ರಾಷ್ಟ್ರಗೀತೆ ಮೊಳಗುತ್ತಿದ್ದಾಗಲೇ ಕಾರ್ಯಕ್ರಮದಿಂದ ಹೊರನಡೆದ ಯುಪಿ ಸ್ಪೀಕರ್ ಸತೀಶ್ ಮಹಾನಾ.

ಉನ್ನಾವೊ: ಉತ್ತರ ಪ್ರದೇಶ ವಿಧಾನಸಭೆಯ ಸ್ಪೀಕರ್ ಸತೀಶ್ ಮಹಾನಾ ಅವರು ಶನಿವಾರ ಉನ್ನಾವೊದಲ್ಲಿ ನಡೆದ ಕಾರ್ಯಕ್ರಮದಿಂದ ರಾಷ್ಟ್ರಗೀತೆ ಮೊಳಗುತ್ತಿದ್ದಾಗಲೇ ಹೊರನಡೆದರು. ಈ ಘಟನೆಗೆ ಸಂಬಂಧಿಸಿದ ವಿಡಿಯೊ ರವಿವಾರ ಬಹಿರಂಗವಾಗಿದೆ.
ಪ್ರಾಂಶುಪಾಲರ ಮಂಡಳಿಯ ಸಮಾವೇಶ ಹಾಗೂ ಶೈಕ್ಷಣಿಕ ವಿಚಾರ ಸಂಕಿರಣಕ್ಕೆ ಮಹಾನಾ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಬಂದಾಗ ಶಿಷ್ಟಾಚಾರದಂತೆ ಪೊಲೀಸರು ಅವರಿಗೆ ಗೌರವ ರಕ್ಷೆ ನೀಡಿದರು. ಇದಾದ ಬಳಿಕ ರಾಷ್ಟ್ರಗೀತೆ ಆರಂಭವಾಯಿತು.
ರಾಷ್ಟ್ರಗೀತೆ ಮೊಳಗುತ್ತಿದ್ದಾಗ ಮಹಾನಾ ಅವರು ಸೆಲ್ಯೂಟ್ ಮಾಡಿದರು. ನಂತರ ವೇದಿಕೆಯ ಹಿಂಭಾಗಕ್ಕೆ ತೆರಳಿ ಕೆಳಗಿಳಿದರು. ಬಳಿಕ ತಮ್ಮ ಕಾರಿನಲ್ಲಿ ಕುಳಿತು ಕಾರ್ಯಕ್ರಮದ ಸ್ಥಳದಿಂದ ಹೊರಟುಹೋದರು. ಈ ವೇಳೆ ಅವರ ಬೆಂಬಲಿಗರೂ ಅವರ ಬಳಿ ತೆರಳಿ ಪಾದ ಮುಟ್ಟಿದರು.ಈ ಘಟನೆ ಪೂರಣ್ ನಗರದ ಶಾಲೆಯಲ್ಲಿ ನಡೆದಿದೆ ಎನ್ನಲಾಗಿದೆ. ಆದರೆ, ಕಾರ್ಯಕ್ರಮದ ಆಯೋಜಕರು ‘ದೈನಿಕ್ ಭಾಸ್ಕರ್ ನೀಡಿದ ಮಾಹಿತಿ ಪ್ರಕಾರ, ಮಹಾನಾ ಅವರು ನಿಂತಿದ್ದ ಸ್ಥಳದಿಂದ ರಾಷ್ಟ್ರಗೀತೆ ನುಡಿಸುತ್ತಿದ್ದ ಸ್ಥಳ ಸಾಕಷ್ಟು ದೂರದಲ್ಲಿತ್ತು ಎನ್ನಲಾಗಿದೆ.
40 ನಿಮಿಷ ಕಾರ್ಯಕ್ರಮದಲ್ಲಿ ಭಾಗಿ
ಮಹಾನಾ ಅವರು ಶನಿವಾರ ಸಂಜೆ 4ರ ಸುಮಾರಿಗೆ ಎಸ್ವಿಎಂ ಇಂಟರ್ ಕಾಲೇಜಿನ ಆಸ್ತಾ ಸಭಾಂಗಣಕ್ಕೆ ಬಂದಿದ್ದರು. ಸುಮಾರು 40 ನಿಮಿಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ‘ಶಿಕ್ಷಾ ಪ್ರಭಾ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.ಪ್ರಾಂಶುಪಾಲರು ಮತ್ತು ಶಿಕ್ಷಣ ತಜ್ಞರು ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಮಹಾನಾ ಹೇಳಿದರು. ಶಿಕ್ಷಣ ಸಂಸ್ಥೆಗಳು ದೇಶದ ಅಭಿವೃದ್ಧಿಗೆ ಅಡಿಪಾಯವಾಗಿವೆ. ದೇಶದ ಸಂಸ್ಥೆಗಳು ಬಲಿಷ್ಠವಾಗಿದ್ದರೆ ದೇಶವೂ ಬಲಿಷ್ಠವಾಗಿರುತ್ತದೆ ಎಂದರು.
ರಾಮ ಮಂದಿರಕ್ಕೆ ನೀಡಿದ ಹಣವನ್ನು ದೇವರ ಪಾದಗಳಿಗೆ ಸಮರ್ಪಿಸಲಾಗಿದೆ. ಆ ಹಣವನ್ನು ಮರಳಿ ಕೇಳುವ ಮಾತು ಭಕ್ತರಿಗೆ ನೋವುಂಟು ಮಾಡುತ್ತದೆ ಎಂದೂ ಅವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ನಾಯಕರಿಂದ ಟೀಕೆ
ಉನ್ನಾವೊ ಕಾಂಗ್ರೆಸ್ ಸಮಿತಿ ನಾಯಕ ದಿನೇಶ್ ಶುಕ್ಲಾ ಅವರು ಮಹಾನಾ ಅವರನ್ನು ಟೀಕಿಸಿದ್ದಾರೆ. ಶಿಷ್ಟಾಚಾರದಂತೆ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ರಾಷ್ಟ್ರಗೀತೆ ನಡೆಯುತ್ತಿದ್ದಾಗಲೇ ಅವರು ಕಾರ್ಯಕ್ರಮದಿಂದ ಹೊರಟುಹೋದರು ಎಂದು ಆರೋಪಿಸಿದ್ದಾರೆ.-ಇದು ರಾಷ್ಟ್ರಗೀತೆಗೆ ಮಾಡಿದ ಅವಮಾನವಲ್ಲವೇ?’ ಎಂದು ಶುಕ್ಲಾ ಪ್ರಶ್ನಿಸಿದ್ದಾರೆ.
ಘಟನೆ ಕುರಿತು AAP ಕೂಡ ಟೀಕಿಸಿದೆ. ‘ಉತ್ತರ ಪ್ರದೇಶ ವಿಧಾನಸಭೆಯ ಸ್ಪೀಕರ್ ಮತ್ತು BJP ನಾಯಕ ಸತೀಶ್ ಮಹಾನಾ ಅವರಿಗೆ ರಾಷ್ಟ್ರಗೀತೆಯನ್ನು ಗೌರವಿಸಲು ಸಮಯವೂ ಇಲ್ಲ’ ಎಂದು AAP ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಇಂದು ಇಡೀ ದೇಶ ಬಿಜೆಪಿಗೆ ಒಂದು ಪ್ರಶ್ನೆ ಕೇಳುತ್ತಿದೆ: ರಾಷ್ಟ್ರಗೀತೆಯನ್ನು ಅಗೌರವಿಸಿದ ತನ್ನ ನಾಯಕನ ವಿರುದ್ಧ ಬಿಜೆಪಿ ಯಾವ ಕ್ರಮ ಕೈಗೊಳ್ಳುತ್ತದೆ?’ ಎಂದು AAP ಪ್ರಶ್ನಿಸಿದೆ.’ರಾಜೀನಾಮೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ’ಆಗಸ್ಟ್ 5ರಂದು ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ಮಹಾನಾ ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಿದ್ದರು. ಸಮಾಜವಾದಿ ಪಕ್ಷದ ಸದಸ್ಯರ ಗದ್ದಲದಿಂದ ತಮಗೆ ನೋವಾಗಿದೆ ಎಂದು ಹೇಳಿದ್ದರು.
‘ನನ್ನ ಮನಸ್ಸಿನಲ್ಲಿ ನೋವು ಇದೆ. ಮೊದಲ ಬಾರಿಗೆ ನಮ್ಮ ಪ್ರಯತ್ನಗಳಲ್ಲಿ ಎಲ್ಲೋ ಒಂದು ಲೋಪವಿದೆ ಎಂದು ನನಗೆ ಅನಿಸಿತು. ಅಥವಾ ಡಾ. ಅಂಬೇಡ್ಕರ್ ಅವರ ಹೇಳಿಕೆ ಸರಿಯಾಗಿರಬಹುದು. ಲೋಪ ಸಂವಿಧಾನದಲ್ಲಿಲ್ಲ, ವ್ಯಕ್ತಿಗಳಲ್ಲಿದೆ’ ಎಂದು ಅವರು ಹೇಳಿದ್ದರು.
‘ನನ್ನ ದೀರ್ಘ ರಾಜಕೀಯ ಇನ್ನಿಂಗ್ಸ್ ಈಗ ಅಂತಿಮ ಹಂತದಲ್ಲಿದೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಾನು ಮಾಡಿದ್ದು ಸರಿಯೇ ಅಥವಾ ತಪ್ಪೇ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನಾನು ಈ ಕುರ್ಚಿಗೆ ಅರ್ಹನೇ ಅಥವಾ ಅಲ್ಲವೇ ಎಂಬುದನ್ನೂ ಪರಿಗಣಿಸುತ್ತೇನೆ. ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದು ಮಹಾನಾ ಹೇಳಿದ್ದರು.
