ಪುತ್ತೂರು: ದಾಖಲೆ ಲ್ಯಾಮಿನೇಷನ್ ವೇಳೆ ಸುಟ್ಟುಹೋದ ವಿಚಾರಕ್ಕೆ ಗಲಾಟೆ; ಗ್ರಾಹಕರು ಮತ್ತು ಅಂಗಡಿ ಮಾಲೀಕರ ನಡುವೆ ಪರಸ್ಪರ ಹಲ್ಲೆ!

ಪುತ್ತೂರು ಅಗಸ್ಟ್ 21: ದಾಖಲೆಪತ್ರ ಲ್ಯಾಮಿನೇಷನ್ ಮಾಡುವಾಗ ತಾಂತ್ರಿಕ ದೋಷದಿಂದ ಸುಟ್ಟುಹೋದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕರು ಹಾಗೂ ಅಂಗಡಿ ಮಾಲೀಕರ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ನಡೆಸಿಕೊಂಡ ಘಟನೆ ಪುತ್ತೂರಿನ ದರ್ಭೆಯಲ್ಲಿ ಆಗಸ್ಟ್ 21ರ ಮಧ್ಯಾಹ್ನ ಸಂಭವಿಸಿದೆ.ಸುಳ್ಯ ಮಂಡೆಕೋಲು ನಿವಾಸಿಗಳಾದ ಮುಬಾಶಿರ, ಫಾತೀಮಾ ಹಾಗೂ ಮುಬಾಶಿರ್ ಎಂಬುವವರು ಪುತ್ತೂರಿನ ದರ್ಭೆಯಲ್ಲಿರುವ ಅಂಜನಾ ಪೈ ಎಂಬುವರಿಗೆ ಸೇರಿದ “Dream destination digital seva Kendra” ಅಂಗಡಿಗೆ ತೆರಳಿ ಕೆಲವು ದಾಖಲಾತಿಗಳನ್ನು ಜೆರಾಕ್ಸ್ ಹಾಗೂ ಲ್ಯಾಮಿನೇಷನ್ ಮಾಡಲು ನೀಡಿದ್ದರು. ಈ ವೇಳೆ ಒಂದು ದಾಖಲೆಪತ್ರ ತಾಂತ್ರಿಕ ದೋಷದಿಂದ ಸುಟ್ಟುಹೋಗಿದೆ. ಈ ವಿಚಾರವಾಗಿ ಗ್ರಾಹಕರು ಹಾಗೂ ಅಂಗಡಿಯ ಅಂಜನಾ ಪೈ ಮತ್ತು ಅವರ ಮಗ ಸುದರ್ಶನ್ ಪೈ ನಡುವೆ ತೀವ್ರ ವಾಗ್ವಾದ ನಡೆದು, ಪರಸ್ಪರ ಹಲ್ಲೆ ನಡೆಸಿದ್ದಾರೆ.ಘಟನಾ ಸ್ಥಳದಲ್ಲಿ ಸಾರ್ವಜನಿಕರ ಗುಂಪು ಸೇರಿದಾಗ, ಸ್ಥಳಕ್ಕೆ ಧಾವಿಸಿದ ಪುತ್ತೂರು ನಗರ ಠಾಣೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಎರಡೂ ಕಡೆಯವರಿಗೆ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿದರು. ಆದರೆ, ವಿಚಾರಣೆಗಾಗಿ ಸುದರ್ಶನ್ ಪೈ ಅವರನ್ನು ಠಾಣೆಗೆ ಕರೆತರುವ ವೇಳೆ ಸ್ಥಳದಲ್ಲಿದ್ದ ಕೆಲವು ಸಾರ್ವಜನಿಕರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
