ತ್ವಿಶಾ ಶರ್ಮಾ ಸಾವು ಪ್ರಕರಣ: ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ಹೈಕೋರ್ಟ್!

ಭೋಪಾಲ್: ನಟಿ-ಮಾಡೆಲ್ ತ್ವಿಶಾ ಶರ್ಮಾ ಅವರ ವರದಕ್ಷಿಣೆ ಕಿರುಕುಳ ಸಾವಿನ ಪ್ರಕರಣದಲ್ಲಿ ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರಿಗೆ ಭೋಪಾಲ್ ಸೆಷನ್ಸ್ ನ್ಯಾಯಾಲಯ ಮೇ 15ರಂದು ನೀಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ಮಧ್ಯಪ್ರದೇಶ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.

ಮೇ 12ರಂದು ತ್ವಿಶಾ ಶರ್ಮಾ ಮೃತಪಟ್ಟಿದ್ದರು. ಅದಾದ ಮೂರು ದಿನಗಳ ನಂತರ, ಅವರ ಅತ್ತೆ 63 ವರ್ಷದ ಸಿಂಗ್ ಮೇ 15ರಂದು ಭೋಪಾಲ್ ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಈ ಹಿಂದೆ ಸುಮಾರು ಮೂರು ಗಂಟೆಗಳ ಕಾಲ ವಾದಗಳನ್ನು ಆಲಿಸಿದ ನಂತರ ತಮ್ಮ ತೀರ್ಪನ್ನು ಕಾಯ್ದಿರಿಸಿದ ನ್ಯಾಯಮೂರ್ತಿ ದೇವನಾರಾಯಣ ಮಿಶ್ರಾ ಅವರು ಹೈಕೋರ್ಟ್ ತೀರ್ಪಿನ ನಂತರ ಬುಧವಾರ ತಡರಾತ್ರಿ ಆದೇಶವನ್ನು ಹೊರಡಿಸಿದ್ದಾರೆ. ಇದು ಗಿರಿಬಾಲ ಸಿಂಗ್ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಲು ಅನುವು ಮಾಡಿಕೊಡುತ್ತದೆ ಮತ್ತು ಹೈಪ್ರೊಫೈಲ್ ಪ್ರಕರಣದ ತನಿಖೆಯನ್ನು ವೇಗಗೊಳಿಸುತ್ತದೆ.
ಪ್ರಕರಣದ ಆರೋಪಿ ಗಿರಿಬಾಲಾ ಸಿಂಗ್ ಮತ್ತು ಅವರ ಪುತ್ರ ಮತ್ತು ತ್ವಿಶಾ ಶರ್ಮಾ ಅವರ ಪತಿ ಸಮರ್ಥ್ ಸಿಂಗ್ ಅವರಿಗೆ ಭೋಪಾಲ್ನ ಹತ್ತನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮೇ 15ರಂದು ನಿರೀಕ್ಷಣಾ ಜಾಮೀನು ನೀಡಿತ್ತು. ಅದೇ ದಿನ ಕತಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಸಾವು ಪ್ರಕರಣ ದಾಖಲಾಗಿತ್ತು.
ಸಿಬಿಐ ತನಿಖೆಯ ಪ್ರಮುಖ ಮೂಲಗಳ ಪ್ರಕಾರ, ಏಜೆನ್ಸಿಯು ಶೀಘ್ರದಲ್ಲೇ ಮಾಜಿ ನ್ಯಾಯಾಧೀಶರನ್ನು ವಶಕ್ಕೆ ಪಡೆಯಬಹುದು. ತಾಯಿ-ಮಗನನ್ನು ಒಟ್ಟಿಗೆ ಪ್ರಶ್ನಿಸಬಹುದು ಅಥವಾ ಅಡ್ಡ ವಿಚಾರಣೆ ನಡೆಸಬಹುದು ಎನ್ನಲಾಗಿದೆ. ಸಮರ್ಥ್ ಈಗಾಗಲೇ ಮೇ 29ರವರೆಗೆ ಸಿಬಿಐ ಕಸ್ಟಡಿಯಲ್ಲಿದ್ದಾರೆ.
ಈಮಧ್ಯೆ, ಸಿಬಿಐ ಮೇ 12ರ ರಾತ್ರಿ ಘಟನೆಗೆ ಸಂಬಂಧಿಸಿದ ಎಲ್ಲ ಸಂಬಂಧಿತ ಸೆಲ್ ಫೋನ್ ಸಂಖ್ಯೆಗಳ ಕರೆ ವಿವರ ದಾಖಲೆಗಳನ್ನು (ಸಿಡಿಆರ್) ಕೋರಿದೆ ಮತ್ತು ಮೇ 12 ರಿಂದ ಮೇ 20ರ ನಡುವಿನ ಅವಧಿಗೆ ಆ ಸಂಖ್ಯೆಗಳ ಟವರ್ ಸ್ಥಳಗಳನ್ನು ಪಡೆದುಕೊಳ್ಳಲು ಟೆಲಿಕಾಂ ಕಂಪನಿಗಳನ್ನು ಕೇಳಿದೆ.
ಗಿರಿಬಾಲಾ ಸಿಂಗ್ ಅವರ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದ 17 ಪುಟಗಳ ತೀರ್ಪಿನಲ್ಲಿ, ಅವರ ಹೇಳಿಕೆಯನ್ನು ದಾಖಲಿಸಲು ಮತ್ತು ತನಿಖೆಗೆ ಸಹಾಯ ಮಾಡಲು ಹಲವಾರು ನೋಟಿಸ್ಗಳನ್ನು ನೀಡಲಾಗಿದ್ದರೂ, ಅವರು ತನಿಖಾ ಸಂಸ್ಥೆಯೊಂದಿಗೆ ಅವರು ಸಹಕರಿಸುತ್ತಿಲ್ಲ ಎಂದು ಹೈಕೋರ್ಟ್ ಗಮನಿಸಿದೆ.
‘ಮೃತರ ಸಾವಿನ ಸುತ್ತ ಇರುವ ನಿಗೂಢತೆ, ಪ್ರಭಾವಿ ಆರೋಪಿಗಳು ಭಾಗಿಯಾಗಿರುವ ಸಾಧ್ಯತೆ ಮತ್ತು ನಡೆಯುತ್ತಿರುವ ತನಿಖೆಯ ಸಮಯದಲ್ಲಿ ತೋರಿಸಲಾದ ಅಸಹಕಾರವು ಈ ವಿಷಯವು ಆರಂಭಿಕ ಹಂತದಲ್ಲಿದೆ ಎಂದು ಸೂಚಿಸುತ್ತದೆ. ಆದ್ದರಿಂದ, ಗಿರಿಬಾಲಾ ಸಿಂಗ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದು ಅಗತ್ಯವಾಗಬಹುದು ಮತ್ತು ಅವರ ವಾದವನ್ನು ಬೆಂಬಲಿಸಬಹುದು’ ಎಂದು ನ್ಯಾಯಾಲಯ ಹೇಳಿದೆ.
ಗಿರಿಬಾಲಾ ಸಿಂಗ್ ಮತ್ತು ಅವರ ಮಗ ಸಮರ್ಥ್ ಗರ್ಭಪಾತ ಮಾಡಿಸಲು ಒತ್ತಡ ಹೇರಿದ್ದಾರೆ ಎಂದು ತ್ವಿಶಾ ಅವರ ತಾಯಿ ಮತ್ತು ಇತರ ಸಂಬಂಧಿಕರು ಆರೋಪಿಸಿರುವುದನ್ನು ಗಮನಿಸಿರುವ ಹೈಕೋರ್ಟ್, ತನಿಖಾಧಿಕಾರಿಗಳು ಇಲ್ಲಿಯವರೆಗೆ ದಾಖಲಿಸಿರುವ ಹೇಳಿಕೆಗಳಲ್ಲಿ ಇಬ್ಬರೂ ಆರೋಪಿಗಳ ವಿರುದ್ಧ ಸ್ಪಷ್ಟ ಆರೋಪಗಳಿವೆ. ವಾಟ್ಸಾಪ್ ಚಾಟ್ಗಳು ಈ ಆರೋಪಗಳು ಸಮರ್ಥ್ ಸಿಂಗ್ಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಸೂಚಿಸುತ್ತವೆ. ಗಿರಿಬಾಲಾ ಅವರಿಗೆ ಜಾಮೀನು ನೀಡುವಾಗ ವಿಚಾರಣಾ ನ್ಯಾಯಾಲಯವು ಈ ಅಂಶಗಳನ್ನು ಪರಿಗಣಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.
‘ಮೇ 13ರ ಮರಣೋತ್ತರ ಪರೀಕ್ಷೆ ವರದಿ ಪ್ರಕಾರ (ಭೋಪಾಲ್-AIIMS ನಲ್ಲಿ ಮೊದಲ ಮರಣೋತ್ತರ ಪರೀಕ್ಷೆ), ಸಾವು ನೇಣು ಬಿಗಿದುಕೊಂಡಿದ್ದರಿಂದಲೇ ಸಂಭವಿಸಿದೆ. ಆದರೆ, ಮೃತರ ದೇಹದಲ್ಲಿ ಇತರ ಆರು ಗಾಯಗಳು ಕಂಡುಬಂದಿವೆ. ಇದರಲ್ಲಿ ನಾಲ್ಕು ಎಡಗೈ, ಒಂದು ಉಂಗುರದ ಬೆರಳಿನಲ್ಲಿ ಮತ್ತು ಒಂದು ತಲೆಯ ಮೇಲಿದೆ. ಈ ಗಾಯಗಳು ಲಿಗೇಚರ್ನಿಂದ ದೇಹವನ್ನು ಹೊರತೆಗೆದ ಕಾರಣ ಅಥವಾ ಆಸ್ಪತ್ರೆಗೆ ಸಾಗಿಸಿದ ಕಾರಣ ಉಂಟಾಗಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.