್ಯೆ ಇದೀಗ 31ಕ್ಕೇರಿದೆ.
ಗೋಲಾಘಾಟ್, ಕಾಮರೂಪ, ಹೊಜಾಯ್, ದಿಬ್ರೂಗಡ್, ಬಿಸ್ವನಾಥ್, ಧೇಮಾಜಿ, ಸೋನಿತ್ಪುರ್, ಉದಲ್ಲುರಿ, ನಾಗಾಂವ್, ಚರಾಯಿದೇವೊ, ಕಾಮರೂಪ (ಮೆಟ್ರೋ), ಜೋರ್ಹತ್, ತಿನ್ನುಕಿಯಾ, ಕರ್ಬಿ ಆಂಗ್ಲಾಂಗ್, ಲಖಿಂಪುರ್ ಮತ್ತು ಶಿವಸಾಗರ ಸೇರಿದಂತೆ 16 ಜಿಲ್ಲೆಗಳ 5,64,600ಕ್ಕೂ ಹೆಚ್ಚು ಜನರು ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ ಎಂದು ಪ್ರಾಧಿಕಾರ ತಿಳಿಸಿದೆ.
ಸೋಮವಾರ 15 ಜಿಲ್ಲೆಗಳಲ್ಲಿ 3.63 ಲಕ್ಷ ಜನರು ಬಾಧಿತರಾಗಿದ್ದರು. ಇದೀಗ ಒಂದೇ ದಿನದಲ್ಲಿ ಈ ಸಂಖ್ಯೆ ಏರಿಕೆಯಾಗಿದೆ.
ಶಿವಸಾಗರ ಪಟ್ಟಣ ಮತ್ತು ನಂಗ್ಲಾಮುರಘಾಟ್ನಲ್ಲಿ ದಿಖ್ ಮತ್ತು ದಿಸಂಗ್ ನದಿಗಳು ಗರಿಷ್ಠ ಪ್ರವಾಹ ಮಟ್ಟಕ್ಕಿಂತ ಎತ್ತರದಲ್ಲಿ ಹರಿಯುತ್ತಿವೆ. ನೇಮತಿಘಾಟ್ನಲ್ಲಿ ಬ್ರಹ್ಮಪುತ್ರ, ಖೋವಾಂಗ್ನಲ್ಲಿ ಬುರ್ಹಿಡಿಹಿಂಗ್ ಮತ್ತು ಗೋಲಾಘಾಟ್ ಹಾಗೂ ನುಮಾಲಿಗಢದಲ್ಲಿ ಧನಸಿರಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ರೈಲು ಹಳಿಗಳು ಜಲಾವೃತಗೊಂಡಿದ್ದರಿಂದ ಎರಡನೇ ದಿನವೂ ರೈಲು ಸೇವೆ ಸ್ಥಗಿತಗೊಂಡಿದೆ. ಶಿವಸಾಗರ ಜಿಲ್ಲೆಯ ಸಿಮಲುಗುರಿ ಪಟ್ಟಣದ ಸುತ್ತಮುತ್ತ ತೀವ್ರ ಪ್ರವಾಹ ಉಂಟಾಗಿರುವುದರಿಂದ ಸಿಮಲುಗುರಿ-ನಮ್ಮಿಯಾಲಿ ಮತ್ತು ಸಿಮಲುಗುರಿ-ಸೆಲೆಂಗ್ವಾಟ್ ಮಾರ್ಗಗಳ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಈಶಾನ್ಯ ಗಡಿ ರೈಲ್ವೆ ತಿಳಿಸಿದೆ.
ಸಂತ್ರಸ್ತರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಪರಿಶೀಲನೆಗಾಗಿ ಬುಧವಾರದಂದು ಹೆಚ್ಚು ಪ್ರವಾಹ ಬಾಧಿತ ಜಿಲ್ಲೆಗಳಿಗೆ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.
