ಕಾಸರಗೋಡು: ವಿದ್ಯುತ್ ತಂತಿ ತಾಗಿ ರೆಫ್ರಿಜರೇಟರ್ ಕಂಟೇನರ್ ಲಾರಿಗೆ ಬೆಂಕಿ; 30ಕ್ಕೂ ಹೆಚ್ಚು ಫ್ರಿಡ್ಜ್ಗಳು ಭಸ್ಮ!

ಕಾಸರಗೋಡು: ಕೋಝಿಕ್ಕೋಡ್ನಿಂದ ಉಡುಪಿಗೆ ರೆಫ್ರಿಜರೇಟರ್ಗಳನ್ನು ಸಾಗಿಸುತ್ತಿದ್ದ ಕಂಟೇನರ್ ಟ್ರಕ್ಗೆ ವಿದ್ಯುತ್ ತಂತಿ ತಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 30ಕ್ಕೂ ಹೆಚ್ಚು ರೆಫ್ರಿಜರೇಟರ್ಗಳು ಸುಟ್ಟು ಭಸ್ಮವಾಗಿರುವ ಘಟನೆ ಬೇಕಲ್ ಬಳಿಯ ಮೌವ್ವಲ್ನಲ್ಲಿ ಮಂಗಳವಾರ ಸಂಭವಿಸಿದೆ.

ಮೌವ್ವಲ್ನ ರಿಫಾಯಿಯಾ ಮಸೀದಿ ಬಳಿಯ ಬೈಲೇನ್ನಲ್ಲಿ ಈ ದುರಂತ ಸಂಭವಿಸಿದ್ದು, ಕಾಂಞಂಗಾಡ್-ಕಾಸರಗೋಡು ಹೆದ್ದಾರಿಯಲ್ಲಿ ಹಲವಾರು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕಂಟೇನರ್ನಿಂದ ಬೆಂಕಿ ಹಾಗೂ ದಟ್ಟ ಹೊಗೆ ಏಳುತ್ತಿರುವುದನ್ನು ಗಮನಿಸಿದ ದಾರಿಹೋಕರು ತಕ್ಷಣ ಚಾಲಕನಿಗೆ ತಿಳಿಸಿದ್ದಾರೆ. ಚಾಲಕ ಕೂಡಲೇ ವಾಹನ ನಿಲ್ಲಿಸಿ ಕೆಳಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಕಾಂಞಂಗಾಡ್ ಮತ್ತು ಕಾಸರಗೋಡಿನಿಂದ ಧಾವಿಸಿದ ಮೂರು ಅಗ್ನಿಶಾಮಕ ಹಾಗೂ ರಕ್ಷಣಾ ಘಟಕಗಳು ಕಾರ್ಯಾಚರಣೆ ನಡೆಸಿದವು. ಜೆಸಿಬಿ ಯಂತ್ರ ಬಳಸಿ ಕಂಟೇನರ್ ಕತ್ತರಿಸಿ, ಒಳಗಿದ್ದ ರೆಫ್ರಿಜರೇಟರ್ಗಳ ಪ್ಯಾಕೇಜ್ ಹೊರತೆಗೆದು ಸುಮಾರು ಒಂದೂವರೆ ಗಂಟೆಗಳ ಶ್ರಮದ ನಂತರ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಯಿತು.
ಈ ಅಗ್ನಿ ಅವಘಡದಲ್ಲಿ 30ಕ್ಕೂ ಹೆಚ್ಚು ರೆಫ್ರಿಜರೇಟರ್ಗಳು ಸುಟ್ಟು ನಾಶವಾಗಿದ್ದು, ಉಳಿದ ಸುಮಾರು 20 ರೆಫ್ರಿಜರೇಟರ್ಗಳನ್ನು ಹಾನಿಯಾಗದಂತೆ ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಬೇಕಲ್ ರೈಲ್ವೆ ಮೇಲ್ಸೇತುವೆ ದುರಸ್ತಿ ಕಾಮಗಾರಿ ಮಂಗಳವಾರ ಆರಂಭಗೊಂಡ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚಾರ ಬದಲಾವಣೆ ಮಾಡಲಾಗಿತ್ತು. ಮಂಗಳೂರು ಕಡೆಗೆ ತೆರಳುವ ಭಾರೀ ವಾಹನಗಳು ಕಾಂಞಂಗಾಡ್ ದಕ್ಷಿಣದಿಂದ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಸಾಗಲು ಸೂಚನೆ ನೀಡಲಾಗಿತ್ತು.
ಆದರೆ, ಕಂಟೇನರ್ ಟ್ರಕ್ ಪಲ್ಲಿಕ್ಕರ ಜಂಕ್ಷನ್ ತಲುಪಿದಾಗ ಆರ್ಒಬಿ ಬಂದ್ ಆಗಿರುವುದನ್ನು ಕಂಡು ಚಾಲಕ ಬಲಕ್ಕೆ ತಿರುಗಿ ಮೌವ್ವಲ್ ಮೂಲಕ ಕಾಸರಗೋಡಿಗೆ ಬೈಲೇನ್ ರಸ್ತೆ ಹಿಡಿದಿದ್ದಾನೆ. ಮೌವ್ವಲ್-ಬೇಕಲ್-ಥಚಂಗಡ್ ರಸ್ತೆಯ ರಿಫಾಯಿಯಾ ಮಸೀದಿ ಬಳಿ ಸಾಗುತ್ತಿದ್ದಾಗ ರಸ್ತೆಯಲ್ಲಿದ್ದ ತಗ್ಗು ಪ್ರದೇಶದ ವಿದ್ಯುತ್ ತಂತಿಗೆ ಟ್ರಕ್ ಗೆ ತಾಗಿದೆ ಇದರಿಂದಾಗಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದಾಗಿ ಕರಾವಳಿ ಹೆದ್ದಾರಿಯಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹಾನಿಗೊಳಗಾದ ವಾಹನ ತೆರವುಗೊಳಿಸಿದ ಬಳಿಕ ಸಂಚಾರ ಸುಗಮಗೊಳಿಸಲಾಯಿತು.