ಪ್ರವಾಸಿ ತಾಣದಲ್ಲಿ ಹಠಾತ್ ಆತಂಕ: ಬ್ಯಾಗ್, ಕೊಡೆ ಎಸೆದು ಓಡಿದ ಜನರಿಂದ ಅವ್ಯವಸ್ಥೆ

ಜೋಧ್ಪುರ: ಜೋಧ್ಪುರದ ಮಂಡೋರ್ ಪಾರ್ಕ್ನಲ್ಲಿ ಜೇನು ನೊಣಗಳ ದಾಳಿ ನಡೆಸಿದ್ದು, ಜನರು ದಿಕ್ಕಾಪಾಲಾಗಿ ಓಡಿರುವ ವಿಡಿಯೋ ವೈರಲ್ ಆಗಿದೆ. ಜೋಧ್ಪುರ ಎಂದಿನಂತೆ ಪ್ರವಾಸಿಗರಿಂದ ಕಳೆಗಟ್ಟಿತ್ತು. ಮಂಡೋರ್ ಉದ್ಯಾನದ ಮುಖ್ಯ ದ್ವಾರದ ಬಳಿ ಪ್ರವಾಸಿಗರು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ, ಐತಿಹಾಸಿಕ ಸೌಂದರ್ಯವನ್ನು ಸವಿಯುತ್ತಿದ್ದರು. ಆದರೆ, ದೊಡ್ಡ ಆಪತ್ತು ಕಾದಿದೆ ಎಂದು ಯಾರೂ ಊಹಿಸಿರಲಿಲ್ಲ.
ಉದ್ಯಾನದ ಮುಖ್ಯ ದ್ವಾರದ ಬಳಿ ಇದ್ದ ಬೃಹತ್ ಜೇನುಗೂಡಿನಿಂದ ಸಾವಿರಾರು ಜೇನುನೊಣಗಳು ಒಮ್ಮೆಗೆ ಹೊರಬಂದವು. ನೋಡುನೋಡುತ್ತಿದ್ದಂತೆಯೇ ದಾಳಿ ಶುರು ಮಾಡಿದ್ದವು. ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಜನರು ತಮ್ಮ ಕೈಯಲ್ಲಿದ್ದ ಬ್ಯಾಗ್, ಕೊಡೆಗಳನ್ನು ಎಸೆದು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಸಣ್ಣ ಮಕ್ಕಳು ಮತ್ತು ವೃದ್ಧರು ಆತಂಕದಿಂದ ಕಿರುಚುತ್ತಿದ್ದರು. ಇಡೀ ಪ್ರದೇಶದಲ್ಲಿ ಅವ್ಯವಸ್ಥೆ ಉಂಟಾಯಿತು. ಜೇನುನೊಣಗಳ ಗುಂಪು ನೂರಾರು ಪ್ರವಾಸಿಗರನ್ನು ಬೆನ್ನಟ್ಟಿತು, ಹಲವರಿಗೆ ತೀವ್ರವಾಗಿ ಕಚ್ಚಿ ಗಾಯಗೊಳಿಸಿತು.
