ಬೆಂಗಳೂರು: ಪರೀಕ್ಷೆ ಬರೆಯಲು ಬಂದ ತಾಯಿಯ ಆತಂಕ ದೂರ ಮಾಡಿದ ಕಾನ್ಸ್ಟೇಬಲ್; ಪೊಲೀಸ್ ಸಿಬ್ಬಂದಿಯ ಮಾನವೀಯತೆ!

ಬೆಂಗಳೂರು: ಪರೀಕ್ಷೆ ಬರೆಯಲು ಬಂದಿದ್ದ ತಾಯಿಯೊಬ್ಬರ ಸಂಕಟಕ್ಕೆ ಮಿಡಿದ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಸಿಬ್ಬಂದಿ, ಅವರ ಎಂಟು ತಿಂಗಳ ಮಗುವನ್ನು ಪೋಷಿಸುವ ಮೂಲಕ ಅಪಾರ ಮಾನವೀಯತೆ ಮೆರೆದಿದ್ದಾರೆ. ನಗರದ ಕೃಷ್ಣಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ.

ರಾಜ್ಯಾದ್ಯಂತ ನಡೆದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಗೆ ಅಭ್ಯರ್ಥಿಯೊಬ್ಬರು ತಮ್ಮ 8 ತಿಂಗಳ ಮಗುವಿನೊಂದಿಗೆ ಆಗಮಿಸಿದ್ದರು. ಆದರೆ, ಪರೀಕ್ಷಾ ಕೊಠಡಿಗೆ ತೆರಳುವ ಕೊನೆ ಗಳಿಗೆಯಲ್ಲಿ ಮಗು ಜೋರಾಗಿ ಅಳಲು ಪ್ರಾರಂಭಿಸಿತು. ಎಷ್ಟೇ ಪ್ರಯತ್ನಿಸಿದರೂ ಅಳು ನಿಲ್ಲದಿದ್ದಾಗ, ಮಗುವನ್ನು ನೋಡಿಕೊಳ್ಳಬೇಕೋ ಅಥವಾ ಭವಿಷ್ಯ ರೂಪಿಸುವ ಪರೀಕ್ಷೆ ಬರೆಯಬೇಕೋ ಎಂದು ತಾಯಿ ದಿಕ್ಕುತೋಚದೆ ಸಂಕಷ್ಟ ಸ್ಥಿತಿಯಲ್ಲಿದ್ದರು.
ಸ್ಥಳದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಈ ದೃಶ್ಯವನ್ನು ಗಮನಿಸಿದರು. ತಕ್ಷಣ ತಾಯಿಯ ಬಳಿ ತೆರಳಿ, “ನೀವು ನಿಶ್ಚಿಂತೆಯಿಂದ ಪರೀಕ್ಷೆ ಬರೆಯಿರಿ, ನಿಮ್ಮ ಮಗುವನ್ನು ನಮ್ಮ ಮಗುವಿನಂತೆ ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ” ಎಂದು ಅಭಯ ನೀಡಿದರು. ತಾಯಿ ನಿರಾಳವಾಗಿ ಪರೀಕ್ಷಾ ಕೊಠಡಿಗೆ ತೆರಳಿದ ಬಳಿಕ, ಪೊಲೀಸ್ ಸಿಬ್ಬಂದಿ ಮಗುವನ್ನು ಮುದ್ದಾಡಿ, ಆಟವಾಡಿಸಿ ಕಾಳಜಿಯಿಂದ ನೋಡಿಕೊಂಡರು. ಪರೀಕ್ಷೆ ಮುಗಿಸಿ ಹೊರಬಂದ ತಾಯಿ, ಸಿಬ್ಬಂದಿಯ ಈ ಕರುಣೆಗೆ ಕಣ್ಣೀರಿನಿಂದ ಧನ್ಯವಾದ ಅರ್ಪಿಸಿದರು. ಕರ್ತವ್ಯ ಪ್ರಜ್ಞೆಯ ಜೊತೆಗೆ ಮಾನವೀಯ ಮೌಲ್ಯ ಎತ್ತಿಹಿಡಿದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.