ಬೆಂಗಳೂರು: ಚಿಕ್ಕಬಾಣಾವರ ಜೋಡಿ ಕೊಲೆ ಪ್ರಕರಣದ ಬೆಚ್ಚಿಬೀಳಿಸುವ ರಹಸ್ಯ ಬಯಲು; ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆಗೈದ ಹರಿಣಿ!

ಬೆಂಗಳೂರು: ರಾಜಧಾನಿಯ ಸಮೀಪದ ಚಿಕ್ಕಬಾಣಾವರದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಮೃತ ಅಭಿನಂದನ್ ಅವರ ಪತ್ನಿ ಹರಿಣಿ ತಾನೇ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಹರಿಣಿಯನ್ನು ವಶಕ್ಕೆ ಪಡೆದಿರುವ ಚಿಕ್ಕಬಾಣಾವರ ಪೊಲೀಸರು, ತಲೆಮರೆಸಿಕೊಂಡಿರುವ ಆಕೆಯ ಪ್ರಿಯಕರ ವಿನಯ್ಗಾಗಿ ಬಲೆ ಬೀಸಿದ್ದಾರೆ.

ಪೋಲಿಸ್ ವಿಚಾರಣೆ ವೇಳೆ ಆತಂಕಕಾರಿ ವಿಷಯಗಳನ್ನು ತೆರೆದಿಟ್ಟಿರುವ ಹರಿಣಿ, ಘಟನೆ ನಡೆದ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದಳು. ಬಳಿಕ ಪ್ರಿಯಕರ ವಿನಯ್ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇಬ್ಬರೂ ಸೇರಿ ನಿದ್ರೆಯಲ್ಲಿದ್ದ ಅಭಿನಂದನ್ ತಲೆಗೆ ಮನೆಯಲ್ಲಿದ್ದ ಸೌಟ್ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ತಂದೆಯ ಮೇಲಿನ ಹಲ್ಲೆಯನ್ನು ಕಂಡು ಮಗ ಯದುವೀರ್ ಎಚ್ಚರಗೊಂಡಿದ್ದ. ಈ ಕೃತ್ಯದ ಬಗ್ಗೆ ಮಗು ಮುಂದೆ ಎಲ್ಲಿಯಾದರೂ ಹೇಳಬಹುದು ಅಥವಾ ತಮಗೆ ತೊಂದರೆಯಾಗಬಹುದು ಎಂಬ ಭಯದಿಂದ, ಹರಿಣಿ ಹಾಗೂ ಆಕೆಯ ಪ್ರಿಯಕರ ವಿನಯ್ ಸೇರಿ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಕೊಲೆ ನಡೆಸಿದ ನಂತರ ಸಾಕ್ಷ್ಯ ನಾಶಪಡಿಸಲು ಹರಿಣಿ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ನೀರು ಹಾಕಿ ತೊಳೆದಿದ್ದಾಳೆ. ಅಭಿನಂದನ್ ರಕ್ತದ ಕಲೆ ಬಿದ್ದಿದ್ದ ಬಟ್ಟೆಗಳನ್ನು ರಾತ್ರೋರಾತ್ರಿ ಒಗೆದು ಸಾಕ್ಷ್ಯ ಮುಚ್ಚಿಹಾಕಲು ಯತ್ನಿಸಿದ್ದಾಳೆ. ಬಳಿಕ ಗಂಡನೇ ಮಗುವಿನ ಮೇಲೆ ಮಲಗಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂಬಂತೆ ಬಿಂಬಿಸಲು ಡ್ರಾಮಾ ಮಾಡಿದ್ದಳು. ಸದ್ಯ ಪೊಲೀಸರು ಪ್ರಿಯಕರ ವಿನಯ್ಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.