ಕೊಚ್ಚಿ: ತಂದೆಯೊಂದಿಗೆ ಅಂಗಡಿಗೆ ತೆರಳಿದ್ದಾಗ ಟಿಪ್ಪರ್ ಲಾರಿ ಹರಿದು 6 ವರ್ಷದ ಬಾಲಕ ದಾರುಣ ಸಾ*ವು!

ಕೊಚ್ಚಿ : ಕೇರಳದ ಪೆರುಂಬವೂರ್ನ ನೆಡುಂಗಾಪ್ರ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದ ದಾರುಣ ರಸ್ತೆ ಅಪಘಾತದಲ್ಲಿ 6 ವರ್ಷದ ಬಾಲಕನೊಬ್ಬ ಟಿಪ್ಪರ್ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಕರುಣಾಜನಕ ಘಟನೆ ನಡೆದಿದೆ. ನೆಡುಂಗಾಪ್ರ ನಿವಾಸಿ ಹಾಗೂ 2 ನೇ ತರಗತಿ ವಿದ್ಯಾರ್ಥಿ ಜೋಶುವಾ ಬಾಸಿಲ್ (6) ಮೃತಪಟ್ಟ ದುರ್ದೈವಿ.

ಪೊಲೀಸರ ಪ್ರಕಾರ, ಬೆಳಿಗ್ಗೆ 9 ಗಂಟೆ ಸುಮಾರಿಗೆ ಕೊಟ್ಟಪ್ಪಾಡಿ-ಕುರುಪ್ಪಂಪಾಡಿ ರಸ್ತೆಯಲ್ಲಿ ಜೋಶುವಾ ತನ್ನ ತಂದೆ ಬೇಸಿಲ್ ಜೊತೆ ದಿನಸಿ ವಸ್ತುಗಳನ್ನು ಖರೀದಿಸಲು ಹತ್ತಿರದ ಅಂಗಡಿಗೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ. ತಂದೆ ಮತ್ತು ಮಗ ರಸ್ತೆ ದಾಟುತ್ತಿದ್ದಾಗ ತಿರುವಿನ ಬಳಿ ವೇಗವಾಗಿ ಬಂದ ಭಾರೀ ಟಿಪ್ಪರ್ ಲಾರಿಯನ್ನು ಕಂಡು ಬಾಲಕ ಜೋಶುವಾ ಬದಿಗೆ ಹೋಗಲು ಯತ್ನಿಸಿದ್ದಾನೆ. ಆದರೆ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿ ಬಾಲಕನಿಗೆ ಡಿಕ್ಕಿ ಹೊಡೆದು, ಚಕ್ರಗಳು ಆತನ ದೇಹದ ಮೇಲೆ ಹರಿದ ಪರಿಣಾಮ ಜೋಶುವಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಘಟನೆ ನಡೆದ ತಕ್ಷಣ ಕುರುಪ್ಪಂಪಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಟಿಪ್ಪರ್ ಲಾರಿ ಹಾಗೂ ಅದರ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪೆರುಂಬವೂರು ತಾಲ್ಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಕೊಟ್ಟಪ್ಪಾಡಿ-ಕುರುಪ್ಪಂಪಾಡಿ ಮಾರ್ಗದಲ್ಲಿ ಭಾರೀ ಟಿಪ್ಪರ್ ಲಾರಿಗಳು ಅತಿಯಾದ ವೇಗದಲ್ಲಿ ಸಂಚರಿಸುವ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.