ನವದೆಹಲಿ: ಕೇರಳಕ್ಕೆ ಮುಂಗಾರು ಮಳೆ ಅಧಿಕೃತ ಪ್ರವೇಶ; ಕರಾವಳಿ ಹಾಗೂ ದಕ್ಷಿಣ ರಾಜ್ಯಗಳಲ್ಲಿ ಭಾರಿ ಮಳೆ ಮುನ್ಸೂಚನೆ!

ದಿಲ್ಲಿ: ಮುಂಗಾರು ಮಳೆಯು ಜೂನ್ 4ರಂದು ಕೇರಳವನ್ನು ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇದರಿಂದಾಗಿ ಮುಂದಿನ ಒಂದು ವಾರದಲ್ಲಿ ದಕ್ಷಿಣದ ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಕೇರಳ ಇದರ ಮುಖ್ಯ ಪರಿಣಾಮವನ್ನು ಎದುರಿಸಲಿದೆ. ಈ ಅವಧಿಯಲ್ಲಿ ಕೇರಳದ ಕೆಲವು ಭಾಗಗಳಲ್ಲಿ ಸುಮಾರು 7ಸೆಂ.ಮೀನಿಂದ 20 ಸೆಂ.ಮೀವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಕರ್ನಾಟಕ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲೂ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ದಿಲ್ಲಿ-ಎನ್ಸಿಆರ್, ರಾಜಸ್ಥಾನ, ಪಂಜಾಬ್, ಹರ್ಯಾಣ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗಲಿದ್ದು, ಬಿಸಿಲ ಬೇಗೆಯಿಂದ ಜನರಿಗೆ ಮುಕ್ತಿ ಸಿಗಲಿದೆ. ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲೂ ಸಾಧಾರಣ ಮಳೆಯಾಗಲಿದೆ.
ಮುಂಗಾರು ಆರಂಭದೊಂದಿಗೆ ದೇಶದ ಹಲವು ಭಾಗಗಳಲ್ಲಿ ಗಂಟೆಗೆ 40 ರಿಂದ 50ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
