ಮದುವೆ ನಿರಾಕರಿಸಿದ ಮಹಿಳೆ ಮೇಲೆ ಸೇಡು: ಒಂದೂವರೆ ವರ್ಷದ ಹಸುಗೂಸನ್ನು ಕೊಂದ ಪಾಪಿಗೀಗ ಮರಣದಂಡನೆ!

ಫಿರೋಜಾಬಾದ್ (ಉತ್ತರ ಪ್ರದೇಶ): ತನ್ನನ್ನು ಮದುವೆಯಾಗಲು ನಿರಾಕರಿಸಿದ ಮಹಿಳೆಯ ಮೇಲಿನ ಆಕ್ರೋಶಕ್ಕೆ ಆಕೆಯ ಕೇವಲ ಒಂದೂವರೆ ವರ್ಷದ ಹಸುಗೂಸನ್ನು ಪದೇ ಪದೇ ನೆಲಕ್ಕೆ ಅಪ್ಪಳಿಸಿ ಭೀಕರವಾಗಿ ಕೊಂದ ಕ್ರೂರಿ ಜಿತೇಂದ್ರ ಪಾಠಕ್ ಅಲಿಯಾಸ್ ವಿರಾಜ್ಗೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಶುಕ್ರವಾರ ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.

ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಡಾ. ಬಬ್ಬು ಸಾರಂಗ್ ಅವರು ಈ ಪ್ರಕರಣವನ್ನು ವಿಶೇಷ ಆದ್ಯತೆಯ ಮೇರೆಗೆ ಆಲಿಸಿ, ಆರೋಪಿಗೆ ಕಠಿಣ ಶಿಕ್ಷೆ ಪ್ರಕಟಿಸಿದ್ದಾರೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.
ಜಿಲ್ಲಾ ಸರ್ಕಾರಿ ವಕೀಲ ರಾಜೀವ್ ಉಪಾಧ್ಯಾಯ ಅವರು ಒದಗಿಸಿದ ಮಾಹಿತಿ ಪ್ರಕಾರ, ಅರೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಮೈ ನಿವಾಸಿಯಾದ ರತಿ ಎಂಬ ಮಹಿಳೆ ಮೇ 30 ರಂದು ಶಿಕೋಹಾಬಾದ್ನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಅಲ್ಲಿಗೆ ಬಂದ ಆಕೆಯ ಮೈದುನ ವಿರಾಜ್, ತನ್ನನ್ನು ಮದುವೆಯಾಗುವಂತೆ ರತಿಗೆ ಪ್ರಸ್ತಾಪ ಇಟ್ಟಿದ್ದನು. ಆದರೆ, ಆಕೆ ಈ ಪ್ರಸ್ತಾಪವನ್ನು ನೇರವಾಗಿ ನಿರಾಕರಿಸಿದ್ದಾಳೆ.
ಇದರಿಂದ ಕೋಪೋದ್ರಿಕ್ತನಾದ ವಿರಾಜ್, ರತಿ ಅವರ ಒಂದೂವರೆ ವರ್ಷದ ಮಗ ಆರವ್ನನ್ನು ಚಾಕಲೇಟ್ ಕೊಡಿಸುವ ನೆಪದಲ್ಲಿ ಹೊರಗೆ ಕರೆದಕೊಂಡು ಹೋಗಿ ರಸ್ತೆಯಲ್ಲಿ ಕ್ರೂರವಾಗಿ ಪದೇ ಪದೇ ನೆಲಕ್ಕೆ ಹೊಡೆದು ಸಾಯಿಸಿದ್ದಾನೆ. ಅಷ್ಟೇ ಅಲ್ಲದೆ, ಮಗುವಿನ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಓಡುತ್ತಿದ್ದಾಗ ಸ್ಥಳೀಯರು ತಡೆದಿದ್ದರಿಂದ, ಮೃತದೇಹವನ್ನು ಅಲ್ಲೇ ಎಸೆದು ಪರಾರಿಯಾಗಿದ್ದನು. ತನಿಖೆ ವೇಳೆ, ತನ್ನ ಸಹೋದರನ ಹೆಂಡತಿಯನ್ನು ಮದುವೆಯಾಗಲು ಈ ಮಗುವೇ ಅಡ್ಡಿಯಾಗಿದ್ದರಿಂದ ಕೊಲೆ ಮಾಡಿದ್ದಾಗಿ ಆರೋಪಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದನು.
ಘಟನೆ ನಡೆದ ತಕ್ಷಣವೇ ಅತ್ಯಂತ ಚುರುಕಾಗಿ ಮತ್ತು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿದ ಉತ್ತರ ಪ್ರದೇಶ ಪೊಲೀಸರು ಭದ್ರವಾದ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದ್ದರು. ಕೇವಲ ಆರು ದಿನಗಳ ದಾಖಲೆ ಅವಧಿಯಲ್ಲಿ ಎಲ್ಲಾ ಸಾಕ್ಷಿಗಳ ಸಾಕ್ಷ್ಯಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಪ್ರಾಸಿಕ್ಯೂಷನ್ ಪರವಾಗಿ ಒಟ್ಟು 13 ಸಾಕ್ಷಿಗಳು ಬಲವಾದ ಸಾಕ್ಷ್ಯ ನುಡಿದಿದ್ದು, ಪ್ರತಿವಾದಿ ಪರವಾಗಿ ಕೇವಲ ಒಬ್ಬ ಸಾಕ್ಷಿ ಮಾತ್ರ ಹಾಜರಾಗಿದ್ದನು. ಪೊಲೀಸರ ಶರವೇಗದ ತನಿಖೆ ಹಾಗೂ ನ್ಯಾಯಾಲಯದ ತ್ವರಿತ ನ್ಯಾಯದಾನಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ.