Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

17 ಕೆಜಿ ತೂಕ ಇಳಿಸಿಕೊಂಡ ಸರ್ಫರಾಝ್ ಖಾನ್: ಫಿಟ್‌ನೆಸ್ ಸುಧಾರಿಸಿಕೊಂಡು ಕ್ರಿಕೆಟ್ ಅಂಗಳದಲ್ಲಿ ಹೊಸ ಮೈಲಿಗಲ್ಲು!

Spread the love

ಹೊಸದಿಲ್ಲಿ: ಕಳೆದ ಒಂದೂವರೆ ವರ್ಷದಲ್ಲಿ 17 ಕೆಜಿ ತೂಕ ಇಳಿಸಿಕೊಂಡು ಫಿಟ್‌ನೆಸ್ ಸುಧಾರಿಸಿಕೊಂಡಿರುವ ಮುಂಬೈ ಬ್ಯಾಟರ್ ಸರ್ಫರಾಝ್ ಖಾನ್, ಎರಡು ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಸಾಯಿ ಸುದರ್ಶನ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಆಗಸ್ಟ್ 15ರಿಂದ ಶ್ರೀಲಂಕಾ ವಿರುದ್ಧ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸರ್ಫರಾಝ್ ಅವರನ್ನು ಆಯ್ಕೆ ಮಾಡಲಾಗಿದೆ.
ತಂಡಕ್ಕೆ ಮರಳುವ ಕೆಲ ದಿನಗಳ ಮೊದಲು ಸರ್ಫರಾಝ್ ಸಾಮಾಜಿಕ ಮಾಧ್ಯಮದಲ್ಲಿ, ‘ನಾನು ಹೊಂದಿಕೊಳ್ಳದಿರಬಹುದು, ಆದರೆ ನನ್ನಲ್ಲಿರುವ ಎಲ್ಲದರೊಂದಿಗೆ ಹೋರಾಡುತ್ತೇನೆ’ ಎಂದು ಬರೆದಿದ್ದರು. ತಂಡಕ್ಕೆ ಮರಳುವ ಅವಕಾಶ ಸಿಗುವ ಬಗ್ಗೆ ಖಚಿತತೆ ಇಲ್ಲದಿದ್ದರೂ, ಅವರು ತಮ್ಮಸಿದ್ಧತೆಯನ್ನು ಮುಂದುವರಿಸಿದ್ದರು.

ರಣಜಿ ಟ್ರೋಫಿಯಲ್ಲಿ ಮ್ಯಾರಥಾನ್ ತ್ರಿಶತಕ ಗಳಿಸಿದ್ದರೂ, ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಸರ್ಫರಾಝ್ ಸ್ವಲ್ಪ ಹೆಚ್ಚು ದಪ್ಪವಾಗಿದ್ದಾರೆ ಎಂಬ ಗ್ರಹಿಕೆ ಇತ್ತು. ಈ ಕಾರಣದಿಂದಲೂ ಅವರು ಟೀಕೆಗೆ ಗುರಿಯಾಗಿದ್ದರು. ಕಳೆದ ಒಂದೂವರೆ ವರ್ಷದಲ್ಲಿ 17 ಕೆಜಿ ತೂಕ ಇಳಿಸಿಕೊಂಡು ತಮ್ಮ ಫಿಟ್‌ನೆಸ್ ಸುಧಾರಿಸಿಕೊಂಡಿದ್ದಾರೆ. ಈಗ ಅವರು ಹಿಂದಿಗಿಂತ ಹೆಚ್ಚು ಚುರುಕಾಗಿ ಕಾಣುತ್ತಿದ್ದು, ಇದರಿಂದ ಅವರ T20 ಆಟವೂ ಸುಧಾರಿಸಿದೆ.
ವೈಫಲ್ಯದ ಬಳಿಕ ಕಾದಿದ್ದರು
2024ರಲ್ಲಿ ನ್ಯೂಝಿಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯಲ್ಲಿ ಸರ್ಫರಾಝ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆ ಸರಣಿಯ ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಭಾರತ ತಂಡವೇ ಸರಣಿಯಲ್ಲಿ ವಿಫಲವಾಗಿದ್ದರೂ, 28 ವರ್ಷದ ಸರ್ಫರಾಝ್ ಮೇಲೆಯೇ ಹೆಚ್ಚಿನ ಹೊಣೆಗಾರಿಕೆ ಬಿದ್ದಿತ್ತು.

ಬಳಿಕ ಅವರು ಇಂಗ್ಲೆಂಡ್ ಗೆ ತೆರಳಿದರು. ಬೆಕೆನ್‌ಹ್ಯಾಮ್ ನಲ್ಲಿ ನಡೆದ ಭಾರತ-ಭಾರತ ‘ಎ’ ನಡುವಿನ ಇಂಟ್ರಾ-ಸ್ಕಾಡ್ ಪಂದ್ಯದಲ್ಲಿ ಶತಕ ಗಳಿಸಿದರು. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ‘ಎ’ ಪರ 92 ರನ್ ಗಳಿಸಿದರು.
ಆದರೂ ರಾಷ್ಟ್ರೀಯ ತಂಡಕ್ಕೆ ಮರಳುವ ಅವಕಾಶ ಸಿಗಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತವರಿನಲ್ಲಿ ಅನುಭವಿಸಿದ ಸೋಲಿನ ಬಳಿಕ ತಂಡದ ಬ್ಯಾಟಿಂಗ್ ಕುರಿತು ಎಚ್ಚರಿಕೆಯ ಗಂಟೆ ಮೊಳಗಿತು.
ಮೂಲಗಳ ಪ್ರಕಾರ, ಗುವಾಹಟಿಯಲ್ಲಿ ನಡೆದ ಎರಡನೇ ಟೆಸ್ಟ್ ಗೂ ಮುನ್ನ ತಂಡದ ಆಡಳಿತ ಮಂಡಳಿ ಸರ್ಫರಾಝ್ ಬಗ್ಗೆ ವಿಚಾರಿಸಿತ್ತು. ಆದರೆ ಆಗ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಆಯ್ಕೆ ಸಮಿತಿ ಸಿದ್ದವಾಗಿರಲಿಲ್ಲ.

ಸಾಯಿ ಸುದರ್ಶನ್ ಅವರ ಬಲಗೈ ಹೆಬ್ಬೆರಳಿನ ಗಾಯ ಇನ್ನೂ ಗುಣವಾಗದ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿಯ ಮುಂದೆ ಮೂರು ಆಯ್ಕೆಗಳಿದ್ದವು. ರುತುರಾಜ್ ಗಾಯಕ್ವಾಡ್, ಶೇಖ್ ರಶೀದ್ ಮತ್ತು ಸರ್ಫರಾಝ್ ಖಾನ್ ಅವರ ಹೆಸರುಗಳು ಪರಿಗಣನೆಯಲ್ಲಿದ್ದವು.
ರುತುರಾಜ್ ಅವರಿಗೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 40ರ ದಶಕದ ಮಧ್ಯದ ಬ್ಯಾಟಿಂಗ್ ಸರಾಸರಿ ಇದೆ. ಶೇಖ್ ರಶೀದ್ ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ಯುವ ಆಟಗಾರ. ಈ ಇಬ್ಬರಿಗಿಂತ ಸರ್ಫರಾಝ್ ಅವರನ್ನು ಆಯ್ಕೆ ಮಾಡುವುದು ಅತ್ಯಂತ ತಾರ್ಕಿಕ ಆಯ್ಕೆ ಎಂದು ಪರಿಗಣಿಸಲಾಯಿತು.

ಪ್ರಸ್ತುತ ತಂಡದಲ್ಲಿ ನಾಯಕ ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಹೊರತುಪಡಿಸಿದರೆ, ಸ್ಪಿನ್ ಬೌಲಿಂಗ್ ಅನ್ನು ಅತ್ಯುತ್ತಮವಾಗಿ ಎದುರಿಸುವ ಬ್ಯಾಟರ್ ಸರ್ಫರಾಝ್ ಎಂಬ ಅಭಿಪ್ರಾಯವಿದೆ.
ಧ್ರುವ್ ಜುರೆಲ್ ಇತ್ತೀಚೆಗೆ ಸ್ಪಿನ್ನರ್ ಗಳ ವಿರುದ್ದ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಆಗಸ್ಟ್ 15ರಂದು ಗಾಲೆಯಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ನಲ್ಲಿ ಜುರೆಲ್ ಬದಲಿಗೆ ಸರ್ಫರಾಝ್ ಬ್ಯಾಟರ್ ಆಗಿ ಆಡುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಜುರೆಲ್ ಗಿಂತ ಸರ್ಫರಾಝ್ ಗೆ ಹೆಚ್ಚಿನ ಬಲ
ಜುರೆಲ್ ಕಳೆದ ತಿಂಗಳು ಭಾರತ ‘ಎ’ ತಂಡದ ನಾಯಕನಾಗಿ ಶ್ರೀಲಂಕಾಕ್ಕೆ ತೆರಳಿದ್ದರು. ಎರಡು ‘ಎ’ ಟೆಸ್ಟ್ ಗಳಲ್ಲಿ ದೊಡ್ಡ ಶತಕ ಮತ್ತು ಅರ್ಧಶತಕ ಗಳಿಸಿದ್ದರು. ಆದರೆ ರವಿವಾರ ಮುಕ್ತಾಯಗೊಂಡ ಅಭ್ಯಾಸ ಪಂದ್ಯದಲ್ಲಿ ಆಫ್‌ಸ್ಪಿನ್ನ‌ರ್ ವಿರುದ್ಧ ರಕ್ಷಣಾತ್ಮಕವಾಗಿ ಆಡುವಾಗ ವಿಕೆಟ್ ಕಳೆದುಕೊಂಡರು.
ಜುರೆಲ್‌ಗೆ ಆಫ್‌ಸ್ಪಿನ್ನರ್ ಗಳನ್ನು ಎದುರಿಸುವಲ್ಲಿ ಸಮಸ್ಯೆ ಇದೆ ಎಂಬುದು ಈ ಹಿಂದೆಯೂ ಕಂಡುಬಂದಿದೆ. ದಕ್ಷಿಣ ಆಫ್ರಿಕಾದ ಸೈಮನ್ ಹಾರ್ಮರ್, ಭಾರತ ವಿರುದ್ಧದ ಸರಣಿಯಲ್ಲಿ ನಾಲ್ಕು ಇನ್ನಿಂಗ್ಸ್ ಗಳಲ್ಲಿ ಮೂರು ಬಾರಿ ಜುರೆಲ್ ಅವರನ್ನು ಔಟ್ ಮಾಡಿದ್ದರು.
ಇದಕ್ಕೆ ಹೋಲಿಸಿದರೆ ಸರ್ಫರಾಝ್ ಸಾಂಪ್ರದಾಯಿಕ ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಸೇರಿದಂತೆ ಹಲವು ಬಗೆಯ ಹೊಡೆತಗಳನ್ನು ಆಡಬಲ್ಲ ಸಾಮರ್ಥ್ಯ ಅವರಿಗಿದೆ.

ಕಾಶ್ಮೀರದಲ್ಲಿ ಗಂಟೆಗಟ್ಟಲೆ ಅಭ್ಯಾಸ
IPL ಬಳಿಕ ಸರ್ಫರಾಝ್ ಮುಂಬೈ 120 ಲೀಗ್ ನಲ್ಲಿ ಆಡಿದರು. ಆಕಾಶ್ ಟೈಗರ್ಸ್ ವೆಸ್ಟರ್ನ್ ಮುಂಬೈ ಸಬರ್ಬ್ ಪರ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಮುಂಬೈನಲ್ಲಿ ಮಳೆಗಾಲ ಆರಂಭವಾದ ಬಳಿಕ ನಿಯಮಿತವಾಗಿ ತರಬೇತಿ ಪಡೆಯಲು ಕಷ್ಟವಾಯಿತು. ಹೀಗಾಗಿ ಸರ್ಫರಾಝ್ ಕಾಶ್ಮೀರಕ್ಕೆ ತೆರಳಿದರು. ಅಲ್ಲಿ ಕೆಲ ಕಾಲ ಉಳಿದುಕೊಂಡು ನೆಟ್ ಬೌಲರ್ ಗಳು ಮತ್ತು ರಾಜ್ಯ ತಂಡದ ಕೆಲವು ಆಟಗಾರರ ವಿರುದ್ಧ ಅಭ್ಯಾಸ ನಡೆಸಿದರು.
ಶೇರ್-ಎ-ಕಾಶ್ಮೀರ್ ಕ್ರೀಡಾಂಗಣದಲ್ಲೂ ಗಂಟೆಗಟ್ಟಲೆ ತರಬೇತಿ ಪಡೆದರು.
ಇದರ ಜತೆಗೆ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ನ MCA ಒಳಾಂಗಣ ಸೌಲಭ್ಯದಲ್ಲಿ ಆಸ್ಟೋ ಟರ್ಫ್ ವಿಕೆಟ್ ನಲ್ಲಿ ಕೌಶಲ್ಯ ತರಬೇತಿ ಪಡೆದರು. ಕುರ್ಲಾ ಸುತ್ತಮುತ್ತಲಿನ ಖಾಸಗಿ ಕ್ರಿಕೆಟ್ ಸೌಲಭ್ಯಗಳನ್ನು ಬಾಡಿಗೆಗೆ ಪಡೆದು ನಿಧಾನಗತಿಯ ಬೌಲರ್ ಗಳ ವಿರುದ್ಧವೂ ಅಭ್ಯಾಸ ಮಾಡಿದರು.
ಸರಿಯಾಗಿ ಸಿದ್ಧಪಡಿಸದ ಕೆಂಪುಮಣ್ಣಿನ ಪಿಚ್ ಗಳಲ್ಲಿ ಗಂಟೆಗಟ್ಟಲೆ ಬ್ಯಾಟಿಂಗ್ ನಡೆಸಿದರು. ಸ್ಪಿನ್ನರ್ ಗಳ ವಿರುದ್ಧ ತಮ್ಮ ಆಟವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು.
ಈ ಎಲ್ಲ ಸಿದ್ಧತೆಯ ಬಳಿಕ ಸರ್ಫರಾಝ್ ಮತ್ತೆ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. 2024ರಲ್ಲಿ ನ್ಯೂಝಿಲೆಂಡ್ ವಿರುದ್ಧದ ವೈಫಲ್ಯದ ಬಳಿಕ ಕೈಬಿಡಲಾಗಿದ್ದ ಅವರ ಪುನರಾಗಮನ ಈಗ ಮತ್ತಷ್ಟು ಅರ್ಥಪೂರ್ಣವಾಗಿದೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಪ್ರಬಾತ್ ಜಯಸೂರ್ಯ ಮತ್ತು ಬಳಗದ ಸ್ಪಿನ್ ದಾಳಿಯನ್ನು ಎದುರಿಸಲು ಭಾರತಕ್ಕೆ ಸರ್ಫರಾಝ್ ಅವರ ಬ್ಯಾಟಿಂಗ್ ಪ್ರಮುಖವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *