ಮಂಗಳೂರು: ಕಂಕನಾಡಿಯಲ್ಲಿ ಗುಡ್ಡ ಕುಸಿತ; ಇಬ್ಬರು ಮಕ್ಕಳು ಸೇರಿ ಮೂವರ ಸಾ*ವು!

ಮಂಗಳೂರು: ಭಾರೀ ಮಳೆಗೆ ನಗರದ ಕಂಕನಾಡಿ ನಾಗುರಿ ಬಳಿಯ ಗರೋಡಿಯಲ್ಲಿ ಹಳೆಯ ಹಂಚಿನ ಕಟ್ಟಡದ ಮೇಲೆ ತಡೆಗೊಡೆ ಕುಸಿದು ಬಿದ್ದಿದ್ದು ಇಬ್ಬರು ಮಕ್ಕಳು ಮತ್ತು ಒಬ್ಬರು ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ.

ನಿನ್ನೆ ರಾತ್ರಿಯಿಂದ ಮಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು, ಮಳೆಯ ತೀವ್ರತೆಗೆ ಮನೆ ಹಿಂಭಾಗದಲ್ಲಿದ್ದ ತಡೆಗೊಡೆ ಕುಸಿದು ಬಿದ್ದಿದೆ. ಇದರಿಂದಾಗಿ ಕೆಳ ಭಾಗದಲ್ಲಿ ನಾಲ್ಕು ಪ್ರತ್ಯೇಕ ಕುಟುಂಬಗಳು ವಾಸವಿದ್ದ ಹಳೆ ಮನೆಯ ಕಟ್ಟಡಕ್ಕೆ ಮಣ್ಣು ಬಿದ್ದಿದ್ದು ಒಂದು ಭಾಗ ತೀವ್ರ ಹಾನಿಯಾಗಿದೆ. ಅವಶೇಷಗಳಡಿ ಸಿಲುಕಿದ್ದ ಶಾಂತ (46), ಅನಾಮಿಕ ಚೌರಾಸಿಯಾ (8) ಹಾಗೂ ತನು (4) ಅವರನ್ನು ಹೊರತೆಗೆದಾಗ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.
ಬಿಹಾರ ಮೂಲದ ಲಾಲ್ ಬಾಬು (37) ಮತ್ತು ಆತನ ಪತ್ನಿ ಇಂದು (34) ಹಾಗೂ ಅವರ ನಾಲ್ಕು ಮಕ್ಕಳು ಒಂದು ಮನೆಯಲ್ಲಿ ಎಂಟು ವರ್ಷಗಳಿಂದ ನೆಲೆಸಿದ್ದರು. ಅಲ್ಕಾ(14), ಅನುಷ್ಕಾ(11), ಅನಾಮಿಕ (7) ಮತ್ತು ತನು (3) ಎಂಬ ಮಕ್ಕಳಿದ್ದು ಈ ಪೈಕಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಹಾನಿಗೀಡಾದ ಮತ್ತೊಂದು ಮನೆಯಲ್ಲಿ ಉಡುಪಿ ಜಿಲ್ಲೆಯ ಮೂಲದ ಬಾಲಕೃಷ್ಣ (40) ಮತ್ತು ಅವರ ಪತ್ನಿ ಶಾಂತ (35) ಎಂಬವರು ಕಳೆದ ಎಂಟು ತಿಂಗಳಿನಿಂದ ನೆಲೆಸಿದ್ದು ಈ ಪೈಕಿ ಶಾಂತ ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಶಂಕೆ ಇದೆ.
ಘಟನೆ ಸಂಭವಿಸಿದ ವೇಳೆ ಮನೆಯಲ್ಲಿ ಒಟ್ಟು ಆರು ಮಂದಿ ಇದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಪೂರ್ಣಗೊಳಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ಷಣಾ ಕಾರ್ಯ ಮುಕ್ತಾಯಗೊಂದಿಗೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.