ಉಡುಪಿ: ಮಾನಸಿಕ ಒತ್ತಡ ತಾಳಲಾರದೆ 27 ವರ್ಷದ ಮಾಡೆಲಿಂಗ್ ಯುವತಿ ಕಲ್ಮಾಡಿಯಲ್ಲಿ ಆತ್ಮಹ*ತ್ಯೆ!

ಉಡುಪಿ : ಜೀವನದಲ್ಲಿ ಉಂಟಾದ ತೀವ್ರ ಜಿಗುಪ್ಸೆ ಹಾಗೂ ಮಾನಸಿಕ ಒತ್ತಡ ತಾಳಲಾರದೆ 27 ವರ್ಷದ ಮಾಡೆಲಿಂಗ್ ಯುವತಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಾಡಿಯಲ್ಲಿ ಗುರುವಾರ ಸಂಭವಿಸಿದೆ. ಮೃತ ಯುವತಿಯನ್ನು ಕಲ್ಮಾಡಿ ನಿವಾಸಿ ರತ್ನಾ ಎಂಬುವರ ಪುತ್ರಿ ಕೃತಿ ಬಂಗೇರಾ (27) ಎಂದು ಗುರುತಿಸಲಾಗಿದೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಕೃತಿ ಬಂಗೇರಾ ಅವರು ಉಡುಪಿ ನಗರದ ಕಡಿಯಾಳಿ ಸಮೀಪದ ಖಾಸಗಿ ಹೋಟೆಲ್ ಒಂದರಲ್ಲಿ ಉದ್ಯೋಗ ಮಾಡುತ್ತಿದ್ದರು. ಆದರೆ, ಕಳೆದ ಐದು ತಿಂಗಳಿಂದ ಅವರು ಕೆಲಸಕ್ಕೆ ತೆರಳದೆ ಮನೆಯಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ. ಈ ನಡುವೆ ತೀವ್ರ ಮಾನಸಿಕ ಒತ್ತಡ ಹಾಗೂ ಜಿಗುಪ್ಸೆಗೆ ಒಳಗಾಗಿದ್ದ ಕೃತಿ, ಗುರುವಾರ ತಮ್ಮ ಮನೆಯ ಬೆಡ್ರೂಮ್ನಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
(ಗಮನಿಸಿ: ಮಾನಸಿಕ ಒತ್ತಡ ಅಥವಾ ಆತ್ಮಹತ್ಯೆಯ ಆಲೋಚನೆಗಳಿದ್ದರೆ ತಕ್ಷಣವೇ ಸಹಾಯವಾಣಿ ಸಂಖ್ಯೆ 104 ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.)