ಉತ್ತರಾಖಂಡ: ಡೆಹ್ರಾಡೂನ್ನಲ್ಲಿ ನೀರಿಗಾಗಿ ರಕ್ತಪಾತ; ಬಿಜೆಪಿ ಕಾರ್ಯಕರ್ತನ ಹ*ತ್ಯೆ ಬೆನ್ನಲ್ಲೇ ಆರೋಪಿ ಮನೆ ಧ್ವಂಸ!

ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ವಿಕಾಸ್ನಗರ ಪ್ರದೇಶದಲ್ಲಿ ಕಾಲುವೆ ನೀರಿನ ಹಂಚಿಕೆ ವಿಚಾರವಾಗಿ ನಡೆದ ಘರ್ಷಣೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದು, ಘಟನೆಯ ಬಳಿಕ ಉಂಟಾದ ಉದ್ವಿಗ್ನ ಪರಿಸ್ಥಿತಿಯ ನಡುವೆ ಆರೋಪಿಯ ಮನೆಯನ್ನು ಜಿಲ್ಲಾಡಳಿತ ಧ್ವಂಸಗೊಳಿಸಿದೆ.
ಬೈರಾಗಿವಾಲಾ ಗ್ರಾಮದಲ್ಲಿ ಶನಿವಾರ ಸಂಜೆ 6.30ರ ಸುಮಾರಿಗೆ ಬಿಜೆಪಿ ಕಾರ್ಯಕರ್ತ ವಿನೋದ್ ಕುಮಾರ್ (44) ಹಾಗೂ ಅವರ ನೆರೆಹೊರೆಯ ಇಮ್ಮಿಯಾಝ್ ನಡುವೆ ಕಾಲುವೆ ನೀರಿನ ಹಂಚಿಕೆ ವಿಚಾರವಾಗಿ ವಾಗ್ವಾದ ನಡೆದಿದೆ. ಬಳಿಕ ಅದು ಘರ್ಷಣೆಗೆ ತಿರುಗಿದ್ದು, ಇಮ್ಮಿಯಾಝ್ ಮತ್ತು ಆತನ ಬೆಂಬಲಿಗರು ವಿನೋದ್ ಕುಮಾರ್ ಹಾಗೂ ಅವರ ಸಹೋದರರಾದ ಅಶೋಕ್ ಕುಮಾರ್ ಮತ್ತು ರಾಜೇಶ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ಮೂವರನ್ನು ಲೆಹ್ಮನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿನೋದ್ ಕುಮಾರ್ ಮೃತಪಟ್ಟರು. ಅಶೋಕ್ ಕುಮಾರ್ ಮತ್ತು ರಾಜೇಶ್ ಕುಮಾರ್ ಗಾಯಗೊಂಡಿದ್ದಾರೆ ಎಂದು ಡೆಹ್ರಾಡೂನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಂದ್ರ ಸಿಂಗ್ ದೋಭಾಲ್ ತಿಳಿಸಿದ್ದಾರೆ.
ವಿನೋದ್ ಕುಮಾರ್ ಸಾವಿನ ಬಳಿಕ ಆ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಉಂಟಾಯಿತು. ಆರೋಪಿಗಳ ವಿರುದ್ಧ ‘ಬುಲ್ಲೋಝರ್ ಕ್ರಮ’ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಜನರು ಕಲ್ಲು ತೂರಾಟ ನಡೆಸಿ, ಪ್ರಮುಖ ಆರೋಪಿಯ ಮನೆಗೆ ಬೆಂಕಿ ಹಚ್ಚಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸ್ ಪಡೆಗಳು ಹಾಗೂ ಅರೆಸೈನಿಕ ಪಡೆಯನ್ನು ನಿಯೋಜಿಸಲಾಗಿದೆ.
ಪ್ರತಿಭಟನೆಯ ಹಿನ್ನೆಲೆ ಆರೋಪಿಯ ಇನ್ನೊಂದು ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಜಿಲ್ಲಾಡಳಿತ ನೆಲಸಮಗೊಳಿಸಿದೆ.
ಧ್ವಂಸ ಕ್ರಮದ ಕುರಿತು ಪ್ರತಿಕ್ರಿಯಿಸಿದ ಉತ್ತರಾಖಂಡ ಬಿಜೆಪಿ ಘಟಕದ ಅಧ್ಯಕ್ಷ ಮಹೇಂದ್ರ ಭಟ್, ‘ಆರೋಪಿಗಳ ವಿರುದ್ಧ ಕೈಗೊಂಡಿರುವ ಈ ಕ್ರಮವು ಅಪರಾಧದ ಕುರಿತು ಸರಕಾರದ ಶೂನ್ಯ ಸಹಿಷ್ಣುತೆ ನೀತಿಯ ಮೊದಲ ಸೂಚನೆಯಾಗಿದೆ’ ಎಂದು ಹೇಳಿದ್ದಾರೆ.
