ಈರುಳ್ಳಿ ಬೆಲೆ ಏರಿಕೆಗೆ ಕಪ್ಪು ಮಾರುಕಟ್ಟೆ ಹಾಗೂ ಮಧ್ಯವರ್ತಿಗಳೇ ಕಾರಣ: ಕೇಂದ್ರ ಸರ್ಕಾರ ಗಂಭೀರ ಆರೋಪ

ಹೊಸದಿಲ್ಲಿ: ದೇಶದಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗಿರುವ ಬೆನ್ನಲ್ಲೇ, ಕಪ್ಪು ಮಾರುಕಟ್ಟೆ, ದಾಸ್ತಾನು ಸಂಗ್ರಹಣೆ ಮತ್ತು ಲಾಭಕೋರತನದಿಂದಾಗಿ ಬೆಲೆ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಆರೋಪಿಸಿದೆ. ದಿಲ್ಲಿಯಲ್ಲಿ ಗುರುವಾರ ಈರುಳ್ಳಿ ಬೆಲೆ ಕೆ.ಜಿಗೆ 62 ರೂ. ತಲುಪಿತ್ತು. ಗ್ರಾಹಕರಿಗೆ ಮೊಬೈಲ್ ವ್ಯಾನ್ಗಳ ಮೂಲಕ ಕೆ.ಜಿಗೆ 35 ರೂ. ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲು ಸರ್ಕಾರ ಮುಂದಾಗಿದೆ.
ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಬೆಲೆ ಸ್ಥಿರೀಕರಣ ಕ್ರಮದಡಿ ತಮ್ಮ ಚಿಲ್ಲರೆ ಮಳಿಗೆಗಳು ಹಾಗೂ ಕೇಂದ್ರೀಯ ಭಂಡಾರ್ಗಳ ಮೂಲಕ ಈರುಳ್ಳಿ ಮಾರಾಟ ಮಾಡಲಿವೆ. ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಈರುಳ್ಳಿ ಬೆಲೆ ಏರಿಕೆಗೆ ಮಧ್ಯವರ್ತಿಗಳೇ ಕಾರಣ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ರೈತರಿಗೆ ತಮ್ಮ ಉತ್ಪನ್ನಕ್ಕೆ ಸಮಂಜಸವಾದ ಆದಾಯ ದೊರೆಯಬೇಕು. ಅದೇ ವೇಳೆ ಗ್ರಾಹಕರು ಸಮಂಜಸವಾದ ದರದಲ್ಲಿ ಈರುಳ್ಳಿ ಪಡೆಯುವಂತಾಗಬೇಕು ಎಂದು ಅವರು ಹೇಳಿದ್ದಾರೆ.
ರೈತರ ನಾಯಕ ರಾಕೇಶ್ ಟಿಕಾಯತ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಚೌಹಾಣ್ ಅವರಿಗೆ ಪತ್ರ ಬರೆದು, ಈರುಳ್ಳಿ ರೈತರು ಕೆ.ಜಿಗೆ ಕೇವಲ 1 ರೂ.ನಷ್ಟು ಕಡಿಮೆ ಬೆಲೆ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ತಕ್ಷಣ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದ್ದರು.
‘ಆಲೂಗಡ್ಡೆಯ ವಿಷಯದಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು. ಸರ್ಕಾರವು ನಾಫೆಡ್ ಮತ್ತು ಎನ್ಸಿಸಿಎಫ್ಗೆ ರೈತರಿಂದ ಕನಿಷ್ಠ ಕೆ.ಜಿಗೆ 10 ರೂ. ದರದಲ್ಲಿ ಈರುಳ್ಳಿ ಖರೀದಿಸುವಂತೆ ಸೂಚಿಸಬೇಕಿತ್ತು. ಹಾಗೆ ಮಾಡಿದ್ದರೆ ಇಂತಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ’ ಎಂದು ಟಿಕಾಯತ್ ‘the hindu’ಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ರೈತರಿಂದ ಈರುಳ್ಳಿ ಬೆಲೆ ಕುಸಿದಿದ್ದ ಸಂದರ್ಭದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಈರುಳ್ಳಿ ಖರೀದಿಸಿತ್ತು ಎಂದು ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
‘ಈಗ ರೈತರ ಬಳಿ ಈರುಳ್ಳಿ ಇಲ್ಲ. ಅವರ ಬಳಿಯಿದ್ದ ದಾಸ್ತಾನು ಮಾರಾಟವಾಗಿದೆ. ಆದರೆ ಚಿಲ್ಲರೆ ಬೆಲೆ ಕೆ.ಜಿಗೆ 60 ರೂ.ಗೆ ತಲುಪಿದೆ. ರೈತರು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಪಡೆಯುತ್ತಿದ್ದಾರೆಯೇ? ರೈತರ ಪರಿಶ್ರಮದಿಂದ ಮಧ್ಯವರ್ತಿಗಳು ಲಾಭಪಡೆಯುವುದು ನ್ಯಾಯವೇ? ಸರ್ಕಾರ ಕ್ರಮ ಕೈಗೊಳ್ಳುತ್ತಿದೆ’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಈರುಳ್ಳಿ ಬೆಲೆ ಏರಿಕೆಗೆ ಕಾನೂನು ಬಾಹಿರ ಮಾರುಕಟ್ಟೆ ದಾಸ್ತಾನು ಸಂಗ್ರಹಣೆ ಮತ್ತು ಲಾಭಕೋರತನವೇ ಕಾರಣ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ ಹೇಳಿದ್ದಾರೆ. ಹಬ್ಬದ ಋತುವಿನ ಬೇಡಿಕೆ ಪೂರೈಸಲು ದೇಶದಲ್ಲಿ ಸಾಕಷ್ಟು ಈರುಳ್ಳಿ ಲಭ್ಯವಿದೆ. ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲದಿರುವುದರಿಂದ ಈರುಳ್ಳಿ ರಪ್ತಿನ ಮೇಲೆ ನಿಷೇಧ ಹೇರುವ ಬಗ್ಗೆ ಸರ್ಕಾರ ಯೋಚಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಖರೀದಿ ದರ 16.50 ರೂ.ಗೆ ಹೆಚ್ಚಳ
ರೈತರಿಗೆ ನೆರವಾಗಲು ಸರ್ಕಾರ ಜೂನ್ 13ರಿಂದ ಈರುಳ್ಳಿ ಖರೀದಿ ದರವನ್ನು ಕೆ.ಜಿಗೆ 16.50 ರೂ.ಗೆ ಹೆಚ್ಚಿಸಿದೆ.
ಮುಂಬರುವ ತಿಂಗಳುಗಳಲ್ಲಿ ಈರುಳ್ಳಿ ಕೊರತೆಯಾಗದಂತೆ ನೋಡಿಕೊಳ್ಳಲು ಸರ್ಕಾರ ತನ್ನ ಬಫರ್ ದಾಸ್ತಾನಿನಲ್ಲಿರುವ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಆರಂಭಿಸಿದೆ. ಇದರಿಂದ ಋತುಮಾನಕ್ಕೆ ಅನುಗುಣವಾಗಿ ಉಂಟಾಗುವ ಬೆಲೆ ಏರಿಕೆಯನ್ನು ನಿಯಂತ್ರಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಬುಧವಾರ ತಿಳಿಸಿತ್ತು.
ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿ ಮತ್ತು ಬೆಲೆ ಪ್ರವೃತ್ತಿಯನ್ನು ಆಧರಿಸಿ ಪ್ರಮುಖ ಬಳಕೆ ಕೇಂದ್ರಗಳಿಗೆ ಈರುಳ್ಳಿ ಪೂರೈಸಲಾಗುತ್ತಿದೆ. ಇದಕ್ಕಾಗಿ ರೈಲ್ವೆ ರೇಕ್ಗಳು ಮತ್ತು ರಸ್ತೆ ಸಾರಿಗೆಯನ್ನು ಒಳಗೊಂಡ ಹೈಬ್ರಿಡ್ ಮಾದರಿಯ ಸಾರಿಗೆ ವ್ಯವಸ್ಥೆ ಬಳಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ರೈತರಿಗೆ ಸೂಕ್ತ ಬೆಲೆ ದೊರಕಿಸುವುದು ಹಾಗೂ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಈರುಳ್ಳಿ ಲಭ್ಯವಾಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ರೈತರಿಂದ ಖರೀದಿ, ಬಫರ್ ದಾಸ್ತಾನಿನಿಂದ ಬಿಡುಗಡೆ ಮತ್ತು ರಿಯಾಯಿತಿ ದರದಲ್ಲಿ ಚಿಲ್ಲರೆ ಮಾರಾಟ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.