ಮುಂಬೈ ಮಳೆ ಅನಾಹುತ: ಕಟ್ಟಡ ಕುಸಿದು ಐವರು ಮಕ್ಕಳು ಸೇರಿದಂತೆ ಆರು ಮಂದಿ ಸಾವು!

ಮುಂಬೈ: ಭಾರಿ ಮಳೆಗೆ ಮುಂಬೈನ ಮಾಂಖುರ್ದ್ನಲ್ಲಿ ಬಹುಮಹಡಿ ಚಾಲ್ (ವಸತಿ ಕಟ್ಟಡ) ಕುಸಿದು ಬಿದ್ದ ಪರಿಣಾಮ ಐದು ಮಕ್ಕಳು ಸೇರಿದಂತೆ ಕನಿಷ್ಠ ಆರು ಜನರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಾಂಖುರ್ದ್ನ ಹನುಮಾನ್ ಮಂದಿರದ ಹಿಂಭಾಗದಲ್ಲಿರುವ ಜನತಾ ನಗರದ ಚಾಲ್ ನಂಬರ್ 5ರಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ಸುಮಾರು 8.30ಕ್ಕೆ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ತುರ್ತು ಸೇವಾ ತಂಡಗಳು ಧಾವಿಸಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸುತ್ತಿವೆ. ಕಟ್ಟಡ ಕುಸಿತದ ನಂತರ ಇಡೀ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರ ಪತ್ತೆ ಕಾರ್ಯ ಮುಂದುವರಿದಿದೆ.ಈ ಬಗ್ಗೆ ಸ್ಥಳದಲ್ಲಿದ್ದ ಕಾರ್ಪೊರೇಟರ್ ವಿಜಯ್ ಉಬಾಲೆ ಪ್ರತಿಕ್ರಿಯಿಸಿದ್ದು “ಕುಸಿಯುವ ಹಂತದಲ್ಲಿದ್ದ ಎರಡು ಜರ್ಜರಿತ ಕಟ್ಟಡಗಳನ್ನು ರವಿವಾರ ಮಧ್ಯಾಹ್ನ ನಿವಾಸಿಗಳು ಖಾಲಿ ಮಾಡಿದ್ದರು. ಆದರೆ, ಸಂಜೆಯ ವೇಳೆಗೆ ಹಲವಾರು ಸ್ಥಳೀಯರು ಮತ್ತೆ ಅದೇ ಪ್ರದೇಶಕ್ಕೆ ಮರಳಿದ್ದರು. ಆ ಸಮಯದಲ್ಲಿ ಕಟ್ಟಡಗಳಲ್ಲೊಂದು ಇದ್ದಕ್ಕಿದ್ದಂತೆ ಕುಸಿದು ಬಿತ್ತು” ಎಂದು ತಿಳಿಸಿದರು.
ಮೃತಪಟ್ಟ ಐದು ಮಕ್ಕಳಲ್ಲಿ ಒಂದು ಮಗು ನೆರೆಹೊರೆಯ ಮನೆಯದ್ದಾಗಿದ್ದು, ಕುಸಿದ ಕಟ್ಟಡದಲ್ಲಿದ್ದ ಇತರ ಮಕ್ಕಳೊಂದಿಗೆ ಆಟವಾಡಲು ಬಂದಿತ್ತು ಎಂದು ಉಬಾಲೆ ತಿಳಿಸಿದರು.ರವಿವಾರ ಮುಂಬೈನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಸಂಚಾರವು ಸುಮಾರು ಒಂದು ಗಂಟೆ ಕಾಲ ಅಸ್ತವ್ಯಸ್ತಗೊಂಡಿತ್ತು. ನಗರದ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಹಲವಾರು ಕಡೆ ಮರಗಳು ಉರುಳಿಬಿದ್ದ ಘಟನೆಗಳು ನಡೆದಿವೆ. ಕುರ್ಲಾದಲ್ಲಿ ಅಂಗಡಿಯೊಂದರ ಮೇಲೆ ಮರ ಬಿದ್ದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮುಂಬೈಗೆ ರೆಡ್ ಅಲರ್ಟ್ ಘೋಷಿಸಿದ್ದು ನಗರದ ಹಲವು ಭಾಗಗಳಲ್ಲಿ 24 ಗಂಟೆಗಳಲ್ಲಿ 200 ಮಿ.ಮೀ ಗೂ ಹೆಚ್ಚು ಮಳೆಯಾಗಿದೆ. ಕೆಲವು ಕಡೆಗಳಲ್ಲಿ 300 ಮಿಮೀಗಿಂತಲೂ ಹೆಚ್ಚು ಮಳೆ ದಾಖಲಾಗಿದೆ ಎಂದು ವರದಿಯಾಗಿದೆ.
