ಶರತ್ ಉದಯ್ ಕಾರ್ಯಕ್ರಮಕ್ಕೆ ಕಿಡಿಗೇಡಿಗಳ ಅಡ್ಡಿ: ಚಂದ್ರಬಾಬು ನಾಯ್ಡು ವಿರುದ್ಧ ವ್ಯಂಗ್ಯವಾಡಿದ್ದಕ್ಕೆ ಕ್ಷಮೆಗೆ ಪಟ್ಟು

ಬೆಂಗಳೂರು: ಆಂಧ್ರಪ್ರದೇಶದ ರಾಜಕಾರಣಿಗಳ ಕುರಿತು ಹಾಸ್ಯ ಮಾಡಿದ್ದಕ್ಕಾಗಿ ಹೈದರಾಬಾದ್ ಮೂಲದ ಸ್ಟ್ಯಾಂಡ್-ಅಪ್ ಹಾಸ್ಯನಟ ಶರತ್ ಉದಯ್ ಅವರಿಗೆ ಬೆಂಗಳೂರಿನಲ್ಲಿ ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ.
ಏಪ್ರಿಲ್ 25 ರಂದು ಕೋರಮಂಗಲದ ‘ಮಿನಿಸ್ಟ್ರಿ ಆಫ್ ಕಾಮಿಡಿ’ ಕ್ಲಬ್ನಲ್ಲಿ ಶರತ್ ಪ್ರದರ್ಶನ ನೀಡುತ್ತಿದ್ದಾಗ, ತೆಲುಗು ದೇಶಂ ಪಕ್ಷದ (ಟಿಡಿಪಿ) ಬೆಂಬಲಿಗರೆಂದು ಹೇಳಿಕೊಂಡ ಗುಂಪೊಂದು ವೇದಿಕೆಗೆ ನುಗ್ಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿತು. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಸಚಿವ ನಾರಾ ಲೋಕೇಶ್ ವಿರುದ್ಧ ಹಾಸ್ಯ ಮಾಡಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಅವರು ಹಾಸ್ಯನಟನನ್ನು ನಿಂದಿಸಿ ಬೆದರಿಕೆ ಹಾಕಿದ್ದಾರೆ.
2024ರ ಡಿಸೆಂಬರ್ನಲ್ಲಿ ಶರತ್ ಅಪ್ಲೋಡ್ ಮಾಡಿದ್ದ “ಆಂಧ್ರ ರಾಜಕೀಯ” ಎಂಬ ವಿಡಿಯೋದಲ್ಲಿ ಟಿಡಿಪಿ, ಜನಸೇನಾ ಮತ್ತು ವೈಎಸ್ಆರ್ಸಿಪಿ ನಾಯಕರ ಕುರಿತು ವ್ಯಂಗ್ಯವಾಡಲಾಗಿತ್ತು. ವಿಶೇಷವಾಗಿ ತಿರುಪತಿ ಲಡ್ಡು ವಿವಾದ ಮತ್ತು ನಾಯ್ಡು ಅವರ ಮೇಲಿನ ಹಳೆಯ ಹತ್ಯೆಯ ಯತ್ನದ ಪ್ರಸ್ತಾಪಗಳು ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿವೆ. ಇತ್ತೀಚೆಗಷ್ಟೇ ಪವನ್ ಕಲ್ಯಾಣ್ ಅವರ ಮೇಲೆ ಹಾಸ್ಯ ಮಾಡಿದ್ದಕ್ಕಾಗಿ ಇಬ್ಬರು ಹಾಸ್ಯನಟರನ್ನು ಆಂಧ್ರ ಪೊಲೀಸರು ಬಂಧಿಸಿದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ.
ತಾನು ಈಗಾಗಲೇ ಈ ವಿಡಿಯೋಗಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದೇನೆ ಎಂದು ಶರತ್ ಹೇಳಿದರೂ ಕೇಳದ ಕಿಡಿಗೇಡಿಗಳು, ಬಲವಂತವಾಗಿ ‘ಜೈ ಟಿಡಿಪಿ’ ಘೋಷಣೆ ಕೂಗುವಂತೆ ಪೀಡಿಸಿದ್ದಾರೆ. ಇದು “ಕೊನೆಯ ಎಚ್ಚರಿಕೆ” ಎಂದು ಬೆದರಿಸಿ, ಪೀಠೋಪಕರಣಗಳನ್ನು ತಳ್ಳಿ ಅಲ್ಲಿಂದ ತೆರಳಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಾಸ್ಯನಟರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದೌರ್ಜನ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
