ಬಂಟ್ವಾಳ: ಹೆದ್ದಾರಿಯಲ್ಲಿ ಕಾರು-ಬೈಕ್ ಮುಖಾಮುಖಿ; ಬೈಕ್ ಸವಾರ ಸಾ*ವು!

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಪಾಣೆಮಂಗಳೂರು – ಮೆಲ್ಕಾರ್ ಸಮೀಪದ ಬೋಳಂಗಡಿಯ ನರಹರಿ ಪರ್ವತದ ಬಳಿ ರವಿವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪುತ್ತೂರು ನಿವಾಸಿ ಅಶೋಕ್ (34) ಮೃತಪಟ್ಟ ದುರ್ದೈವಿ ಬೈಕ್ ಸವಾರ.

ರವಿವಾರ ಸಂಜೆ ಮಾರುತಿ ಕಾರೊಂದು ಬಿ.ಸಿ. ರೋಡ್ ಕಡೆಯಿಂದ ಎಂದಿನಂತೆ ಸಂಚರಿಸುತ್ತಿತ್ತು. ಇದೇ ವೇಳೆ ವಿರುದ್ಧ ದಿಕ್ಕಿನಿಂದ ಒನ್-ವೇ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಅತಿವೇಗವಾಗಿ ಬಂದ ಬೈಕ್ ಸವಾರ ಅಶೋಕ್, ಕಾರಿಗೆ ಮುಖಾಮುಖಿಯಾಗಿ ಭೀಕರವಾಗಿ ಢಿಕ್ಕಿ ಹೊಡೆದಿದ್ದಾರೆ. ಅಪಘಾತದ ಭೀಕರತೆ ಎಷ್ಟಿತ್ತೆಂದರೆ, ಢಿಕ್ಕಿಯ ರಭಸಕ್ಕೆ ಮಾರುತಿ ಕಾರಿನ ಮುಂಭಾಗ ಹಾಗೂ ಬೈಕ್ ಎರಡೂ ವಾಹನಗಳು ರಸ್ತೆಯಲ್ಲೇ ಸಂಪೂರ್ಣವಾಗಿ ಜಖಂಗೊಂಡಿವೆ.
ಅಪಘಾತ ನಡೆದ ತಕ್ಷಣ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬೈಕ್ ಸವಾರ ಅಶೋಕ್ ಅವರನ್ನು ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ತಕ್ಷಣವೇ ರಕ್ಷಿಸಿ, ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.