ಕಾಸರಗೋಡು: ಪ್ರಾಣಿ ದೌರ್ಜನ್ಯ ತಡೆಯಲು ಕಾಞಂಗಾಡ್ ದೇವಸ್ಥಾನಕ್ಕೆ ಯಾಂತ್ರಿಕ ಆನೆ ‘ಗುರುಪುರಂ ಅರ್ಜುನನ್’ ಸೇರ್ಪಡೆ!

ಕಾಸರಗೋಡು : ದೇವಾಲಯಗಳ ಉತ್ಸವ ಹಾಗೂ ಆಚರಣೆಗಳಲ್ಲಿ ಆನೆಗಳ ಮೇಲಾಗುವ ದೌರ್ಜನ್ಯ ತಡೆಯಲು ಮತ್ತು ಭಕ್ತರ ಸುರಕ್ಷತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯಾಂತ್ರಿಕ ಆನೆಗಳ ಬಳಕೆ ಹೆಚ್ಚುತ್ತಿದ್ದು, ಇದೀಗ ಕಾಸರಗೋಡು ಜಿಲ್ಲೆಯಲ್ಲೂ ಇಂತಹದ್ದೇ ಒಂದು ಹೆಜ್ಜೆ ಇಡಲಾಗಿದೆ. ಕಾಞಂಗಾಡ್ನ ಗುರುಪುರಂ ಮಹಾವಿಷ್ಣು ದೇವಾಲಯಕ್ಕೆ 800 ಕೆಜಿ ತೂಕದ ಯಾಂತ್ರಿಕ ಆನೆ ‘ಗುರುಪುರಂ ಅರ್ಜುನನ್’ ಸೇರ್ಪಡೆಯಾಗಿದೆ.

ಬಾಲಿವುಡ್ ನಟಿ ರಿಚಾ ಚಡ್ಡಾ ಹಾಗೂ ‘ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್’ (ಪೆಟಾ) ಇಂಡಿಯಾ ಸಂಸ್ಥೆಯು ಜಂಟಿಯಾಗಿ ಮಂಗಳವಾರ ಈ ಯಾಂತ್ರಿಕ ಆನೆಯನ್ನು ದೇವಾಲಯಕ್ಕೆ ದಾನವಾಗಿ ನೀಡಿವೆ. ಸಾಂಪ್ರದಾಯಿಕ ತಾಳವಾದ್ಯ ಹಾಗೂ ನೂರಾರು ಭಕ್ತರ ಸಮ್ಮುಖದಲ್ಲಿ ನಟಿ ರಿಚಾ ಚಡ್ಡಾ ಮತ್ತು ದೇವಾಲಯದ ತಂತ್ರಿ ಇರಿವಲ್ ಕೃಷ್ಣದಾಸ್ ವಝುನವರ್ ಅವರು ಈ ಯಾಂತ್ರಿಕ ಮಾದರಿಯನ್ನು ಔಪಚಾರಿಕವಾಗಿ ದೇವಾಲಯಕ್ಕೆ ಹಸ್ತಾಂತರಿಸಿದರು. ಕಾಸರಗೋಡು ಜಿಲ್ಲೆಯ ದೇವಾಲಯವೊಂದಕ್ಕೆ ಯಾಂತ್ರಿಕ ಆನೆ ದಾನವಾಗಿ ಲಭಿಸುತ್ತಿರುವುದು ಇದೇ ಮೊದಲು.
ಸುಮಾರು ₹5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಆನೆಯು ರಬ್ಬರ್ನಿಂದ ಆವೃತವಾದ ಕಬ್ಬಿಣದ ಚೌಕಟ್ಟನ್ನು ಹೊಂದಿದೆ. ಐದು ಮೋಟಾರ್ಗಳ ಸಹಾಯದಿಂದ ಇದು ಕಾರ್ಯನಿರ್ವಹಿಸಲಿದ್ದು, ತಲೆ, ಕಣ್ಣು, ಬಾಯಿ, ಕಿವಿ ಮತ್ತು ಬಾಲವನ್ನು ಮೋಟಾರ್ ಮೂಲಕ ಚಲಿಸಬಹುದು. ಮಾವುತನ ನಿಯಂತ್ರಣದಲ್ಲಿರುವ ಸೊಂಡಿಲಿನಿಂದ ನೀರನ್ನು ಸಹ ಸಿಂಪಡಿಸುವ ತಂತ್ರಜ್ಞಾನ ಇಲ್ಲಿದೆ. ಇದರ ಬೆನ್ನಿನ ಮೇಲೆ ನಾಲ್ವರು ಕುಳಿತುಕೊಳ್ಳಲು ಅವಕಾಶವಿದ್ದು, ಇನ್ಮುಂದೆ ದೇವಾಲಯದ ಆಚರಣೆಗಳು ಮತ್ತು ಮೆರವಣಿಗೆಗಳಲ್ಲಿ ನಿಜವಾದ ಆನೆಯ ಬದಲಿಗೆ ಇದನ್ನು ಬಳಸಲಾಗುತ್ತದೆ.
ಕರ್ನಾಟಕದ ದೇವಸ್ಥಾನವೊಂದರಲ್ಲಿ ಇಂತಹ ಯಾಂತ್ರಿಕ ಆನೆಯನ್ನು ನೋಡಿದ್ದ ದೇವಾಲಯ ಕಾರ್ಯಕಾರಿ ಸಮಿತಿ ಸದಸ್ಯ ಜಯರಾಮ್ ಚಂದ್ರನ್, ಗುರುಪುರಂ ದೇವಾಲಯಕ್ಕೂ ಇದನ್ನು ತರುವ ನಿರ್ಧಾರ ಕೈಗೊಂಡಿದ್ದರು. ದೇವಾಲಯದ ಅಧ್ಯಕ್ಷ ಕುಂಜಿರಾಮನ್ ಅಯ್ಯಂಕವು ಅವರ ಅಧ್ಯಕ್ಷತೆಯಲ್ಲಿ ನಡೆದ ಹಸ್ತಾಂತರ ಸಮಾರಂಭದಲ್ಲಿ ತಂತ್ರಿ ಇರಿವಲ್ ಕೃಷ್ಣದಾಸ್, ಪಾಲಕ ಮಾಧವನ್ ನಾಯರ್, ಪ್ರಧಾನ ಅರ್ಚಕ ರಘುರಾಮ್ ಭಟ್ ಹಾಗೂ ಪೆಟಾ ಇಂಡಿಯಾ ಪ್ರತಿನಿಧಿಗಳು ಉಪಸ್ಥಿತರಿದ್ದರು.