ಬಿಜೆಪಿ ಕೌನ್ಸಿಲರ್ ದೋಣಿಯಲ್ಲಿ ಮಾಂಸಾಹಾರ ಸೇವನೆ ಆರೋಪ, ಸಮಾನ ಕ್ರಮಕ್ಕೆ ಆಗ್ರಹ!

ವಾರಾಣಸಿ: ಗಂಗಾ ನದಿಯಲ್ಲಿ ದೋಣಿಯಲ್ಲಿ ಮಾಂಸಾಹಾರ ಸೇವಿಸಿದ ಆರೋಪದ ಮೇಲೆ ಕೆಲ ಮುಸ್ಲಿಂ ಯುವಕರು ಬಂಧನಕ್ಕೀಡಾಗಿದ್ದ ಪ್ರಕರಣದ ವಿವಾದ ಇನ್ನೂ ಮಾಸುವ ಮುನ್ನವೇ, ಅದೇ ರೀತಿಯ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ರಾಜಕೀಯ ಚರ್ಚೆಗೆ ಕಾರಣವಾಗಿದೆ.
ವಾರಾಣಸಿಯ ದಶಾಶ್ವಮೇಧ ಘಾಟ್ನ ಬಿಜೆಪಿ ಕೌನ್ಸಿಲರ್ ಮಾಲಕತ್ವದ ದೋಣಿಯಲ್ಲಿ ಕೆಲವರು ಔತಣಕೂಟಕ್ಕಾಗಿ ಮಾಂಸಾಹಾರ ಖಾದ್ಯ ತಯಾರಿಸಿ ಸೇವಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೊವನ್ನು ‘ಆಲ್ಟ್ ನ್ಯೂಸ್’ ಫ್ಯಾಕ್ಟ್ ಚೆಕ್ ವೇದಿಕೆಯ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ವಿಡಿಯೊ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲ ತಾಣಗಳ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಕೆಲವರು ವಿಡಿಯೊದಲ್ಲಿರುವ ಆಹಾರವು ಮಾಂಸಾಹಾರವಲ್ಲ, ಸೋಯಾಬೀನ್ ಎಂದು ವಾದಿಸಿದ್ದಾರೆ. ಮತ್ತೊಂದೆಡೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಕೆಲವರ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಇದೇ ರೀತಿಯ ಆರೋಪದ ಮೇಲೆ ದೋಣಿಯಲ್ಲಿ ಔತಣಕೂಟ ನಡೆಸುತ್ತಿದ್ದ ಮುಸ್ಲಿಂ ಯುವಕರನ್ನು ಬಂಧಿಸಲಾಗಿತ್ತು. ಆದರೆ, ಆಗ ನಡೆದ ಕ್ರಮವನ್ನು ದೊಡ್ಡ ವಿಷಯವನ್ನಾಗಿ ಬಿಂಬಿಸಲಾಗಿತ್ತು ಎಂದು ಟೀಕಿಸಿರುವ ಕೆಲವು ಸಾಮಾಜಿಕ ಮಾಧ್ಯಮದಲ್ಲಿ ಜನರು, ಈಗಿನ ಘಟನೆಯೂ ಅದೇ ಮಾನದಂಡದಲ್ಲಿ ಪರಿಶೀಲನೆಗೆ ಒಳಪಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
