ಮಂಗಳೂರು ಧಕ್ಕೆಗೆ ಸಿಎಂ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ!

ಮಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಳಿಗ್ಗೆ 6 ಗಂಟೆಗೆ ಸಚಿವ ಯು.ಟಿ. ಖಾದರ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಮಂಗಳೂರಿನ ಮೀನುಗಾರಿಕಾ ಬಂದರು (ಧಕ್ಕೆ) ಮತ್ತು ಅಳಿವೆಬಾಗಿಲಿಗೆ ದಿಢೀರ್ ಭೇಟಿ ನೀಡಿ, ವಾಸ್ತವ ಪರಿಸ್ಥಿತಿಯ ಖುದ್ದು ಪರಿಶೀಲನೆ ನಡೆಸಿದರು. ಖುದ್ದು ಬೋಟ್ ಹತ್ತಿ ಸಮುದ್ರ ಹಾಗೂ ಅಳಿವೆಬಾಗಿಲಿಗೆ ತೆರಳಿದ ಸಿಎಂ, ಇತ್ತೀಚೆಗೆ ಹೂಳು ತುಂಬಿ ಬೋಟ್ ಮುಳುಗಡೆಯಾಗಿದ್ದ ದುರಂತದ ಸ್ಥಳವನ್ನು ವೀಕ್ಷಿಸಿದರು. ಬಳಿಕ ಅಧಿಕಾರಿಗಳು ಬಿಡಿಸಿದ ಬ್ಲೂಪ್ರಿಂಟ್ ಪರಿಶೀಲಿಸಿ ಧಕ್ಕೆ ವಿಸ್ತರಣೆ ಮತ್ತು ಜೆಟ್ಟಿ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದರು. ಮೀನು ಮಾರುಕಟ್ಟೆಗೆ ಭೇಟಿ ನೀಡಿದ ವೇಳೆ, ಸ್ಥಳೀಯರು ಹಿಡಿದಿದ್ದ ಬೃಹತ್ ಗಾತ್ರದ ಅಂಜಲ್ (ಸುರ್ಮೆ) ಮೀನುಗಳನ್ನು ಕೈಯಲ್ಲಿ ಹಿಡಿದು ವೀಕ್ಷಿಸಿ ವ್ಯಾಪಾರಿಗಳ ಕ್ಷೇಮ ವಿಚಾರಿಸಿದರು.ತಮ್ಮ ಭೇಟಿಯ ಹಿನ್ನೆಲೆಯಲ್ಲಿ ಧಕ್ಕೆಯಲ್ಲಿ ಸಾರ್ವಜನಿಕ ಮೀನು ಮಾರಾಟ ಮತ್ತು ದೈನಂದಿನ ವಹಿವಾಟನ್ನು ಪೊಲೀಸರು ಹಾಗೂ ಅಧಿಕಾರಿಗಳು ಸ್ಥಗಿತಗೊಳಿಸಿದ್ದನ್ನು ಕಂಡು ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನನಗೆ ಯಾವುದೇ ಸೆಕ್ಯೂರಿಟಿ ಅಗತ್ಯವಿಲ್ಲ. ಇಲ್ಲಿನ ನೈಜ ವಹಿವಾಟು ಹಾಗೂ ಜನರ ತೊಂದರೆಗಳನ್ನು ನೇರವಾಗಿ ನೋಡಲು ಬಂದಿದ್ದೆ. ಆದರೆ ಅಧಿಕಾರಿಗಳು ಇಡೀ ಧಕ್ಕೆಯನ್ನೇ ಬಂದ್ ಮಾಡಿಸಿದ್ದಾರೆ. ಈ ಕೃತ್ಯದ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್ ಅವರಿಂದ ವರದಿ ಕೇಳಿದ್ದೇನೆ. ವ್ಯಾಪಾರ ಬಂದ್ ಮಾಡಿಸಿದ ಅಧಿಕಾರಿಗಳು ಯಾರೇ ಆಗಿದ್ದರೂ ಅವರನ್ನು ಇಂದೇ ಅಮಾನತು (Suspension) ಮಾಡುತ್ತೇವೆ” ಎಂದು ಮಾಧ್ಯಮಗಳ ಮುಂದೆ ಗುಡುಗಿದರು.ಶಾಶ್ವತ ಡ್ರೆಜ್ಜಿಂಗ್ ವ್ಯವಸ್ಥೆ: ಅಳಿವೆಬಾಗಿಲಿನ ಹೂಳು ತೆರವುಗೊಳಿಸಲು ಸರ್ಕಾರವೇ ಡ್ರೆಜ್ಜರ್ ಯಂತ್ರವನ್ನು ಲೀಸ್ಗೆ ಪಡೆಯುವುದು ಅಥವಾ ಸ್ವಂತವಾಗಿ ಖರೀದಿಸುವ ಬಗ್ಗೆ ಶೀಘ್ರವೇ ತೀರ್ಮಾನಿಸಲಾಗುವುದು. ಹೂಳನ್ನು ಜಾಗ ವಿಸ್ತರಣೆಗೆ ಬಳಸುವ ಕುರಿತು ಕೇಂದ್ರದ ತಾಂತ್ರಿಕ ಸಮಿತಿ ಸಲಹೆ ಪಡೆಯಲಾಗುವುದು. ಮೀನುಗಾರರಿಗೆ ಮೂಲಸೌಕರ್ಯ: ಮೀನುಗಾರ ಮಹಿಳೆಯರಿಗೆ ಸುಸಜ್ಜಿತ ಶೌಚಾಲಯ, ಪ್ರಾಥಮಿಕ ಆರೋಗ್ಯ ತಪಾಸಣಾ ಕೇಂದ್ರ ಹಾಗೂ ಸಮುದ್ರದಲ್ಲಿ ತುರ್ತು ಸೇವೆಗೆ ಬೋಟ್ ಆಂಬುಲೆನ್ಸ್ ವ್ಯವಸ್ಥೆ.ಒತ್ತುವರಿ ತೆರವು: ಧಕ್ಕೆ ಸುತ್ತಮುತ್ತ ರಸ್ತೆ ಬ್ಲಾಕ್ ಮಾಡಿ ಅಕ್ರಮವಾಗಿ ಕಾಂಪೌಂಡ್ ಹಾಕಿಕೊಂಡು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗಗಳನ್ನು ಮುಲಾಜಿಲ್ಲದೆ ವಶಪಡಿಸಿಕೊಳ್ಳಲು ಆದೇಶ.
ಫಿಶರೀಸ್ ವಿವಿ ಉನ್ನತೀಕರಣ: ಮಂಗಳೂರಿನ ಫಿಶರೀಸ್ ಕಾಲೇಜನ್ನು ವಿಶ್ವವಿದ್ಯಾಲಯವಾಗಿ (Fisheries University) ಉನ್ನತೀಕರಿಸಿ, ಪ್ರವೇಶ ಮಿತಿಯನ್ನು 200 ಸೀಟುಗಳಿಗೆ ಹೆಚ್ಚಿಸಲು ಸಂಪುಟ ಸಭೆಯಲ್ಲಿ ನಿರ್ಧಾರ.
ಕಸ್ತೂರಿ ರಂಗನ್ ವರದಿ ವಿರುದ್ಧ ಅಧಿವೇಶನ: ಕಸ್ತೂರಿ ರಂಗನ್ ವರದಿಯಿಂದ ಮಲೆನಾಡು ಹಾಗೂ ಕರಾವಳಿ ಜನರಿಗೆ ಅನ್ಯಾಯವಾಗುತ್ತಿದ್ದು, ಈ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸೋಮವಾರ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.
