ತೆಲಂಗಾಣ: ವಿವಾಹೇತರ ಸಂಬಂಧ, ₹2 ಕೋಟಿ ಇನ್ಶೂರೆನ್ಸ್ ಹಣಕ್ಕಾಗಿ ಪತಿಯನ್ನೇ ಕೊಂದ ಖತರ್ನಾಕ್ ಪತ್ನಿ ಅರೆಸ್ಟ್!

ತೆಲಂಗಾಣ : ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಂದು, ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಿ ಬರೊಬ್ಬರಿ ಗಂಡನ 2 ಕೋಟಿ ರೂಪಾಯಿ ವಿಮೆ ಹಣ ಲಪಟಾಯಿಸಲು ಸಂಚು ರೂಪಿಸಿದ್ದ ಖತರ್ನಾಕ್ ಮಹಿಳೆ ಹಾಗೂ ಆಕೆಯ ಪ್ರಿಯಕರ ಸೇರಿ ಮೂವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಮೇ 22 ರಂದು ಹಾಜಿಪುರ ಮಂಡಲದ ಗುಡಿಪೇಟೆಯ ಸೈನಿ ಕುಮಾರ್ (45) ಎಂಬುವವರು ನಿಗೂಢ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮೇಲ್ನೋಟಕ್ಕೆ ಇದು ಅಪಘಾತದಂತೆ ಕಂಡರೂ, ಮೃತರ ತಾಯಿ ಲಕ್ಷ್ಮಿ ಅವರು ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಎಸಿಪಿ ಪ್ರಕಾಶ್ ಮತ್ತು ಗ್ರಾಮೀಣ ಸಿಐ ರವೀಂದರ್ ತಂಡ ಈ ಭೀಕರ ಹತ್ಯಾಕಾಂಡವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಂಚೇರಿಯಲ್ ಡಿಸಿಪಿ ಭಾಸ್ಕರ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೃತ ಸೈನಿ ಕುಮಾರ್ ಪತ್ನಿ ಭಾರತಿ, ಅದೇ ಗ್ರಾಮದ ಲಗಿಸೆಟ್ಟಿ ಸುರೇಂದರ್ ಎಂಬಾತನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಪತಿ ಎಲ್ಐಸಿ ಸೇರಿದಂತೆ ಹಲವು ಕಂಪನಿಗಳಲ್ಲಿ ದೊಡ್ಡ ಮೊತ್ತದ ವಿಮೆ ಮಾಡಿಸಿ ಪ್ರೀಮಿಯಂ ಕಟ್ಟುತ್ತಿರುವುದು ಆಕೆಗೆ ಗೊತ್ತಿತ್ತು. ಒಂದು ವೇಳೆ ಪತಿ ರಸ್ತೆ ಅಪಘಾತದಲ್ಲಿ ಸತ್ತರೆ ಅವರು ಕಟ್ಟಿರುವ ಇನ್ಸುರೆನ್ಸ್ ನ 2 ಕೋಟಿ ರೂಪಾಯಿ ಹಣ ಸಿಗುತ್ತದೆ ಎಂದು ಲೆಕ್ಕಾಚಾರ ಹಾಕಿದ ಭಾರತಿ, ಭೀಕರ ಕೊಲೆಗೆ ಯೋಜನೆ ರೂಪಿಸಿದ್ದಳು.
ಇದಕ್ಕಾಗಿ ಆಕೆ ಸಾಲದ ವ್ಯವಹಾರದಲ್ಲಿದ್ದ ರಾಮ್ ಮಲ್ಲೇಶ್ ಎಂಬಾತನಿಗೆ ಪತಿಯನ್ನು ಮುಗಿಸಲು 10 ಲಕ್ಷ ರೂಪಾಯಿ ಸುಪಾರಿ ನೀಡಿ, 2 ಲಕ್ಷ ರೂಪಾಯಿ ಮುಂಗಡ ಕೊಟ್ಟಿದ್ದಳು. ಮಲ್ಲೇಶ್ ಮತ್ತೊಬ್ಬ ಆರೋಪಿ ಶ್ರೀರಾಮ್ ಎಂಬಾತನ ಜೊತೆ ಸೇರಿ ಮೇ 22 ರಂದು ಸೈನಿ ಕುಮಾರ್ಗೆ ತೀವ್ರವಾಗಿ ಮದ್ಯ ಕುಡಿಸಿ, ತಲೆಗೆ ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾರೆ. ನಂತರ ಇದೊಂದು ಅಪಘಾತ ಎಂದು ತೋರಿಸಲು ಶವ ಹಾಗೂ ದ್ವಿಚಕ್ರ ವಾಹನವನ್ನು ರಸ್ತೆ ಬದಿಯಲ್ಲಿ ಹಾಕಿ ಪರಾರಿಯಾಗಿದ್ದರು. ಪೊಲೀಸರ ತೀವ್ರ ತನಿಖೆಯ ವೇಳೆ ಪತ್ನಿಯ ನಡವಳಿಕೆ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಇಡೀ ಸತ್ಯ ಹೊರಬಿದ್ದಿದೆ. ಸದ್ಯಕ್ಕೆ ಪೊಲೀಸರು ಆರೋಪಿಗಳಾದ ಭಾರತಿ, ಸುರೇಂದರ್ ಮತ್ತು ಶ್ರೀರಾಮ್ನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ರಾಮ್ ಮಲ್ಲೇಶ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿಗಳಿಂದ ವಿಮಾ ದಾಖಲೆಗಳು ಹಾಗೂ 25 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ.