ಮಂಗಳೂರು: ಕದ್ರಿ ಮಠದಲ್ಲಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರಿನ ಕದ್ರಿ ಶ್ರೀ ಯೋಗೇಶ್ವರ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ಐದು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ‘ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ’ದ ಅಧಿಕೃತ ಆಮಂತ್ರಣ ಪತ್ರಿಕೆಯನ್ನು ಮಠದಲ್ಲಿ ಬಿಡುಗಡೆಗೊಳಿಸಲಾಯಿತು. ಜಗದಾಚಾರ್ಯ ಸ್ವಾಮಿ ಅಖಿಲೇಶ್ಜೀ ಮಹಾರಾಜ್ ಸೇವಾ ಸಂಸ್ಥಾನ (ರಿ.) ಹಾಗೂ ದ ಸ್ಯಾಫ್ರನ್ ಫ್ರಂಟ್ ವತಿಯಿಂದ ಈ ಧಾರ್ಮಿಕ ಮಹೋತ್ಸವವನ್ನು ಆಯೋಜಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಯೋಜನೆಗೊಂಡಿರುವ ಈ ಬೃಹತ್ ಮಹಾಯಾಗವು ಆಗಸ್ಟ್ 24 ರಿಂದ 28 ರವರೆಗೆ ನಡೆಯಲಿದೆ. ಉತ್ತರ ಪ್ರದೇಶದ ವಾರಣಾಸಿಯ (ವಿಂಧ್ಯಾಚಲ) ಪ್ರಸಿದ್ಧ ಪುರೋಹಿತರಾದ ಆಚಾರ್ಯ ಶ್ರೀ ಲವಕುಶ್ ಮಿಶ್ರಾಜಿ ಅವರ ದಿವ್ಯ ಪೌರೋಹಿತ್ಯದಲ್ಲಿ ವಿವಿಧ ವೈದಿಕ ವಿಧಿವಿಧಾನಗಳು ಹಾಗೂ ಹೋಮ-ಹವನಗಳು ನೆರವೇರಲಿವೆ. ಸಮಾಜದಲ್ಲಿ ಶಾಂತಿ, ಆರೋಗ್ಯ, ಸೌಹಾರ್ದತೆ ಮತ್ತು ಸಮೃದ್ಧಿಯನ್ನು ನೆಲೆಗೊಳಿಸುವುದು ಈ ಮಹಾಯಾಗದ ಮುಖ್ಯ ಸದುದ್ದೇಶವಾಗಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಗೌರವಾಧ್ಯಕ್ಷರಾದ ಶ್ರೀಮತಿ ಡಾ. ಆಶಾ ಜ್ಯೋತಿ ರೈ ಹಾಗೂ ಶ್ರೀ ಎಚ್.ಕೆ. ಪುರುಷೋತ್ತಮ್, ಪ್ರಧಾನ ಸಂಚಾಲಕರಾದ ಶ್ರೀ ರಾಜೇಶ್ ಪವಿತ್ರನ್, ಉಪಾಧ್ಯಕ್ಷರಾದ ಶ್ರೀ ಸತ್ಯಜಿತ್ ಸುರತ್ಕಲ್, ಶ್ರೀ ಡಾ. ಕಿರಣ್ . ಕಾರ್ಯಾಧ್ಯಕ್ಷರಾದ ಶ್ರೀ ರಾಘವೇಂದ್ರ ರಾವ್ ವಕೀಲರು ,ಶ್ರೀ ದಿನಕರ ಶೆಟ್ಟಿ ವಕೀಲರು, ಶ್ರೀ ವರ್ಣಿತ್ ಶೆಟ್ಟಿ ಮತ್ತು ಶ್ರೀ ಮಧುಸೂದನ್, ಸಂಘಟನಾ ಕಾರ್ಯಾಧ್ಯಕ್ಷರಾದ ಶ್ರೀ ಡಾ. ಎಲ್.ಕೆ. ಸುವರ್ಣ ,ಸಂಚಾಲಕರಾದ ಶ್ರೀ ಸಿ. ಆರ್. ಕುಂಬ್ಳೆ ಮತ್ತು ಮಹಿಳಾ ವಿಭಾಗ ಸಂಚಾಲಕರಾದ ಶ್ರೀಮತಿ ಮಂಜುಳಾ ನಾಯಕ್ ಹಾಗೂ ಶ್ರೀಮತಿ ಚಂದ್ರಕಲಾ ರಾವ್ ಸೇರಿದಂತೆ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.
ಆಗಸ್ಟ್ 24 ರಂದು ಬೆಳಿಗ್ಗೆ 8 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಕದ್ರಿ ಶ್ರೀ ಯೋಗೇಶ್ವರ ಮಠದವರೆಗೆ ಅತ್ಯಂತ ವಿಜೃಂಭಣೆಯಿಂದ ಕಲಶಯಾತ್ರೆ ನಡೆಯಲಿದೆ. ನಂತರದ ದಿನಗಳಲ್ಲಿ ನಿತ್ಯವೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಆಗಸ್ಟ್ 28 ರಂದು ಪೂರ್ಣಾಹುತಿಯೊಂದಿಗೆ ಮಹಾಯಾಗವು ಸಂಪನ್ನಗೊಳ್ಳಲಿದೆ.
ಯಾವುದೇ ಜಾತಿ, ಮತ ಅಥವಾ ವರ್ಗದ ಭೇದವಿಲ್ಲದೆ ಎಲ್ಲರೂ ಒಂದಾಗಿ ಈ ಯಜ್ಞದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿ, ಶ್ರೀ ಲಕ್ಷ್ಮೀನಾರಾಯಣರ ಅನುಗ್ರಹ ಹಾಗೂ ಗುರುಗಳ ಆಶೀರ್ವಾದವನ್ನು ಪಡೆದುಕೊಳ್ಳಬೇಕೆಂದು ಆಯೋಜಕರು ವಿಶೇಷ ಮನವಿ ಮಾಡಿಕೊಂಡಿದ್ದಾರೆ.