“ಹೊಸದಿಲ್ಲಿ: ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ತೀವ್ರ ಕಲ್ಲಿದ್ದಲು ಕೊರತೆ; 50 ಪ್ಲಾಂಟ್ಗಳಲ್ಲಿ ಗಂಭೀರ ಸ್ಥಿತಿ!”

ಹೊಸದಿಲ್ಲಿ: ದೇಶಾದ್ಯಂತ ಇರುವ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ನಿಗದಿತ ಪ್ರಮಾಣಕ್ಕಿಂತ ಅರ್ಧಕ್ಕಿಂತಲೂ ಕಡಿಮೆಗೆ ಕುಸಿದಿದ್ದು, ಸೆಪ್ಟೆಂಬರ್ 2ರ ವೇಳೆಗೆ 50 ಸ್ಥಾವರಗಳಲ್ಲಿ ದಾಸ್ತಾನು ‘ತೀವ್ರ ಕೊರತೆ’ ಮಟ್ಟಕ್ಕೆ ತಲುಪಿದೆ ಎಂದು ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (CEA) ಮಾಹಿತಿ ನೀಡಿದೆ.
ವಿದ್ಯುತ್ ಬೇಡಿಕೆ ಹೆಚ್ಚಾಗಿರುವುದು ಮತ್ತು ಮುಂಗಾರು ಮಳೆಯಿಂದಾಗಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಒಟ್ಟು ಸುಮಾರು 224 ಗಿಗಾವಾಟ್ (GW) ಸಾಮರ್ಥ್ಯದ ಈ ಸ್ಥಾವರಗಳಲ್ಲಿ ಬುಧವಾರದ ವೇಳೆಗೆ 28.2 ಮಿಲಿಯನ್ ಟನ್ ಕಲ್ಲಿದ್ದಲು ದಾಸ್ತಾನು ಇತ್ತು. ನಿಗದಿತ 58.7 ಮಿಲಿಯನ್ ಟನ್ ದಾಸ್ತಾನಿಗೆ ಹೋಲಿಸಿದರೆ ಇದು ಕೇವಲ ಶೇ.48ರಷ್ಟಾಗಿದೆ.

ಬೇಡಿಕೆಯ ಸಾಮಾನ್ಯ ನಿಯಮಗಳ ಪ್ರಕಾರ, ಸುಮಾರು 19 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇರಬೇಕಿತ್ತು. ವಿದ್ಯುತ್ ಸ್ಥಾವರಗಳು ಶೇ.85ರ ಸಾಮರ್ಥ್ಯ ದಲ್ಲಿ ಕಾರ್ಯನಿರ್ವಹಿಸಿದರೆ, ಈಗಿರುವ ಕಲ್ಲಿದ್ದಲು ದಾಸ್ತಾನು ಕೇವಲ 9 ದಿನಗಳಿಗೆ ಸಾಕಾಗಲಿದೆ.
ತೀವ್ರ ಕೊರತೆ ಇದೆ ಎಂದು ವರ್ಗೀಕರಿಸಲಾದ ಸ್ಥಾವರಗಳಲ್ಲಿ ನಿಗದಿತ ದಾಸ್ತಾನಿನ ಶೇ.25ಕ್ಕಿಂತ ಕಡಿಮೆ ಕಲ್ಲಿದ್ದಲು ಮಾತ್ರ ಉಳಿದಿದೆ. ಆದರೆ, ಈ ಎಲ್ಲಾ ಸ್ಥಾವರಗಳ ಮೇಲೆ ಅಂತರ-ಸಚಿವಾಲಯಗಳ ಅಧಿಕಾರಿಗಳ ತಂಡ ಪ್ರತಿದಿನ ನಿಗಾ ಇರಿಸಿದ್ದು, ನಿಯಮಿತ ಇಂಧನ ಪೂರೈಕೆ ಮಾಡಲಾಗುತ್ತಿದೆ ಎಂದು ಕಲ್ಲಿದ್ದಲು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ 50 ಸ್ಥಾವರಗಳಲ್ಲಿ 45 ಸ್ಥಾವರಗಳು ದೇಶೀಯ ಕಲ್ಲಿದ್ದಲನ್ನು ನಾಲ್ಕು ಆಮದು ಮಾಡಿಕೊಂಡ ಕಲ್ಲಿದ್ದಲನ್ನು ಮತ್ತು ಒಂದು ಸ್ಥಾವರವು ವಾಷರಿ ತ್ಯಾಜ್ಯವನ್ನು ಅವಲಂಬಿಸಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಲ್ಲಿದ್ದಲು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, ಸಿಇಎ ನಿಯಮಗಳ ಪ್ರಕಾರ ಉಷ್ಣ ವಿದ್ಯುತ್ ಸ್ಥಾವರವನ್ನು ‘ಕ್ರಿಟಿಕಲ್’ ಎಂದು ವರ್ಗೀಕರಿಸುವುದು ಒಂದು ನಿಯಮಿತ ಮೇಲ್ವಿಚಾರಣಾ ಪ್ರಕ್ರಿಯೆಯಾಗಿದೆ. ಇದರರ್ಥ ಆ ಸ್ಥಾವರಗಳ ಮೇಲೆ ಹೆಚ್ಚಿನ ನಿಗಾ ಇಟ್ಟು ಆದ್ಯತೆಯ ಕ್ರಮ ಕೈಗೊಳ್ಳಲಾಗುತ್ತದೆ ಎಂದಷ್ಟೇ ಹೊರತು, ಅಲ್ಲಿ ಸಂಪೂರ್ಣವಾಗಿ ಪೂರೈಕೆ ನಿಂತಿದೆ ಎಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶೇ.85ರಷ್ಟು ಲೋಡ್ ಫ್ಯಾಕ್ಟರ್ ನಲ್ಲಿ ದಿನಕ್ಕೆ 3.1 ಮಿಲಿಯನ್ ಟನ್ ಕಲ್ಲಿದ್ದಲು ಅಗತ್ಯವಿರುತ್ತದೆ ಎಂದು ಅಂದಾಜಿಸಲಾಗಿದ್ದರೂ, ಸದ್ಯದ ವಾಸ್ತವ ಅಗತ್ಯತೆ ದಿನಕ್ಕೆ ಸುಮಾರು 2.4 ಮಿಲಿಯನ್ ಟನ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ವರ್ಷ ಮುಂಗಾರು ಅವಧಿಯಲ್ಲಿ ಕಲ್ಲಿದ್ದಲು ಪೂರೈಕೆಯಲ್ಲಿ ಇಂತಹ ವ್ಯತ್ಯಯಗಳು ಸಾಮಾನ್ಯವಾಗಿದ್ದು, ಮಳೆ ಕಡಿಮೆಯಾಗುತ್ತಿದ್ದಂತೆ ಸೆಪ್ಟೆಂಬರ್ ನಂತರ ಪರಿಸ್ಥಿತಿ ಸುಧಾರಿಸಲಿದೆ. ವಿದ್ಯುತ್ ಉತ್ಪಾದನೆಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲು, ಕೆಲವು ಕಲ್ಲಿದ್ದಲು ಆಧಾರಿತ ಸ್ಥಾವರಗಳಿಗೆ ನಿಗದಿತ ನಿರ್ವಹಣಾ ಕಾರ್ಯಗಳನ್ನು ಮುಂದೂಡುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.