ಬಹ್ರೇನ್: ತಾಯಿಯೊಂದಿಗೆ ಓಣಂ ಆಚರಿಸಲು ಬಂದಿದ್ದ ಮೂರು ವರ್ಷದ ಕಂದಮ್ಮ ಬಾತ್ಟಬ್ಗೆ ಬಿದ್ದು ದಾರುಣ ಸಾ*ವು

ಮನಾಮ (ಬಹ್ರೇನ್): ತಾಯಿಯೊಂದಿಗೆ ಓಣಂ ಹಬ್ಬ ಆಚರಿಸಲು ಬಹ್ರೇನ್ಗೆ ಆಗಮಿಸಿದ್ದ ಕೇರಳ ಮೂಲದ ಮೂರು ವರ್ಷದ ಬಾಲಕನೊಬ್ಬ, ಆಕಸ್ಮಿಕವಾಗಿ ಮನೆಯ ಬಾತ್ಟಬ್ಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಕೇರಳದ ಕೊಟ್ಟಾಯಂ ಮೂಲದ ಮೇಘಾ ಎಂಬವರ ಏಕೈಕ ಪುತ್ರ ಧ್ಯಾನ್ ಸೂರ್ಯ ಮೃತಪಟ್ಟ ದುರ್ದೈವಿ.

ತಾಯಿ ಮೇಘಾ ಅವರು ಬಹ್ರೇನ್ನಲ್ಲಿ ಉದ್ಯೋಗದಲ್ಲಿದ್ದ ಕಾರಣ, ಮಗ ಧ್ಯಾನ್ನನ್ನು ಕೇರಳದಲ್ಲಿದ್ದ ನಿಕಟ ಸಂಬಂಧಿಕರ ಆರೈಕೆಯಲ್ಲಿ ಬಿಡಲಾಗಿತ್ತು. ಓಣಂ ರಜಾದಿನಗಳನ್ನು ತಾಯಿಯೊಂದಿಗೆ ಸಂಭ್ರಮದಿಂದ ಕಳೆಯಲು ಬಾಲಕ ಧ್ಯಾನ್ ಕೇವಲ ನಾಲ್ಕು ದಿನಗಳ ಹಿಂದಷ್ಟೇ ಬಹ್ರೇನ್ಗೆ ತಲುಪಿದ್ದನು. ತಾಯಿ ಮೇಘಾ ಅವರು ಅಡುಗೆಮನೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದಾಗ, ನಿದ್ರೆಯಿಂದ ಎದ್ದ ಮಗು ಯಾರ ಗಮನಕ್ಕೂ ಬಾರದೆ ಸ್ನಾನಗೃಹಕ್ಕೆ ತೆರಳಿದೆ. ಅಲ್ಲಿ ನೀರು ತುಂಬಿದ್ದ ಬಾತ್ಟಬ್ ಬಳಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಒಳಗೆ ಬಿದ್ದಿದ್ದಾನೆ ಎನ್ನಲಾಗಿದೆ.
ಬಾತ್ಟಬ್ನಲ್ಲಿ ಮಗು ಬಿದ್ದಿರುವುದನ್ನು ಗಮನಿಸಿದ ತಾಯಿ, ತಕ್ಷಣವೇ ಮಗುವನ್ನು ಸಲ್ಮಾನಿಯಾ ವೈದ್ಯಕೀಯ ಸಂಕೀರ್ಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ವೈದ್ಯರ ಸತತ ಪ್ರಯತ್ನದ ಹೊರತಾಗಿಯೂ ಮಗುವನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಆಸ್ಪತ್ರೆಗೆ ತಲುಪಿಸುವಷ್ಟರಲ್ಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದಾರೆ. ತಾಯಿ ಮೇಘಾ ಅವರು ಬಹ್ರೇನ್ ಕೇರಳೀಯ ಸಮಾಜಂ (BKS) ನ ಸಕ್ರಿಯ ಸದಸ್ಯೆಯಾಗಿದ್ದು, ಸಂಘದ ಸದಸ್ಯರು ಹಾಗೂ ಭಾರತೀಯ ವಲಸಿಗರು ಕಂಬನಿ ಮಿಡಿದಿದ್ದಾರೆ. ಮಗುವಿನ ಮೃತದೇಹವನ್ನು ಅಂತಿಮ ವಿಧಿವಿಧಾನಗಳಿಗಾಗಿ ಸ್ವದೇಶವಾದ ಕೇರಳಕ್ಕೆ ಕೊಂಡೊಯ್ಯಲು ಅಗತ್ಯ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.