ಆಗ್ರಾ: ಭಾರತೀಯ ಯುವಕರನ್ನು ಕಾಂಬೋಡಿಯಾ ಸೈಬರ್ ಜಾಲಕ್ಕೆ ಮಾರುತ್ತಿದ್ದ ಮಾಜಿ ಹಡಗಿನ ಕ್ಯಾಪ್ಟನ್ ಬಂಧನ!

ಆಗ್ರಾ: ವಿದೇಶಗಳಲ್ಲಿ ಉದ್ಯೋಗ ನೀಡುವ ಆಮಿಷವೊಡ್ಡಿ ಭಾರತೀಯ ಯುವಕರನ್ನು ಕಾಂಬೋಡಿಯಾದ ಸೈಬರ್ ಜೀತ ಜಾಲಕ್ಕೆ ಕಳ್ಳಸಾಗಾಣಿಕೆ ಮಾಡಿದ ಆರೋಪದಲ್ಲಿ 35 ವರ್ಷ ವಯಸ್ಸಿನ ಮರ್ಚೆಂಟ್ ಹಡಗಿನ ಮಾಜಿ ಕ್ಯಾಪ್ಟನ್ ನನ್ನು ಸೈಬರ್ ಭದ್ರತಾ ತಂಡ ಶುಕ್ರವಾರ ಬಂಧಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ನಾಗೇಶ್ ಕುಮಾರ್ ಅಲಿಯಾಸ್ ಕ್ಯಾಪ್ಟನ್ ಚೌಹಾಣ್ ಮೂಲತಃ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯವನು. ಈತನನ್ನು ಚಂಡೀಗಢದಲ್ಲಿ ಬಂಧಿಸಿ ಗುರುವಾರ ಸಂಜೆ ಆಗ್ರಾಗೆ ಕರೆತರಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಹಡಗಿನ ಕ್ಯಾಪ್ಟನ್ ಉದ್ಯೋಗ ತೊರೆದ ಕುಮಾರ್, ಕಳೆದ ಮೂರು ವರ್ಷದಿಂದ ಈ ದಂಧೆಯಲ್ಲಿ ಷಾಮೀಲಾಗಿದ್ದ. ಉತ್ತರ ಪ್ರದೇಶದ ಪ್ರಮುಖ ನಗರಗಳಾದ ಆಗ್ರಾ ಮತ್ತು ಕಾನ್ಸುರದ ಯುವಕರಿಗೆ ಒಳ್ಳೆಯ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಅವರನ್ನು ಥಾಯ್ಲೆಂಡ್ ಗೆ ಕರೆದೊಯ್ದು ಕಾಂಬೋಡಿಯಾ ಮತ್ತು ನಾವೋಸ್ ಗೆ ಕಳ್ಳಸಾಗಾಣಿಕೆ ಮಾಡುತ್ತಿದ್ದ. ಈ ಯುವಕರನ್ನು ಬಳಿಕ ಚೀನಾದ ಸೈಬರ್ ವಂಚನೆ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ವಿಚಾರಣೆಯಿಂದ ತಿಳಿದುಬಂದಿದೆ.
ಆಗ್ನೆಯ ಏಷ್ಯಾ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚೀನಾ ಮೂಲದ ಸೈಬರ್ ವಂಚನೆ ಕಂಪನಿಗಳಿಗೆ ತಮ್ಮನ್ನು ಮಾರಾಟ ಮಾಡುವ ಮೂಲಕ ವಂಚಿಸಲಾಗಿದೆ ಎಂದು ಆಗ್ರಾ, ಕಾಜ್ಜುರ ಮತ್ತು ದೇಶದ ವಿವಿಧ ಕಡೆಗಳ ಯುವಕರು ದೂರು ನೀಡಿದ ಹಿನ್ನೆಲೆಯಲ್ಲಿ ಈ ವಂಚನೆ ಜಾಲ 2025ರ ಸೆಪ್ಟೆಂಬರ್ ನಲ್ಲಿ ಬೆಳಕಿಗೆ ಬಂದಿದೆ. ಆರು ತಿಂಗಳಿನಿಂದ ಆರೋಪಿ ತಲೆ ಮರೆಸಿಕೊಂಡಿದ್ದ ಹಾಗೂ ಈ ಸಂಬಂಧ ಬಂಧಿಸಲ್ಪಟ್ಟ ಅಜಯ್ ಶುಕ್ಲಾ, ರೌನಿ ಅಲಿಯಾಸ್ ಅತೀಫ್ ಖಾನ್ ಹಾಗೂ ಅಮೀರ್ ಖಾನ್ ಎಂಬುವವರ ವಿಚಾರಣೆ ನಡೆಸಿದಾಗ ಈತನ ಹೆಸರು ತಿಳಿದುಬಂತು ಎಂದು ಸೈಬರ್ ಅಪರಾಧ ವಿಭಾಗದ ಡಿಸಿಪಿ ಆದಿತ್ಯ ಹೇಳಿದ್ದಾರೆ.
ಈ ವಂಚನೆ ಜಾಲದ ಬಗ್ಗೆ ವಿವರ ನೀಡಿದ ದೂರುದಾರರು, ಭಾರತೀಯ ಪ್ರಜೆಗಳನ್ನು ಗುರಿ ಮಾಡಿ ವಾಟ್ಸಪ್ ಕರೆ ಮತ್ತು ಇತರ ಆನ್ಲೈನ್ ಪ್ಲಾಟ್ ಫಾರಂಗಳ ಮೂಲಕ ಕಾಲ್ಸೆಂಟರ್ ಗಳಲ್ಲಿ ಕೆಲಸ ಮಾಡುವಂತೆ ತಮ್ಮನ್ನು ಹೇಗೆ ಬಲವಂತಪಡಿಸಲಾಗಿತ್ತು ಎಂದು ತಿಳಿಸಿದ್ದರು.