ದಕ್ಷಿಣ ದೆಹಲಿ ಬೆಚ್ಚಿಬಿದ್ದ ಘಟನೆ: ಅಧಿಕಾರಿ ಪುತ್ರಿಯ ಮೇಲೆ ಅತ್ಯಾಚಾ*ರ, ಹ*ತ್ಯೆ.

ಹೊಸದಿಲ್ಲಿ: ಆರು ವಾರಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದ ಮನೆಗೆಲಸದ ಸಹಾಯಕ, ಮನೆಯ ಮಾಲೀಕ ಮತ್ತು ಹಿರಿಯ ಅಧಿಕಾರಿಯ ಪುತ್ರಿಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಆಕೆಯನ್ನು ಹತ್ಯೆ ಮಾಡಿದ ಧಾರುಣ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ದಕ್ಷಿಣ ದೆಹಲಿಯ ಅಧಿಕಾರಿಯ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಅತ್ಯಾಚಾರ ಎಸಗಿದ ಬಳಿಕ 22 ವರ್ಷದ ಯುವತಿಯ ತಲೆಯನ್ನು ಭಾರವಾದ ಸಾಧನದಿಂದ ಜಜ್ಜಿ ಮೊಬೈಲ್ ಫೋನ್ ಚಾರ್ಜರ್ ಕೇಬಲ್ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯ ನಡೆದ 12 ಗಂಟೆಗಳ ಒಳಗಾಗಿ ಪೊಲೀಸರು 23 ವರ್ಷದ ಯುವಕನನ್ನು ದ್ವಾರಕದಲ್ಲಿನ ಹೋಟೆಲ್ನಿಂದ ಬಂಧಿಸಿದ್ದಾರೆ. ಆರೋಪಿ ಇದೇ ಮನೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಹಣಕಾಸು ದುರ್ನಡತೆ ಹಿನ್ನೆಲೆಯಲ್ಲಿ ಆತನನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಆದರೆ ಮತ್ತೆ ಕಳವು ಮಾಡಲು ಮನೆಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯನ್ನು ಅಸ್ತವ್ಯಸ್ತಗೊಳಿಸಿ 2.5 ಲಕ್ಷ ರೂ. ನಗದು ಮತ್ತು ಅಮೂಲ್ಯ ವಸ್ತುಗಳನ್ನು ಆರೋಪಿ ಕದ್ದಿದ್ದಾನೆ. ಆರೋಪಿ ವಿರುದ್ಧ ಅತ್ಯಾಚಾರ, ಹತ್ಯೆ ಮತ್ತು ಡಕಾಯಿತಿ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ವಲಯದ ಜಂಟಿ ಪೊಲೀಸ್ ಆಯುಕ್ತ ವಿಜಯ್ ಕುಮಾರ್ ತಿಳಿಸಿದ್ದಾರೆ.
ಮುಂಜಾನೆ 6.40ರ ಸುಮಾರಿಗೆ ಘಟನೆ ನಡೆದಿದ್ದು, ಯುವತಿಯ ಪೋಷಕರು ಬೆಳಿಗ್ಗೆ ವ್ಯಾಯಾಮಕ್ಕೆ ತೆರಳಿದ್ದರು. ಮುಂಜಾನೆ 7 ಗಂಟೆಗೆ ಆಗಮಿಸುವ ಮನೆಗೆಲಸದವರಿಗಾಗಿ ಕೀಲಿಯನ್ನು ಮನೆಯ ಹೊರಗೆ ಇಡಲಾಗಿತ್ತು. ಕುಟುಂಬದವರ ಚಲನ-ವಲನಗಳ ಬಗ್ಗೆ ಅರಿವು ಹೊಂದಿದ್ದ ಆರೋಪಿ ಇದೇ ಸಮಯವನ್ನು ಬಳಸಿಕೊಂಡು, ಯುವತಿ ಓದುತ್ತಿದ್ದಾಗ ದಾಳಿ ನಡೆಸಿದ್ದಾನೆ ಎಂದು ಅವರು ವಿವರಿಸಿದ್ದಾರೆ.
ಆರೋಪಿ ಸುಮಾರು 40 ನಿಮಿಷಗಳ ಕಾಲ ಮನೆಯಲ್ಲಿದ್ದದ್ದು ಸಿಸಿಟಿವಿ ದೃಶ್ಯಾವಳಿಯಿಂದ ತಿಳಿದುಬಂದಿದೆ. ಪೋಷಕರು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಮನೆಗೆ ಬಂದು ನೋಡಿದಾಗ ಪುತ್ರಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಕೊನೆಯುಸಿರೆಳೆದಳು.