ಬೆಂಗಳೂರು: ಮಳೆಗೆ ವಿಜಯನಗರ ಕ್ಲಬ್ ಕಾಂಪೌಂಡ್ ಕುಸಿತ; ಆಟೋ ಚಾಲಕ ಶಿವಬೋರಯ್ಯ ದಾರುಣ ಸಾ*ವು!

ಬೆಂಗಳೂರು: ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನರು ಸಾವನಪ್ಪಿದ ಬೆನ್ನಲ್ಲೇ, ಇದೀಗ ನಗರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಇಂದು ಸುರಿದ ಭಾರೀ ಮಳೆಗೆ ಕ್ಲಬ್ ಕಾಂಪೌಂಡ್ ಕುಸಿದು ಆಟೋ ಚಾಲಕ ಸಾವನ್ನಪ್ಪಿರುವಂತಹ ಘಟನೆ ವಿಜಯನಗರದಲ್ಲಿ ನಡೆದಿದೆ.

ಗಂಗೊಂಡನಹಳ್ಳಿಯ ನಿವಾಸಿ ಶಿವಬೋರಯ್ಯ(56) ಮೃತ ಆಟೋ ಚಾಲಕ. ಸದ್ಯ ಶಿವಬೋರಯ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಇಂದು ಸಂಜೆ ಮತ್ತೆ ಎಂಟ್ರಿಕೊಟ್ಟಿದ್ದ ಮಳೆರಾಯ ರಾಜಧಾನಿಯ ದಶದಿಕ್ಕಿನಲ್ಲೂ ಅಬ್ಬರಿಸಿ ಬೊಬ್ಬಿರಿದಿದ್ದ. ಅಂಡರ್ಪಾಸ್ ಜಲಾವೃತ ಸೇರಿದಂತೆ ಸಾಲು ಸಾಲು ಮರಗಳು ಧರೆಗುರುಳಿದು ಅವಾಂತರಗಳು ಸಂಭವಿಸಿವೆ. ಈ ಮಧ್ಯೆ ಬಲಿ ಕೂಡ ಪಡೆದಿದೆ. ವಿಜಯನಗರ ಕ್ಲಬ್ ಕಾಂಪೌಂಡ್ ಪಕ್ಕದಲ್ಲೇ ನಿಲ್ಲಿಸಿದ್ದ ಆಟೋ ಮೇಲೆ ಕಾಂಪೌಂಡ್ ಕುಸಿದು ಬಿದ್ದು ಆಟೋ ಚಾಲಕ ಸಾವನ್ನಪ್ಪಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.