ಬೆಂಗಳೂರು: ವಿಕಾಸಸೌಧದ ಕ್ಯಾಂಟೀನ್ನಲ್ಲಿ ಆಹಾರ ಇಲಾಖೆ ದಾಳಿ; ಜಿರಳೆ, ಫಂಗಸ್ ಪತ್ತೆ!

ಬೆಂಗಳೂರು: ರಾಜ್ಯದ ಆಡಳಿತ ಕೇಂದ್ರವಾಗಿರುವ ವಿಕಾಸಸೌಧದ ಕ್ಯಾಂಟೀನ್ನಲ್ಲೇ ಸ್ವಚ್ಛತೆ ಹಾಗೂ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ವಿಕಾಸಸೌಧದ ಮೊದಲ ಮಹಡಿಯಲ್ಲಿರುವ ಕ್ಯಾಂಟೀನ್ ಮೇಲೆ ಇಂದು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ವೇಳೆ ಹಲವು ಗಂಭೀರ ಲೋಪಗಳು ಬೆಳಕಿಗೆ ಬಂದಿವೆ.

ಅಧಿಕಾರಿಗಳ ತಪಾಸಣೆ ವೇಳೆ ತಟ್ಟೆಗಳನ್ನು ಶೇಖರಿಸಿಡುವ ಜಾಗದಲ್ಲಿ ಜಿರಳೆಗಳು ಪತ್ತೆಯಾಗಿವೆ. ಅಲ್ಲದೆ, ಗ್ರಾಹಕರಿಗೆ ಆಹಾರ ನೀಡಲು ಬಳಸಲಾಗುತ್ತಿದ್ದ ಅಡಿಕೆ ಪ್ಲೇಟ್ಗಳ ಮೇಲೆ ಫಂಗಸ್ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಕ್ಯಾಂಟೀನ್ನಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದಿದ್ದು, ಆಹಾರ ಪದಾರ್ಥಗಳ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲೂ ನಿಯಮ ಪಾಲನೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಂಟೀನ್ನಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಸಿರುವುದು ಹಾಗೂ ಆಹಾರ ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಸರಿಯಾಗಿ ಪಾಲಿಸದಿರುವುದು ಕೂಡ ಪರಿಶೀಲನೆ ವೇಳೆ ಕಂಡುಬಂದಿದೆ ಎನ್ನಲಾಗಿದೆ. ಕ್ಯಾಂಟೀನ್ನಲ್ಲಿ ನಿಯಮಿತವಾಗಿ ಪೆಸ್ಟ್ ಕಂಟ್ರೋಲ್ ಮಾಡದಿರುವುದು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆಹಾರ ತಯಾರಿಸುವ ಮತ್ತು ಬಡಿಸುವ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು ಕಡ್ಡಾಯವಾಗಿದ್ದರೂ, ವಿಕಾಸಸೌಧದ ಕ್ಯಾಂಟೀನ್ನಲ್ಲಿ ಈ ವಿಚಾರದಲ್ಲಿ ನಿರ್ಲಕ್ಷ್ಯ ಕಂಡುಬಂದಿರುವುದು ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಪರಿಶೀಲನೆ ವೇಳೆ ಹಲವು ನಿಯಮ ಉಲ್ಲಂಘನೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕ್ಯಾಂಟೀನ್ಗೆ ತಾತ್ಕಾಲಿಕವಾಗಿ ಬೀಗ ಜಡಿದಿದ್ದಾರೆ. ಕ್ಯಾಂಟೀನ್ ಮುಂಭಾಗದಲ್ಲಿ ‘ತಾತ್ಕಾಲಿಕವಾಗಿ ಕ್ಯಾಂಟೀನ್ ಬಂದ್’ ಎಂಬ ನಾಮಫಲಕವನ್ನೂ ಅಳವಡಿಸಲಾಗಿದೆ.
ವಿಕಾಸಸೌಧಕ್ಕೆ ಪ್ರತಿನಿತ್ಯ ಹಲವು ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭೇಟಿ ನೀಡುತ್ತಾರೆ. ಇಂತಹ ಪ್ರಮುಖ ಸರ್ಕಾರಿ ಕಟ್ಟಡದಲ್ಲಿರುವ ಕ್ಯಾಂಟೀನ್ನಲ್ಲೇ ಆಹಾರ ಸುರಕ್ಷತೆ ಹಾಗೂ ಸ್ವಚ್ಛತಾ ನಿಯಮಗಳ ಉಲ್ಲಂಘನೆ ಕಂಡುಬಂದಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಆಹಾರ ಇಲಾಖೆ ಅಧಿಕಾರಿಗಳ ಮುಂದಿನ ಪರಿಶೀಲನೆ ಹಾಗೂ ಕ್ಯಾಂಟೀನ್ ಮಾಲೀಕರ ವಿರುದ್ಧ ಕೈಗೊಳ್ಳುವ ಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.