ಬೆಳ್ತಂಗಡಿ: ವಿದ್ಯುತ್ ಸ್ಟೇಷನ್ನಲ್ಲಿ ಕಳ್ಳತನ ಪ್ರಕರಣ; ಮತ್ತೊಬ್ಬ ಆರೋಪಿಯ ಬಂಧನ!

ಬೆಳ್ತಂಗಡಿ : ಕುವೆಟ್ಟು ಗ್ರಾಮದ ಶಕ್ತಿನಗರದ ಎಸ್.ಎಲ್.ವಿ ಇ ಪವರ್ ಪ್ರೈವೇಟ್ ಲಿಮಿಟೆಡ್ ರಿಸೀವಿಂಗ್ ಸ್ಟೇಷನ್ನಲ್ಲಿ ಜುಲೈ 1 ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮದ ನಿವಾಸಿ ಇಬ್ರಾಹಿಂ ಲತೀಫ್ (36) ಎಂಬಾತನನ್ನು ತನಿಖೆ ನಡೆಸಿ ಬೆಳ್ತಂಗಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆನಂದ್. ಎಂ. ನೇತೃತ್ವದ ತಂಡ ಕಾಶಿಪಟ್ಣದಲ್ಲಿ ಜುಲೈ 14 ರಂದು ಸಂಜೆ ಬಂಧಿಸಿ ವಿಚಾರಣೆ ನಡೆಸಿ, ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮೃತ ಯುವಕ ಹಾಗೂ ಇಬ್ರಾಹಿಂ ಲತೀಫ್ ಒಟ್ಟಿಗೆ ವಿದ್ಯುತ್ ಸಬ್ಸ್ಟೇಷನ್ ಸಮೀಪ ಕಳ್ಳತನಕ್ಕಾಗಿ ಹೋಗಿರುವ ಬಗ್ಗೆ ಹಾಗೂ ಅಲ್ಲಿ ಮುಸ್ತಾಕ್ ಆಕಸ್ಮಿಕವಾಗಿ ವಯರ್ ಕುತ್ತಿಗೆಗೆ ಸಿಲುಕಿ ಮೃತಪಟ್ಟಿರಬಹುದು ಎಂಬುದು ಪೊಲೀಸರ ಅನುಮಾನವಾಗಿದ್ದು, ಇಬ್ಬರೂ ಸೇರಿ ಕಳ್ಳತನಕ್ಕೆ ಯತ್ನಿಸಿದ ಬಗ್ಗೆ ಸ್ಪಷ್ಟವಾದ ಸಾಕ್ಷ್ಯಗಳು ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರ ಎಂಬಲ್ಲಿರುವ ಎಸ್.ಎಲ್.ವಿ ಇ ಪವರ್ ಪ್ರೈವೇಟ್ ಲಿಮಿಟೆಡ್ ರಿಸೀವಿಂಗ್ ಸ್ಟೇಷನ್ನಲ್ಲಿ ಜುಲೈ 1 ರಂದು ರಿಸೀವಿಂಗ್ ಸ್ಟೇಷನ್ ಕಂಪೌಂಡ್ನ ಒಳಗೆ ತೊಂಡೆಕಾಯಿ ಬೆಳೆಯಲು ಚಪ್ಪರಕ್ಕೆ ಹಾಕಿದ್ದ ಜಿಐ ಸ್ಟೀಲ್ ವಯರ್ ಕುತ್ತಿಗೆಗೆ ಸಿಕ್ಕಿಕೊಂಡು ಅಥವಾ ಇನ್ನಾವುದೋ ಕಾರಣದಿಂದ ಮುಸ್ತಾಕ್ (27) ಮೃತಪಟ್ಟ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದಲ್ಲಿ ಮೃತಪಟ್ಟ ಮುಸ್ತಾಕ್ನ ಮೃತದೇಹ ಪತ್ತೆಯಾದ ಸ್ಥಳದ ಹತ್ತಿರ ರಿಸೀವಿಂಗ್ ಸ್ಟೇಷನ್ನ ಕಂಪೌಂಡ್ ಒಳಗೆ ಉಪಯೋಗಿಸಿ ಉಳಿದ ಹಳೆಯ ಅಲ್ಯೂಮಿನಿಯಂ ವಯರ್ ತುಂಡುಗಳು ಬಿದ್ದಿರುವುದನ್ನು ಕಂಡು ಈ ಬಗ್ಗೆ ಅನುಮಾನಗೊಂಡ ಮ್ಯಾನೇಜರ್ ರಾಜೇಂದ್ರನ್ ಅವರು ತಮ್ಮ ರಿಸೀವಿಂಗ್ ಸ್ಟೇಷನ್ನ ಕಂಪೌಂಡ್ ಒಳಗೆ ಇರಿಸಿದ ಅಲ್ಯೂಮಿನಿಯಂ ವಯರ್ನ ಬಂಡಲ್ಗಳು ಮತ್ತು ಇನ್ನಿತರ ಸಲಕರಣೆಗಳನ್ನು ಪರಿಶೀಲನೆ ನಡೆಸಿದಾಗ ಹಳೆಯ ಅಲ್ಯೂಮಿನಿಯಂ ವಯರ್ಗಳು ಕಳ್ಳತನವಾಗಿರುವುದು ತಿಳಿದು ಈ ಬಗ್ಗೆ ದೂರು ನೀಡಿದ್ದರು. ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.