ರೈಲಿನಲ್ಲಿ ಚಲಿಸುತ್ತಿದ್ದ ಗರ್ಭಿಣಿಗೆ ಹೆರಿಗೆ: ಕಠಿಣ ಸನ್ನಿವೇಶದಲ್ಲಿ ಮಗುವಿಗೆ ಮರುಜೀವ ನೀಡಿದ ಯುವ ವೈದ್ಯರು

ಹಾಸನ : ಚಲಿಸುವ ರೈಲಿನಲ್ಲಿ ಹಠಾತ್ ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯೊಬ್ಬರಿಗೆ ಹಾಸನದ ಎಸ್ಡಿಎಂ ಆಯುರ್ವೇದ ಆಸ್ಪತ್ರೆ ಮತ್ತು ಕಾಲೇಜಿನ ಮೂವರು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯರು ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಗುವಿನ ಕುತ್ತಿಗೆಗೆ ಹೊಕ್ಕುಳಬಳ್ಳಿ ಸುತ್ತಿಕೊಂಡು ಉಸಿರಾಟಕ್ಕೆ ಸಮಸ್ಯೆಯಾಗಿದ್ದಂತ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಧೃತಿಗೆಡದ ಯುವ ವೈದ್ಯರು, ನವಜಾತ ಶಿಶುವಿಗೆ ಮರುಜೀವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಹಾಸನದಿಂದ ವಾರಾಣಸಿಗೆ ರೈಲಿನಲ್ಲಿ ತೆರಳುತ್ತಿದ್ದ ಎಸ್ಡಿಎಂ ಕಾಲೇಜಿನ ಸ್ನಾತಕೋತ್ತರ ಸಂಶೋಧನಾ ವಿದ್ಯಾರ್ಥಿನಿಯರಾದ ಡಾ. ರಶ್ಮಿ ಬೀಳಗಿ, ಡಾ. ಶಾಹೀನ್ ಎಂ. ಮತ್ತು ಡಾ. ಲತಾಶ್ರೀ ಎನ್. ಅವರೇ ಈ ಸಾಹಸ ಮೆರೆದ ವೈದ್ಯರು. ಜುಲೈ 6ರಂದು ರೈಲು ವಿಜಯವಾಡಾ ಬಳಿ ಚಲಿಸುತ್ತಿದ್ದ ವೇಳೆ, 9 ತಿಂಗಳ ಗರ್ಭಿಣಿಯೊಬ್ಬರಿಗೆ ಪ್ರಯಾಣದ ಮಧ್ಯೆ ಇದ್ದಕ್ಕಿದ್ದಂತೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು. ಮುಂದಿನ ನಿಲ್ದಾಣದವರೆಗೆ ಕಾಯಲು ಸಮಯವಿರಲಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮೂವರು ವೈದ್ಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಗಾಬರಿಯಾಗಿದ್ದ ತಾಯಿಗೆ ಧೈರ್ಯ ತುಂಬಿ ಆಕೆಗೆ ಆರಾಮದಾಯಕ ಭಂಗಿಯಲ್ಲಿ ಮಲಗಲು ನೆರವಾದರು ಹಾಗೂ ಎಫೆಕ್ಟಿವ್ ಪುಷಿಂಗ್ಗೆ ಮಾರ್ಗದರ್ಶನ ನೀಡಿದರು.
ಮಗುವಿನ ತಲೆ ಹೊರಬರುವಾಗ ಕುತ್ತಿಗೆಗೆ ಹೊಕ್ಕುಳಬಳ್ಳಿ ಬಿಗಿಯಾಗಿ ಸುತ್ತಿಕೊಂಡಿರುವುದು ಕಂಡುಬಂದಿತು. ಇದು ಮಗುವಿನ ಜೀವಕ್ಕೆ ಅತ್ಯಂತ ಅಪಾಯಕಾರಿಯಾಗಿದ್ದರೂ, ಸಂಯಮ ಪ್ರದರ್ಶಿಸಿದ ಡಾ. ಶಾಹೀನ್ ಮಗುವಿನ ತಲೆಯನ್ನು ಸುರಕ್ಷಿತವಾಗಿ ಹಿಡಿದುಕೊಂಡರೆ, ಡಾ. ರಶ್ಮಿ ಜಾಗರೂಕತೆಯಿಂದ ಹೊಕ್ಕುಳಬಳ್ಳಿಯನ್ನು ಮಗುವಿನ ತಲೆಯ ಮೇಲಿಂದ ಸಡಿಲಗೊಳಿಸಿ ಬಿಡಿಸಿದರು. ಕೆಲವೇ ಕ್ಷಣಗಳಲ್ಲಿ ಹೆಣ್ಣು ಮಗುವಿನ ಜನನವಾಯಿತಾದರೂ, ಮಗು ಅಳದೆ ನಿಶ್ಚಲವಾಗಿತ್ತು. ತಕ್ಷಣವೇ ವೈದ್ಯರ ತಂಡವು ನವಜಾತ ಶಿಶು ಪುನರುಜ್ಜೀವನ (Neonatal Resuscitation) ಪ್ರಕ್ರಿಯೆಯನ್ನು ಆರಂಭಿಸಿದ ಪರಿಣಾಮವಾಗಿ ಮಗು ಜೋರಾಗಿ ಅತ್ತು ಪ್ರತಿಕ್ರಿಯಿಸಿತು.
ರೈಲಿನಲ್ಲಿ ವೈದ್ಯಕೀಯ ಉಪಕರಣಗಳು ಇಲ್ಲದ ಕಾರಣ, ಲಭ್ಯವಿದ್ದ ಅತ್ಯಲ್ಪ ಸಂಪನ್ಮೂಲಗಳನ್ನೇ ಬಳಸಿಕೊಂಡ ಡಾ. ರಶ್ಮಿ ಹಾಗೂ ಡಾ. ಶಾಹೀನ್,Sterilized ಶೇವಿಂಗ್ ಬ್ಲೇಡ್ ಮತ್ತು ಸ್ವಚ್ಛವಾದ ದಾರವನ್ನು ಬಳಸಿ ಹೊಕ್ಕುಳಬಳ್ಳಿಯನ್ನು ಸುರಕ್ಷಿತವಾಗಿ ಕತ್ತರಿಸಿ ಗಂಟು ಹಾಕಿದರು. ತದನಂತರ ತಾಯಿಯ ಹೊಟ್ಟೆಯನ್ನು ಮೃದುವಾಗಿ ಮಸಾಜ್ ಮಾಡುವುದರ ಜೊತೆಗೆ ಪ್ಲಾಸೆಂಟಾವನ್ನು (Placentae) ಯಶಸ್ವಿಯಾಗಿ ಹೊರತೆಗೆದರು. ಯುವ ವೈದ್ಯರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.