ಚಿಕ್ಕಮಗಳೂರು: ಲಕ್ಕವಳ್ಳಿ ವಲಯದಲ್ಲಿ ಕಡವೆ ಬೇಟೆಯಾಡಿ ಮಾಂಸ ಕತ್ತರಿಸುತ್ತಿದ್ದ ಅಡ್ಡೆ ಮೇಲೆ ಅರಣ್ಯ ಇಲಾಖೆ ದಾಳಿ – ಮೂವರು ಆರೋಪಿಗಳ ಬಂಧನ!

ಚಿಕ್ಕಮಗಳೂರು: ಲಕ್ಕವಳ್ಳಿ ವಲಯದ ಎಂ.ಸಿ.ಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ಕಡವೆ ಬೇಟೆಯಾಡಿ ಮಾಂಸ ಕತ್ತರಿಸುತ್ತಿದ್ದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.

ಎಂ.ಸಿ.ಹಳ್ಳಿಯ ಕಿರಣ್, ಗೋವಿಂದರಾಜು ಹಾಗೂ ಭದ್ರಾವತಿಯ ಮಣಿಕಂಠ ಬಂಧಿತ ಆರೋಪಿಗಳು. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ದಾಳಿ ವೇಳೆಯಲ್ಲಿ ಮತ್ತೂ ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಎಂ.ಸಿ.ಹಳ್ಳಿ ಕ್ವಾಟ್ರಸ್ನ ಪ್ರವೀಣ್, ಪ್ರಭು ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪತ್ತೆಗೆ ಬಲೆ ಬೀಸಲಾಗಿದೆ.
70 ಕೆಜಿ ಮಾಂಸ, ನಾಡ ಬಂದೂಕು ವಶ: ದಾಳಿ ನಡೆದ ಸ್ಥಳದಲ್ಲಿದ್ದ ಸುಮಾರು 70 ಕೆಜಿ ಕಡವೆ ಮಾಂಸ, ಕಡವೆಯ ತಲೆ ಹಾಗೂ ಕಾಲುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಬೇಟೆಗೆ ಬಳಸಿದ್ದ ಒಂದು ನಾಡ ಬಂದೂಕು, ದ್ವಿಚಕ್ರ ವಾಹನ, ಕತ್ತಿ, ಚಾಕು, ಚೂರಿ ಹಾಗೂ ಹೆಡ್ಲೈಟ್ ಸೇರಿದಂತೆ ವಿವಿಧ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ.
ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿ: ಲಕ್ಕವಳ್ಳಿ ವಲಯ ಅರಣ್ಯಾಧಿಕಾರಿ ಇಂದು ಜಿ.ಎಸ್, ಎಂ.ಸಿ.ಹಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಚನ್ನೇಗೌಡ ಜಿ.ಟಿ, ಲಕ್ಕವಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮನೋಜ್ ಕೆ.ಎಸ್, ಗಸ್ತು ಅರಣ್ಯ ಪಾಲಕರಾದ ಸಂತೋಷ್ ಎಂ.ಬಿ, ಬಾಲರಾಜ್, ಪುನೀತ್, ವಿಶ್ವನಾಥ್ ಹಾಗೂ ಅರಣ್ಯ ವೀಕ್ಷಕಿ ಶೋಭಾ ಸೇರಿದಂತೆ ಸಿಬ್ಬಂದಿ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.