ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಪತ್ನಿತ್ವದ ಚರ್ಚೆ: ಎನ್ಸಿಪಿ ಶಾಸಕಿ ಸನಾ ಮಲಿಕ್ ಹೇಳಿಕೆಗೆ ವ್ಯಾಪಕ ವಿರೋಧ!

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಸ್ಲಿಂ ಮಹಿಳೆಯರ ಮೇಲೆ ಪರಿಣಾಮ ಬೀರುವ ವಿಷಯಗಳ ಕುರಿತು ನಡೆದ ಚರ್ಚೆ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಚರ್ಚೆಯ ಸಮಯದಲ್ಲಿ ಆಡಳಿತಾರೂಢ ಎನ್ಸಿಪಿ ಶಾಸಕಿ ಸನಾ ಮಲಿಕ್ ಅವರು, ಪಾಕಿಸ್ತಾನದಂತೆ ಭಾರತದಲ್ಲೂ ಬಹುಪತ್ನಿತ್ವವನ್ನು ಜಾರಿಗೊಳಿಸಬೇಕು ಎಂದು ಹೇಳಿದರು. ಇದಕ್ಕೆ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ತ್ರಿವಳಿ ತಲಾಖ್ ಪದ್ಧತಿಯಿಂದ ಮುಸ್ಲಿಂ ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯಗಳ ಕುರಿತು ನಡೆದ ಚರ್ಚೆಯಲ್ಲಿ ಈ ವಿವಾದ ಹುಟ್ಟಿಕೊಂಡಿದೆ. ಚರ್ಚೆಯ ಸಮಯದಲ್ಲಿ, ಪಾಕಿಸ್ತಾನದಲ್ಲಿ ಇದನ್ನು ಹೇಗೆ ಜಾರಿಗೆ ತರಲಾಗುತ್ತದೆ ಎಂಬುದರ ಕುರಿತು ಮಾತನಾಡಿದ ಮಲಿಕ್, ಪಾಕಿಸ್ತಾನವು ಕುರಾನ್ನಲ್ಲಿರುವ ಕಾನೂನುಗಳನ್ನು ಜಾರಿಗೆ ತಂದಿದೆ. ಭಾರತದಲ್ಲೂ ಕುರಾನ್ ಆಧಾರಿತ ಕಾನೂನು ಜಾರಿಗೆ ತಂದರೆ ಯಾರಿಗೂ ಸಮಸ್ಯೆಯಾಗಲ್ಲ ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.
ಇದಕ್ಕೆ ತಕ್ಷಣವೇ ತಿರುಗೇಟು ನೀಡಿದ ಬಿಜೆಪಿ ಸಚಿವ ನಿತೇಶ್ ರಾಣೆ, ನಮ್ಮ ಸಹೋದರಿ ಸನಾ ಅವರು ಹಿಂದೂ ಬಹುಸಂಖ್ಯಾತ ಭಾರತದ ವಿಧಾನಸಭೆಯಲ್ಲಿದ್ದಾರೆ, ಪಾಕಿಸ್ತಾನದ ಸಂಸತ್ತಿನಲ್ಲಿ ಅಲ್ಲ ಎಂಬುದನ್ನು ಮರೆತಿರಬೇಕು ಎಂದು ಕುಟುಕಿದರು.
ವಿವಾದಕ್ಕೆ ಸನಾ ಮಲಿಕ್ ಸ್ಪಷ್ಟೀಕರಣ
ತಮ್ಮ ಹೇಳಿಕೆ ವಿವಾದ ರೂಪ ಪಡೆಯುತ್ತಿದ್ದಂತೆ ಸನಾ ಮಲಿಕ್ ಯು-ಟರ್ನ್ ಹೊಡೆದಿದ್ದಾರೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಭಾರತೀಯ ಮುಸ್ಲಿಮರಿಗೆ ಪಾಕಿಸ್ತಾನ ಎಂದಿಗೂ ಮಾದರಿಯಲ್ಲ, ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೇವಯಾನಿ ಫರಾಂಡೆ ಮೊದಲು ಪಾಕಿಸ್ತಾನದ ಪ್ರಸ್ತಾಪ ಮಾಡಿದ್ದಕ್ಕೆ ತಾವು ಕೌಂಟರ್ ಕೊಟ್ಟಿದ್ದಾಗಿ ಹೇಳಿದ ಅವರು, ಇಸ್ಲಾಂನಲ್ಲಿ ಕುರಾನ್ ಮಾತ್ರ ನಮಗೆ ಮಾರ್ಗದರ್ಶಿ. ಭಾರತದ ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದು, ಮುಸ್ಲಿಂ ವೈಯಕ್ತಿಕ ಕಾನೂನಿನಡಿ ಬಹುಪತ್ನಿತ್ವಕ್ಕೆ ಅವಕಾಶವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.