ಹನಿಮೂನ್ ಹ*ತ್ಯೆ ಪ್ರಕರಣ: 10 ತಿಂಗಳ ನಂತರ ಜೈಲಿನಿಂದ ಹೊರಬಂದ ಪತ್ನಿ ಸೋನಮ್ ರಘುವಂಶಿ

ಗುವಾಹತಿ: ಮಧುಚಂದ್ರದ ವೇಳೆ ಪತಿಯನ್ನು ಪತ್ನಿಯೇ ಹತ್ಯೆ ಮಾಡಿದ ಘಟನೆ ಇಡೀ ದೇಶದ ಗಮನ ಸೆಳೆದಿತ್ತು. ಪತಿ ರಾಜಾ ರಘುವಂಶಿಯನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಸೋನಮ್ ರಘುವಂಶಿ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ಸತತ ಮೂರು ಬಾರಿ ಇವರ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದರೂ, ನಾಲ್ಕನೇ ಬಾರಿ ಶಿಲ್ಲಾಂಗ್ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ. ಸೋನಮ್ 10 ತಿಂಗಳಿನಿಂದ ಜೈಲಿನಲ್ಲಿದ್ದಾಳೆ. ಬಿಡುಗಡೆ ವಿಧಿವಿಧಾನಗಳನ್ನು ಕುಟುಂಬ ಪೂರೈಸಿದ ಬಳಿಕ ಸೋನಮ್ ಶಿಲ್ಲಾಂಗ್ ಜೈಲಿನಿಂದ ಹೊರನಡೆದಳು.
ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ 2025ರ ಮೇ ತಿಂಗಳಲ್ಲಿ ಈ ಹನಿಮೂನ್ ಹತ್ಯೆ ನಡೆದಿತ್ತು. ಸೊಹ್ರಾದಿಂದ ನಾಪತ್ತೆಯಾಗಿದ್ದ ರಾಜಾ ಅವರ ಮೃತದೇಹ ಕಂದಕದಲ್ಲಿ ಪತ್ತೆಯಾಗಿತ್ತು.
ರಾಜಾ ಕುಶ್ವಾಹಾ ಎಂಬ ಪ್ರಿಯಕರನೊಂದಿಗೆ ಸಂಚು ರೂಪಿಸಿ ಇತರ ಮೂವರ ಸಹಾಯದಿಂದ ಪತಿಯನ್ನು ಹತ್ಯೆ ಮಾಡಿದ್ದಾಗಿ ಸೋನಮ್ ತಪ್ರೊಪ್ಪಿಗೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಕುಶ್ವಾಹಾ ಹಾಗೂ ಇತರ ಮೂವರು ಬಂಧನದಲ್ಲಿದ್ದಾರೆ. ಕೇವಲ ಸೋನಮ್ ಮಾತ್ರವೇ ಜಾಮೀನು ಅರ್ಜಿ ಸಲ್ಲಿಸಿದ್ದಳು.
ಪ್ರಕರಣದಲ್ಲಿ ತನಿಖೆ ಮುಗಿದು ಚಾರ್ಜ್ ಶೀಟ್ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಪೂರ್ವ ಖಾಸಿ ಹಿಲ್ಸ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಕಾನೂನು ನೆರವು ಘಟಕ ಜಾಮೀನು ಅರ್ಜಿ ಸಲ್ಲಿಸಿತ್ತು. ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದು, ಭವಿಷ್ಯದಲ್ಲೂ ನೆರವು ನೀಡುವುದಾಗಿ ಆರೋಪಿ ಒಪ್ಪಿಕೊಂಡ ಬಳಿಕ ಜಾಮೀನು ಮಂಜೂರು ಮಾಡಲಾಗಿದೆ.
