ಹೊಸದಿಲ್ಲಿ: ಹಾರ್ಮುಝ್ ಜಲಸಂಧಿ ದಾಟಿದ ಭಾರತದ ಮೊದಲ ಅನಿಲ ಹಡಗು ‘ದಿಶಾ’; ಇಂಧನ ಬಿಕ್ಕಟ್ಟಿಗೆ ಸಿಕ್ತು ಬಿಗ್ ರಿಲೀಫ್!

ಹೊಸದಿಲ್ಲಿ: ಅಮೆರಿಕ- ಇರಾನ್ ಶಾಂತಿಒಪ್ಪಂದ ಘೋಷಣೆಯಾದ ಬಳಿಕ ಭಾರತಕ್ಕೆ ಸಿಎನ್ಜಿ ಸಾಗಾಣಿಕೆಯ ಪ್ರಥಮ ಹಡಗು ‘ದಿಶಾ’ ಸುರಕ್ಷಿತವಾಗಿ ಹಾರ್ಮುಝ್ ಜಲಸಂಧಿ ದಾಟಿರುವ ನಡುವೆಯೇ ಭಾರತದತ್ತ ಆಗಮಿಸಲು ಕಾಯುತ್ತಿರುವ 34 ಹಡಗುಗಳು ಸುರಕ್ಷಿತವಾಗಿ ಈ ಜಲಸಂಧಿ ದಾಟುವ ನಿರೀಕ್ಷೆ ಗರಿಗೆದರಿದೆ.
ಈ ಪೈಕಿ 16 ಹಡಗುಗಳು ರಸಗೊಬ್ಬರದಿಂದ ಕೂಡಿದ್ದು, ಇದು ದೇಶದ ಮಣ್ಣಿನ ಪೋಷಕಾಂಶಗಳ ಪೂರೈಕೆಯನ್ನು ಸುಗಮಗೊಳಿಸಲಿದೆ. ಆದರೆ ಇಂಧನ ಪೂರೈಕೆಯ ತಕ್ಷಣದ ಸುಧಾರಣೆಯಾದರೂ, ಖತರ್ನ ರಾಸ್ ಲಫಾನ್ ನಂತಹ ಸೌಲಭ್ಯಗಳಿಗೆ ಭಾರಿ ಹಾನಿಯಾಗಿರುವುದರಿಂದ ಭಾರತಕ್ಕೆ ಸಂಪೂರ್ಣ ನಿರಾಳತೆಯನ್ನು ನೀಡುವ ಸಾಧ್ಯತೆ ಇಲ್ಲ.
ಖತರ್ನಲ್ಲಿ ಇಂಧನ ಮೂಲಸೌಕರ್ಯಕ್ಕೆ ಭಾತಿ ಹಾನಿಯಾಗಿದ್ದು, ಸಹಜ ಕಾರ್ಯಾಚರಣೆ ಪುನಾರಂಭದ ಬಗ್ಗೆ ಅನಿಶ್ಚಿತತೆ ಮೂಡಿದೆ. ಖತರ್ ಎನರ್ಜಿ ಕಂಪನಿಯ ರಾಸ್ ಲಫಾನ್ ಸೌಲಭ್ಯದಿಂದ ಧೀರ್ಘಾವಧಿ ಅನಿಲ ಪೂರೈಕೆಗೆ ಭಾರತ ಆ ದೇಶದ ಜತೆ ಒಪ್ಪಂದ ಮಾಡಿಕೊಂಡಿದೆ.
ಯುಎಇಯ ಹಬ್ಬನ್ ಅನಿಲ ಘಟಕ ಕೂಡಾ ಹಾನಿಗೀಡಾಗಿದ್ದು, ಕಾರ್ಯಾಚರಣೆ ವ್ಯತ್ಯಯಗೊಂಡಿದೆ. ಘಟಕದ ಒಟ್ಟು ಸಾಮರ್ಥ್ಯದ ಶೇಕಡ 60ರಷ್ಟು ಕಾರ್ಯಾಚರಣೆ ಪುನಾರಂಭವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2026ರ ಕೊನೆಯ ವೇಳೆಗೆ ಇದು ಶೇಕಡ 80ಕ್ಕೆ ಏರಿದ್ದು, 2027ರ ವೇಳೆಗೆ ಸಂಪೂರ್ಣ ಸುಧಾರಣೆ ಸಾಧ್ಯವಾಗಲಿದೆ.
ದ್ರವೀಕೃತ ನೈಸರ್ಗಿಕ ಅನಿಲ ಘಟಕದ ಎರಡು ಸಂಸ್ಕರಣಾ ಘಟಕಗಳು ರಾಸ್ ಲಫಾನ್ ನಲ್ಲಿ ಹಾನಿಗೀಡಾಗಿದ್ದು, ಒಟ್ಟು ಉತ್ಪಾದನಾ ಸಾಮರ್ಥ್ಯಕ್ಕೆ ಶೇಕಡ 17ರಷ್ಟು ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷಕ್ಕೆ ಮುನ್ನ ಭಾರತ ತನ್ನ ಕಚ್ಚಾತೈಲ ಅಗತ್ಯತೆಯ ಪೈಕಿ ಶೇಕಡ 88ನ್ನು ಆಮದು ಮಾಡಿಕೊಳ್ಳುತ್ತಿತ್ತು. ಈ ಪೈಕಿ ಅರ್ಧದಷ್ಟು ಪಶ್ಚಿಮ ಏಷ್ಯಾದಿಂದ ಬರುತ್ತಿತ್ತು. ಎಲ್ಎನ್ಜಿ ಬೇಡಿಕೆಯ ಶೇಕಡ 60ರಷ್ಟು ಹಾರ್ಮುಝ್ ಜಲಸಂಧಿಯ ಮೂಲಕ ಸಾಗಾಣಿಕೆಯಾಗುತ್ತಿತ್ತು. ಹಾರ್ಮುಝ್ ಜಲಸಂಧಿ ದಾಟಲು ಕಾಯುತ್ತಿರುವ ಹಡಗುಗಳ ಪೈಕಿ 15 ಹಡಗುಗಳು ಕಚ್ಚಾತೈಲ, ಸಿಎನ್ಜಿ ಮತ್ತು ಎಲ್ಪಿಜಿಯನ್ನು ಹೊಂದಿದ್ದು ಉಳಿದ ಹಡಗುಗಳು ಸರಕು ಸಾಗಾಣಿಕೆ ಹಡಗುಗಳಾಗಿವೆ ಎಂದು ತಿಳಿದು ಬಂದಿದೆ.
