ಅಪಘಾತದ ಬಳಿಕ ಕನ್ವಾರಿಯಾಗಳ ಗುಂಪಿನಿಂದ ಟ್ರಕ್ ಚಾಲಕನ ಮೇಲೆ ಹಲ್ಲೆ; ಚಿಕಿತ್ಸೆ ಫಲಿಸದೆ ಚಾಲಕ ಸಾವು!”

ಲಕ್ಕೋ : ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಗರ್ಮುಖೇಶ್ವರ ಬಳಿ ಅಪಘಾತ ಘಟನೆಯೊಂದರ ಬಳಿಕ ಕಾರಿಯಾಗಳ ಗುಂಪೊಂದು ಟ್ರಕ್ ಚಾಲಕನನ್ನು ಥಳಿಸಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಟ್ರಕ್ ಚಾಲಕ ಚಿಕಿತ್ಸೆ ಫಲಿಸದೆ ನಾಲ್ಕು ದಿನಗಳ ನಂತರ ಮೃತಪಟ್ಟಿದ್ದಾರೆ.
ಮೊರಾದಾಬಾದ್ ನಿವಾಸಿ ಅಝೀಂ ಅಲಿ(24) ಮೃತರು. ಘಟನೆಗೆ ಸಂಬಂಧಿಸಿ ಗರ್ಮುಖೇಶ್ವರ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ಏನಿದು ಘಟನೆ?
ಮೊರಾದಾಬಾದ್ ನಿವಾಸಿ ಅಝೀಂ ಜುಲೈ 31 ರಂದು ಪತ್ನಿ ಬಳಿ ದಿಲ್ಲಿಗೆ ತೆರಳುವುದಾಗಿ ಹೇಳಿ ಪಿಕಪ್ ಟ್ರಕ್ನಲ್ಲಿ ತೆರಳಿದ್ದರು. ಹಾಪುರ್ನ ಗಢಮುಖೇಶ್ವರದಲ್ಲಿರುವ ಶಿವ ಧಾಬಾ ಬಳಿ ಅಝೀಂ ಚಲಾಯಿಸುತ್ತಿದ್ದ ಪಿಕಪ್ ಟ್ರಕ್ ಕನ್ವಾರಿಯಾ ಯಾತ್ರಿಕರ ಗುಂಪು ಬಾಡಿಗೆಗೆ ಪಡೆದ ಆಟೋ ರಿಕ್ಷಾಗೆ ಢಿಕ್ಕಿ ಹೊಡೆದಿದೆ. ಅಝೀಂ ಮನೆಯಿಂದ ಹೊರಟ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿತ್ತು.

ಪಿಕಪ್ ಟ್ರಕ್ ನಿಯಂತ್ರಣ ತಪ್ಪಿ ಆಟೋ ರಿಕ್ಷಾದ ಪಕ್ಕದಲ್ಲಿ ನಿಂತಿದ್ದ ಆಟೋ ಚಾಲಕ ಅರ್ಮಾನ್ಗೆ ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಅರ್ಮಾನ್ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೆ ಅಝೀಂನನ್ನು ಪಿಕಪ್ ಟ್ರಕ್ ನಿಂದ ಹೊರಗೆಳೆದು ಕನ್ಸಾರಿಯಾಗಳು ಥಳಿಸಿದ್ದಾರೆ.
ದಿಲ್ಲಿಗೆ ತೆರಳಿದ ಪತಿಯ ಕರೆ ಬರದ ಹಿನ್ನೆಲೆ ಮರುದಿನ ಪತ್ನಿ ಆತಂಕಕ್ಕೊಳಗಾಗಿದ್ದರು. ಆಗಸ್ಟ್ 2ರಂದು ಅಝೀಂ ಅವರು ಮೀರತ್ನ ಆಸ್ಪತ್ರೆಯಲ್ಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಅಝೀಂ ಸಹೋದರ ಹೇಳಿದ್ದೇನು?
ಈ ಕುರಿತು ಮಾಹಿತಿ ನೀಡಿದ ಅಝೀಂ ಅವರ ಹಿರಿಯ ಸಹೋದರ ಮಕ್ಯೂಲ್ ಅಲಿ, ಅಝೀಂಗೆ ಅಪಘಾತವಾಗಿದೆ ಎಂಬುದು ನಮಗೆ ತಿಳಿಯಿತು. ನಾವು ಆಸ್ಪತ್ರೆಗೆ ಹೋಗಿ ನೋಡಿದಾಗ ಅವರ ದೇಹಕ್ಕೆ ಬ್ಯಾಂಡೇಜ್ಗಳನ್ನು ಸುತ್ತಲಾಗಿತ್ತು. ವೈದ್ಯರು ಅವರು ಕೋಮಾದಲ್ಲಿದ್ದಾರೆ ಎಂದು ತಿಳಿಸಿದರು. ನನ್ನ ಸಹೋದರನ ಪಿಕಪ್ ಟ್ರಕ್ ಕನ್ಸಾರಿಯಾಗಳಿದ್ದ ಆಟೋಗೆ ಢಿಕ್ಕಿ ಹೊಡೆದಿರುವುದು ತಿಳಿಯಿತು. ನಂತರ ಆಟೋದಲ್ಲಿದ್ದ ಕನ್ವಾರಿಯಾಗಳು ನನ್ನ ಸಹೋದರನನ್ನು ಹೊರಗೆ ಎಳೆದು ನಿರ್ದಯವಾಗಿ ಥಳಿಸಿದ್ದಾರೆ. ಬಳಿಕ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಹೇಳಿದರು.
ಅಝೀಂ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗದ ಹಿನ್ನೆಲೆ ಅವರನ್ನು ದಿಲ್ಲಿಯ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಗಸ್ಟ್ 4ರಂದು ರಾತ್ರಿ ಸುಮಾರು 9 ಗಂಟೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ನನ್ನ ಸಹೋದರನಿಂದ ಏನಾದರೂ ತಪ್ಪಾಗಿದ್ದರೆ ಆತನನ್ನು ಪೊಲೀಸರಿಗೆ ಒಪ್ಪಿಸಬಹುದಿತ್ತಲ್ಲವೇ? ಆತನನ್ನು ಥಳಿಸಿದ್ದೇಕೆ ಎಂದು ಮಕ್ಯೂಲ್ ಪ್ರಶ್ನಿಸಿದರು–
ಎರಡು ಪ್ರತ್ಯೇಕ ಪ್ರಕರಣ ದಾಖಲು:
ಅಝೀಂ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗರ್ಮುಖೇಶ್ವರ್ ಪೊಲೀಸ್ ಠಾಣೆಯಲ್ಲಿ ಮನೀಶ್, ಅಂಕಿತ್, ಲೋಕೇಶ್, ಶಿವಂ ಮತ್ತು ಆಟೋ ಚಾಲಕ ಅರ್ಮಾನ್ ಮತ್ತು ಮತ್ತಿಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳ ವಿರುದ್ಧ ಕೊಲೆ ಯತ್ನ ಗಲಭೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.
‘ಅಝೀಂ ಅವರ ಕುಟುಂಬದಿಂದ ಲಿಖಿತ ದೂರನ್ನು ಸ್ವೀಕರಿಸಿದ್ದೇವೆ ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ” ಎಂದು ಹಾಪುರ್ ಪೊಲೀಸರು ಎಕ್ಸ್ನಲ್ಲಿ ತಿಳಿಸಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದು ಬಂದಿದೆ.
ಇದೇ ವೇಳೆ, ಆಟೋ ಚಾಲಕ ಅರ್ಮಾನ್ ಅವರ ತಂದೆ ಇಮ್ರಾನ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್ಐಆರ್ ದಾಖಲಿಸಿದ್ದಾರೆ.
“ನನ್ನ ಮಗ ಹಾಪುರ್ನ ಶಿವ ಧಾಬಾ ಬಳಿ ನಿಂತಿದ್ದಾಗ, ಅಝೀಂ ಚಲಾಯಿಸುತ್ತಿದ್ದ ಪಿಕಪ್ ಟ್ರಕ್ ಆತನಿಗೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಆತ ರಸ್ತೆಗೆ ಬಿದ್ದಿದ್ದು, ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರಿಗೆ ಸಂಬಂಧಿಸಿ ಅಝೀಂ ವಿರುದ್ಧ ಪೊಲೀಸರು ಕೊಲೆ ಯತ್ನ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿ ಮಾಡಿದೆ.