ವಿವಾದಾತ್ಮಕ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಗುರಿಯಾದ ಬಿಜೆಪಿ ಬೆಂಬಲಿಗ: ಕಠಿಣ ಕಾನೂನು ಕ್ರಮಕ್ಕೆ ಆಗ್ರಹ!

ತಿರುವನಂತಪುರಂ : ದೆಹಲಿಯಲ್ಲಿ ನಡೆದ ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಕೃತ್ಯವನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಕುರಿತು ಯೂಟ್ಯೂಬ್ ವಿಡಿಯೋವೊಂದರಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೆನ್ನಲಾದ ಬಲಪಂಥೀಯ ರಾಜಕೀಯ ವಿಶ್ಲೇಷಕ ಟಿ.ಜಿ. ಮೋಹನ್ ದಾಸ್ ( TG Mohandas ) ವಿರುದ್ಧ ಕೇರಳ ಪೊಲೀಸ್ ಸೈಬರ್ ಕ್ರೈಮ್ ವಿಭಾಗ ಬುಧವಾರ ಪ್ರಕರಣ ದಾಖಲಿಸಿಕೊಂಡಿದೆ.

ತಿರುವನಂತಪುರಂ ಸೈಬರ್ ಪೊಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ವರದಿ (FIR) ಪ್ರಕಾರ, ಮೋಹನ್ದಾಸ್ ಅವರ ‘ಪತ್ರಿಕಾ’ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋಗಳು ಸಾರ್ವಜನಿಕ ಶಾಂತಿಗೆ ಭಂಗ ತರುವ ಹಾಗೂ ಜನರಲ್ಲಿ ಭಯ ಮತ್ತು ಅಶಾಂತಿಯನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿವೆ ಎಂಬ ದೂರಿನ ಆಧಾರದ ಮೇಲೆ ಈ ಪ್ರಕರಣವನ್ನು ದಾಖಲಿಸಲಾಗಿದೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 192 ಮತ್ತು 353(1)(b), ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಹಾಗೂ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120(o) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗಲಭೆಗೆ ಪ್ರಚೋದನೆ ನೀಡುವುದು, ಸಾರ್ವಜನಿಕ ಶಾಂತಿಗೆ ಧಕ್ಕೆ ತರುವಂತಹ ಪ್ರಕಟಣೆಗಳನ್ನು ನೀಡುವುದು, ಐಟಿ ಕಾಯ್ದೆಯಡಿ ಕಂಪ್ಯೂಟರ್ ಸಂಬಂಧಿತ ಅಪರಾಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಕಾನೂನು ನಿಯಮಗಳ ಅಡಿಯಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಯೂಟ್ಯೂಬ್ ವಿಡಿಯೋದಲ್ಲಿ ಮಾತನಾಡಿದ್ದ ಮೋಹನ್ದಾಸ್, ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯು “ಸಾಮೂಹಿಕ ಅತ್ಯಾಚಾರದಂತಹ ಘಟನೆಗಳಿಗೆ ದಾರಿ ಮಾಡಿಕೊಡಬಹುದು” ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರು ಅತ್ಯಾಚಾರವನ್ನು ಇಷ್ಟಪಡುತ್ತಾರೆ ಹಾಗೂ ಅತ್ಯಾಚಾರಕ್ಕೊಳಗಾಗುವುದನ್ನು ಆನಂದಿಸುವ ಹೆಣ್ಣುಮಕ್ಕಳು ಅಲ್ಲಿದ್ದಾರೆ. ರೇಪ್ ಆದರೂ ಯಾವುದೇ ದೂರುಗಳು ದಾಖಲಾಗುವುದಿಲ್ಲ ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.
ತಮ್ಮ ವಿಡಿಯೋದಲ್ಲಿ ಅವರು ಮುಂದುವರಿದು, ತಾವು ಅಧಿಕಾರದಲ್ಲಿದ್ದರೆ ಕರ್ಫ್ಯೂ ಹೇರಿ ಪ್ರತಿಭಟನಾಕಾರರು ಚದುರಿಹೋಗಲು ಆದೇಶಿಸುತ್ತಿದ್ದೆ ಮತ್ತು ಅವರು ನಿರಾಕರಿಸಿದರೆ “ಗುಂಡು ಹಾರಿಸಲು” ಆದೇಶಿಸುತ್ತಿದ್ದೆ ಎಂದು ಹೇಳಿದ್ದಾರೆ. ಹೀಗೆ ಮಾಡುವುದರಿಂದ ಕೆಲವು ಜನರು ಸಾಯಬಹುದು ಅಥವಾ ಶಾಶ್ವತವಾಗಿ ಗಾಯಗೊಳ್ಳಬಹುದು, ಆದರೆ ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿ ಹತೋಟಿಗೆ ಬಂದು ಶವಗಳನ್ನು ಆಸ್ಪತ್ರೆಗೆ ರವಾನಿಸಬಹುದು ಎಂದು ಪ್ರತಿಪಾದಿಸಿದ್ದರು.
ಎಫ್ಐಆರ್ ಪ್ರಕಾರ, ಈ ಕುರಿತು ಸೈಬರ್ ಪೊಲೀಸರಿಗೆ ಜುಲೈ 29 ರಂದು ಇಮೇಲ್ ಮೂಲಕ ದೂರು ತಲುಪಿದ್ದು, ಠಾಣೆಯ ಅರ್ಜಿ ನೋಂದಣಿಯಲ್ಲಿ ದಾಖಲಿಸಿದ ನಂತರ ಕ್ರೈಮ್ ಸಂಖ್ಯೆ 95/2026 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದವರಲ್ಲಿ ಭಯ ಹುಟ್ಟಿಸುವ ಮೂಲಕ ಮತ್ತು ಅಶಾಂತಿಯನ್ನು ಸೃಷ್ಟಿಸಿ ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ಜುಲೈ 24 ಮತ್ತು 25 ರಂದು ಈ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಪ್ರಸಾರ ಮಾಡಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ,