ಸಂಭಾಜಿನಗರ: ಆತ್ಮಹ*ತ್ಯೆಗೆ ಯತ್ನಿಸಿದ ಮಗನನ್ನು ಉಳಿಸಲು ಹೋಗಿ ಪ್ರಪಾತಕ್ಕೆ ಬಿದ್ದು ತಂದೆ-ತಾಯಿ ಸೇರಿದಂತೆ ಮೂವರು ಸಾ*ವು!

ಸಂಭಾಜಿನಗರ ಅಗಸ್ಟ್ 21: : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಗನನ್ನು ಕೊನೆ ಕ್ಷಣದಲ್ಲಿ ರಕ್ಷಿಸಲು ಹೋಗಿ ತಂದೆ-ತಾಯಿ ಇಬ್ಬರೂ ಆಳವಾದ ಕ್ವಾರಿಗೆ ಬಿದ್ದು, ಒಂದೇ ಕುಟುಂಬದ ಮೂವರು ದಾರುಣವಾಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಧುಲೆ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ಪರ್ವತ ಪ್ರದೇಶದಲ್ಲಿ ನಡೆದಿದೆ. ಇಂದು (ಆಗಸ್ಟ್ 21) ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.ಮೃತರನ್ನು ಮುರಳೀಧರ್ ದಾಮೋಧರ್ ಚಂದಗುಡೆ (48), ಅವರ ಪತ್ನಿ ಸಂಗೀತಾ ಮುರಳೀಧರ್ ಚಂದಗುಡೆ (42) ಹಾಗೂ ಮಗ ಕುನಾಲ್ ಮುರಳೀಧರ್ ಚಂದಗುಡೆ (19) ಎಂದು ಗುರುತಿಸಲಾಗಿದೆ. ಈ ಕುಟುಂಬ ಮೂಲತಃ ಜಲ್ನಾ ಜಿಲ್ಲೆಯ ಅಂಬಾದ್ ತಾಲೂಕಿನ ಕರ್ಜತ್ ಪಿಪಲ್ಗಾಂವ್ನವರಾಗಿದ್ದು, ಪ್ರಸ್ತುತ ಛತ್ರಪತಿ ಸಂಭಾಜಿನಗರದ ಝಲ್ತಾ ಫಾಟಾ ಸಮೀಪ ವಾಸವಾಗಿದ್ದರು.
ಕೌಟುಂಬಿಕ ವಿವಾದದಿಂದ ಮುನಿಸಿಕೊಂಡಿದ್ದ 19 ವರ್ಷದ ಯುವಕ ಕುನಾಲ್ ಬೆಳಿಗ್ಗೆ 10 ಗಂಟೆಯಿಂದ ಪರ್ವತದ ಅತ್ಯಂತ ಅಪಾಯಕಾರಿ ಅಂಚಿನಲ್ಲಿ ನಿಂತಿದ್ದ. ಮಾಹಿತಿ ತಿಳಿದ ತಕ್ಷಣ ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಧಾವಿಸಿ ಸುಮಾರು 3 ಗಂಟೆಗಳ ಕಾಲ ಮನವೊಲಿಸಲು ಯತ್ನಿಸಿದರು. ತಾಯಿ ಕೈಮುಗಿದು ಬೇಡಿಕೊಳ್ಳುತ್ತಿದ್ದಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೆಳಗೆ ರಕ್ಷಣಾ ಬಲೆಯನ್ನು (Safety Net) ಅಳವಡಿಸಿದ್ದರು.
ಆದರೆ ಮಧ್ಯಾಹ್ನ 1 ಗಂಟೆಗೆ ಯುವಕ ಹಠಾತ್ತನೆ ಪ್ರಪಾತಕ್ಕೆ ಹಾರಿದಾಗ, ಆತನನ್ನು ಹಿಡಿಯಲು ಓಡಿದ ತಂದೆ ಸಮತೋಲನ ತಪ್ಪಿ ಬಿದ್ದರು. ಈ ಭೀಕರ ದೃಶ್ಯ ಕಂಡ ತಾಯಿಯೂ ಪ್ರಪಾತಕ್ಕೆ ಹಾರಿದರು. ಮೂವರೂ ನೇರವಾಗಿ ಆಳವಾದ ಕಲ್ಲುಗಣಿಯ ದೊಡ್ಡ ಬಂಡೆಗಳಿಗೆ ಡಿಕ್ಕಿ ಹೊಡೆದು ತಲೆಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಕೊನೆಯುಸಿರೆಳೆದರು. ಪೊಲೀಸರು ಶವಗಳನ್ನು ಹೊರತೆಗೆದು ಘಾಟಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
