ಮಂಗಳೂರು: ಉರ್ವ ಮಠದಕಣಿಯಲ್ಲಿ ನಡೆದ ಭಾರಿ ಕಳ್ಳತನ ಪ್ರಕರಣ ಭೇದಿಸಿದ ಬರ್ಕೆ ಪೊಲೀಸರು; ನೇಪಾಳ ಮೂಲದ ಮೂವರು ಬಂಧನ!

ಮಂಗಳೂರು : ನಗರದ ಉರ್ವ ಮಾರ್ಕೆಟ್ ಬಳಿಯ ಮಠದಕಣಿಯ ಮನೆಯೊಂದರಲ್ಲಿ ನಡೆದಿದ್ದ ಭಾರಿ ಕಳ್ಳತನ ಪ್ರಕರಣವನ್ನು ಕೇವಲ ಐದೇ ದಿನಗಳಲ್ಲಿ ಭೇದಿಸಿರುವ ಬರ್ಕೆ ಠಾಣೆಯ ಪೊಲೀಸರು, ನೇಪಾಳ ಮೂಲದ ಮೂವರು ಕುಖ್ಯಾತ ಮನೆಗಳ್ಳರನ್ನು ಬೋಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ನೇಪಾಳದ ಬಜಂಗ್ ಜಿಲ್ಲೆಯ ತಿಲಕ್ ಕುಮಾರ್ ಖಡ್ಕ (36), ಅಶೋಕ್ ರಾಜ್ (33) ಮತ್ತು ಕೈಲಾಲಿ ಜಿಲ್ಲೆಯ ದಿಪೆಂದರ್ ರಸೈಲಿ (25) ಬಂಧಿತ ಆರೋಪಿಗಳಾಗಿದ್ದಾರೆ.

ಜುಲೈ 11 ರಂದು ಸಂಜೆ ಉರ್ವ ಮಠದಕಣಿಯ ನಿವಾಸಿಗಳು ತಮ್ಮ ಮನೆಗೆ ಬೀಗ ಹಾಕಿ ವಿಟ್ಲದ ಕಡಂಬುನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಜುಲೈ 12 ರಂದು ಬೆಳಗ್ಗೆ ವಾಪಸ್ ಬಂದು ನೋಡಿದಾಗ ಕಳ್ಳರು ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ, ಸುಮಾರು 64 ಗ್ರಾಂ ಚಿನ್ನಾಭರಣ ಹಾಗೂ 25 ಸಾವಿರ ನಗದು ಸೇರಿದಂತೆ ಒಟ್ಟು 8.57 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ತನಿಖೆ ತೀವ್ರಗೊಳಿಸಿದ ಬರ್ಕೆ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿ ತಂಡವು ಶುಕ್ರವಾರ (ಜುಲೈ 17) ಮುಂಜಾನೆ ಬೋಳೂರಿನಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ವಿಚಾರಣೆ ವೇಳೆ ಈ ಗ್ಯಾಂಗ್ ಉರ್ವ ಕಳ್ಳತನದ ಸೊತ್ತುಗಳಷ್ಟೇ ಅಲ್ಲದೆ, ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಕಳವು ಮಾಡಿದ್ದ 790 ಗ್ರಾಂ ಬೆಳ್ಳಿ ಆಭರಣಗಳನ್ನೂ ಒಪ್ಪಿಕೊಂಡಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಇವರು ಕಳೆದ ಮಾರ್ಚ್ನಲ್ಲಿ ಉರ್ವಾ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ್ದ ಮನೆಗಳ್ಳತನದ ವಿಫಲ ಯತ್ನವನ್ನೂ ಒಪ್ಪಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಕರ್ನಾಟಕದ ಬೆಂಗಳೂರು, ದಾವಣಗೆರೆ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 15ಕ್ಕೂ ಹೆಚ್ಚು ಮನೆಗಳ್ಳತನ ಎಸಗಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ದೆಹಲಿ ಹಾಗೂ ಹರ್ಯಾಣ ರಾಜ್ಯಗಳಲ್ಲೂ ಈ ನೇಪಾಳಿ ಗ್ಯಾಂಗ್ ವಿರುದ್ಧ ಹತ್ತಾರು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬರ್ಕೆ ಪೊಲೀಸರ ಈ ಚಾಣಾಕ್ಷ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ.