ತೆಲಂಗಾಣ: ಪ್ರಧಾನಿ ಮೋದಿಯೇ ನನ್ನ ಸಾವಿಗೆ ಕಾರಣ ಎಂದು ಬರೆದಿಟ್ಟು ಪೇಂಟರ್ ಆತ್ಮಹ*ತ್ಯೆ!

ಹೈದರಾಬಾದ್: ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಗೊಲ್ಲಪಲ್ಲಿ ಗ್ರಾಮದ 25 ವರ್ಷದ ಪೇಂಟರ್ ಒಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಕೊಠಡಿಯಿಂದ ಪತ್ತೆಯಾದ SI R ಫಾರಂನಲ್ಲಿ ಬರೆದ ಡೆತ್ ನೋಟ್ ನಲ್ಲಿ ‘ನನ್ನ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಕಾರಣ’ ಎಂದು ಉಲ್ಲೇಖಿಸಲಾಗಿದೆ. ಡೆತ್ ನೋಟ್ ನ ಫೋಟೋವನ್ನು ಅವರು ತಮ್ಮ ವಾಟ್ಸಾಪ್ ಸ್ಟೇಟಸ್ನಲ್ಲಿಯೂ ಪ್ರಕಟಿಸಿದ್ದರು.
ಮೃತರನ್ನು ಕಾರ್ಮಿಕ ಬಾಲಯ್ಯ ಅವರ ಪುತ್ರ ಪಿ. ವಂಶಿ (25) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ವಂಶಿ ಇಂಟರ್ಮೀಡಿಯೇಟ್ರೆಗೆ ವ್ಯಾಸಂಗ ಮಾಡಿದ್ದು, ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ಸಂಜೆ ಕುಟುಂಬದ ವಿಷಯಕ್ಕೆ ಸಂಬಂಧಿಸಿ ತಾಯಿ ಭಾರತಿ ಅವರೊಂದಿಗೆ ಜಗಳವಾಡಿದ್ದರು. ಬಳಿಕ ಸಂಜೆ 6 ಗಂಟೆ ಸುಮಾರಿಗೆ ಮನೆಯಿಂದ ಹೊರಟು ರಾತ್ರಿ 10 ಗಂಟೆ ವೇಳೆಗೆ ಮರಳಿದ್ದರು. ಊಟ ಮಾಡಿದ ನಂತರ ತಮ್ಮ ಕೊಠಡಿಯಲ್ಲಿ ಮಲಗಿದ್ದರು.

ಗುರುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ವಂಶಿ ಅವರ ಕೊಠಡಿಯಿಂದ ಟಿವಿಯ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ತಂದೆ ಬಾಲಯ್ಯ ಅವರು ಪರಿಶೀಲನೆ ನಡೆಸಿದಾಗ, ಸೀಲಿಂಗ್ ಫ್ಯಾನ್ನ ರಾಡ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪುತ್ರ ಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಗ್ರಾಮಸ್ಥರ ಮಾಹಿತಿ ಮೇರೆಗೆ ಯೆಲ್ಲಾರೆಡ್ಡಿಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಂಶಿ ಅವರ ಸಹಿಯಿದ್ದ ಖಾಲಿ ಎಣಿಕೆ ನಮೂನೆಯಲ್ಲಿ ಬರೆದ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ.
ಆ ಪತ್ರದಲ್ಲಿ, ‘ಗೌರವಾನ್ವಿತ ಪೊಲೀಸರೇ, ನನ್ನ ತೊಂದರೆಯನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ನನ್ನ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಕಾರಣ. ನನ್ನ ಕುಟುಂಬಕ್ಕೆ ತೊಂದರೆ ಕೊಡಬೇಡಿ’ ಎಂದು ತೆಲುಗು ಭಾಷೆಯಲ್ಲಿ ಬರೆಯಲಾಗಿದೆ.
ಈ ಡೆತ್ ನೋಟ್ ನ ಫೋಟೋವನ್ನು ವಂಶಿ ತಮ್ಮ ವಾಟ್ಸಾಪ್ ಸ್ಟೇಟಸ್ನಲ್ಲಿಯೂ ಪ್ರಕಟಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
‘ವಂಶಿ ತನ್ನ ಮೊಬೈಲ್ ಫೋನ್ ಅನ್ನು ಕೊಠಡಿಯ ಮೇಲೆ ಎಸೆದಿದ್ದ. ಗುರುವಾರ ಬೆಳಿಗ್ಗೆ ನಡೆಸಿದ ಹುಡುಕಾಟದಲ್ಲಿ ನಮ್ಮ ತಂಡ ಅದನ್ನು ಪತ್ತೆಹಚ್ಚಿತು. ಮದ್ಯಪಾನದ ಅಭ್ಯಾಸದ ವಿಷಯವಾಗಿ ತಾಯಿಯೊಂದಿಗೆ ಜಗಳವಾಡಿದ ಬಳಿಕ ಸ್ನೇಹಿತನೊಂದಿಗೆ ಮದ್ಯ ಸೇವಿಸಿದ್ದ. ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ನಾವು ಶಂಕಿಸುತ್ತಿದ್ದೇವೆ. ಎಣಿಕೆ ನಮೂನೆಯಲ್ಲಿ ಈ ರೀತಿಯ ಆತ್ಮಹತ್ಯೆ ಪತ್ರವನ್ನು ಏಕೆ ಬರೆದಿದ್ದಾನೆ ಎಂಬುದು ಕುಟುಂಬದ ಸದಸ್ಯರಿಗೂ ತಿಳಿದಿಲ್ಲ. ಅವರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರಲಿಲ್ಲ’ ಎಂದು ಸಿರ್ಸಿಲ್ಲಾ ಡಿಎಸ್ಪಿ ಕೆ. ನಾಗೇಂದ್ರ ಚಾರಿ ತಿಳಿಸಿದ್ದಾರೆ.
ಈ ಸಂಬಂಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 194 (ಅನುಮಾನಾಸ್ಪದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿರ್ಸಿಲ್ಲಾ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.