ದಾಂಡೇಲಿ: ಜಿಪ್ಲೈನ್ ಸಾಹಸದ ವೇಳೆ ದುರಂತ; 40 ಅಡಿ ಎತ್ತರದಿಂದ ಬಿದ್ದು ಪ್ರವಾಸಿಗ ಗಂಭೀರ!

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಖಾಸಗಿ ರೆಸಾರ್ಟ್ನಲ್ಲಿ ಜಿಪ್ಲೈನ್ ಸಾಹಸ ಸವಾರಿ ವೇಳೆ ಸಂಭವಿಸಿದ ಅಪಘಾತದಲ್ಲಿ ವಿಜಯಪುರ ಮೂಲದ ಪ್ರವಾಸಿಗರೊಬ್ಬರು ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಹಸ ಪ್ರವಾಸೋದ್ಯಮ ಕೇಂದ್ರಗಳಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಗಾಯಗೊಂಡವರನ್ನು ವಿಜಯಪುರ ಜಿಲ್ಲೆಯ ಕುಬೇರ ಸುರಪುರ ಎಂದು ಗುರುತಿಸಲಾಗಿದೆ. ಕುಟುಂಬದವರ ಮಾಹಿತಿ ಪ್ರಕಾರ, ಜಿಪ್ಲೈನ್ ಸವಾರಿಯ ಮಧ್ಯೆ ಗಾಳಿಯಲ್ಲಿ ತೂಗುತಿದ್ದ ವೇಳೆ ಸುರಕ್ಷತಾ ಲಾಕ್ (ಸೇಫ್ಟಿ ಲಾಕ್) ವೈಫಲ್ಯಗೊಂಡ ಪರಿಣಾಮ ಅವರು ನೇರವಾಗಿ ನೆಲಕ್ಕೆ ಬಿದ್ದಿದ್ದಾರೆ. ಅಪಘಾತದಲ್ಲಿ ಕುಬೇರ ಅವರ ಕೈ ಹಾಗೂ ಕಾಲುಗಳಿಗೆ ಹಲವು ಕಡೆ ಮುರಿತಗಳಾಗಿದ್ದು, ನರಗಳಿಗೂ ಗಂಭೀರ ಹಾನಿಯಾಗಿದೆ ಎಂದು ತಿಳಿದುಬಂದಿದೆ. ತಕ್ಷಣವೇ ಅವರನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಜಯಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ನಂತರ ವಿಶೇಷ ಚಿಕಿತ್ಸೆಯ ಅಗತ್ಯವಿದ್ದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮಿರಜ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.ರೆಸಾರ್ಟ್ ವಿರುದ್ಧ ಕುಟುಂಬಸ್ಥರ ಗಂಭೀರ ಆರೋಪ : ಈ ಅಪಘಾತಕ್ಕೆ ರೆಸಾರ್ಟ್ ನಿರ್ವಹಣೆಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಜಿಪ್ಲೈನ್ ಉಪಕರಣಗಳು ತುಕ್ಕು ಹಿಡಿದಿದ್ದವು, ಅವುಗಳ ನಿಯಮಿತ ನಿರ್ವಹಣೆ ಹಾಗೂ ಸುರಕ್ಷತಾ ತಪಾಸಣೆ ಸಮರ್ಪಕವಾಗಿ ನಡೆದಿರಲಿಲ್ಲ ಎಂದು ಅವರು ದೂರಿದ್ದಾರೆ. ಸಾಹಸ ಚಟುವಟಿಕೆಗಳಿಗೆ ಬಳಸುವ ಉಪಕರಣಗಳನ್ನು ನಿಯಮಿತವಾಗಿ ಪರಿಶೀಲಿಸಿ ನಿರ್ವಹಣೆ ಮಾಡಿದ್ದರೆ ಈ ದುರ್ಘಟನೆ ತಪ್ಪಿಸಬಹುದಾಗಿತ್ತು ಎಂದು ಕುಟುಂಬಸ್ಥರು ಅಭಿಪ್ರಾಯಪಟ್ಟಿದ್ದಾರೆ.ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಸಾಹಸ ಕ್ರೀಡೆಗಳು ಮತ್ತು ಅಡ್ವೆಂಚರ್ ಪ್ರವಾಸೋದ್ಯಮ ಕೇಂದ್ರಗಳ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಹಲವರು, ಜಿಪ್ಲೈನ್ ಸೇರಿದಂತೆ ಸಾಹಸ ಚಟುವಟಿಕೆಗಳಲ್ಲಿ ಬಳಸುವ ಸುರಕ್ಷತಾ ಉಪಕರಣಗಳು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದು ಒತ್ತಾಯಿಸಿದ್ದಾರೆ.ಒಬ್ಬ ನೆಟ್ಟಿಗರು, “ಜಿಪ್ಲೈನ್ನಲ್ಲಿ ವ್ಯಕ್ತಿ ಹಗ್ಗವನ್ನು ಬಿಟ್ಟರೂ ಕೆಳಗೆ ಬೀಳದಂತೆ ಸುರಕ್ಷತಾ ಬೆಲ್ಟ್ ದೇಹಕ್ಕೆ ಭದ್ರವಾಗಿ ಜೋಡಿಸಿರಬೇಕು. ಇಂತಹ ಕಳಪೆ ಸುರಕ್ಷತಾ ವ್ಯವಸ್ಥೆಗೆ ಅನುಮತಿ ಹೇಗೆ ನೀಡಲಾಗಿದೆ?” ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, “ಅಪಘಾತ ನಡೆದ ಬಳಿಕ ಕೆಲ ದಿನ ರೆಸಾರ್ಟ್ ಮುಚ್ಚಿಸಿ, ಸಣ್ಣ ಪ್ರಮಾಣದ ದಂಡ ವಿಧಿಸಿ ಮತ್ತೆ ಕಾರ್ಯಾಚರಣೆಗೆ ಅವಕಾಶ ನೀಡುವುದು ಸಾಮಾನ್ಯವಾಗಿದೆ. ಇಂತಹ ಘಟನೆಗಳಲ್ಲಿ ಜವಾಬ್ದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಾಹಸ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸುರಕ್ಷತಾ ಮಾನದಂಡಗಳ ಕಟ್ಟುನಿಟ್ಟಿನ ಅನುಷ್ಠಾನ, ಉಪಕರಣಗಳ ನಿಯಮಿತ ಪರಿಶೀಲನೆ ಹಾಗೂ ಸರ್ಕಾರದ ಮೇಲ್ವಿಚಾರಣೆಯ ಅಗತ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.